ಮಡಿಕೇರಿ: ಗಯ್ಯಾಳಿ ಸೊಸೆ ಕಿರುಕುಳದಿಂದ ಮನನೊಂದು ಸಾವಿನ ಮನೆ ಸೇರಿದ ಅಮ್ಮ ಮಗ
ಮಡಿಕೇರಿ, ನವೆಂಬರ್ 19: ಸೊಸೆಯ ಕಿರುಕುಳಕ್ಕೆ ಮಗನ ಸ್ಥಿತಿ ನೆನೆದು ಹೆತ್ತಮ್ಮ ನೇಣಿಗೆ ಕೊರಳೊಡ್ಡಿದ್ದಾರೆ. ಅಮ್ಮನ ಸಾವನ್ನು ಕಂಡ ಮಗನೂ, ತಾಯಿಗೆ ನನ್ನಿಂದ ಈ ಸ್ಥಿತಿ ಬಂತಲ್ಲ ಎಂದು ಮರುಗಿ ಸಾವಿನ ಕದ ತಟ್ಟಿದ್ದಾನೆ.
ಈ ಘಟನೆ ನಡೆದಿರುವುದು ಮಡಿಕೇರಿಯಲ್ಲಿ. ಒಂಬತ್ತು ತಿಂಗಳ ಹಿಂದಷ್ಟೇ ಆಟೋ ಚಾಲಕ ಹರೀಶ್ಗೆ ನಳಿನಿ ಎಂಬಾಕೆ ಜೊತೆ ಮದುವೆಯಾಗಿತ್ತು. ಆದರೆ ನಳಿನಿ ಸಂಸಾರ ಮಾಡಿದ್ದು ಕೇವಲ 15 ದಿನ. ಬಳಿಕ ತಂದೆ ಮನೆ ಸೇರಿಕೊಂಡ ನಳಿನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶಕ್ಕೆ ಪೀಡಿಸುತ್ತಿದ್ದಳು. ಜೀವನಾಂಶ ಕೊಡದಿದ್ದರೆ ನಿಮ್ಮಿಬ್ಬರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡಿದ್ದಾಳೆ. ಒಂದೆರಡು ಬಾರಿ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತಿಸಿದ್ದಾಳೆ.
ಗಂಡನ ಚುಚ್ಚುಮಾತು ಸಹಿಸಲಾಗದೇ ನಾಲೆಗೆ ಹಾರಿದ ಅಮ್ಮ ಮಗಳು
ಸೋಮವಾರಪೇಟೆಯಲ್ಲಿ ಆಟೋ ಚಾಲಕನಾಗಿದ್ದ ಹರೀಶ್ ಎಂದಿನಂತೆ ಭಾನುವಾರ ಮಧ್ಯಾಹ್ನ ಮನೆಗೆ ಊಟಕ್ಕೆ ಬಂದಿದ್ದಾನೆ. ಈ ಸಂದರ್ಭ ಮನೆಯಲ್ಲಿ ತಾಯಿ ನೇಣಿಗೆ ಕೊರಳೊಡ್ಡಿದ್ದ ದೃಶ್ಯ ನೋಡಿ ಆಘಾತಗೊಂಡಿದ್ದಾನೆ. ನಂತರ ತಾನೂ ಮನೆಯ ಇನ್ನೊಂದು ಕೋಣೆಯಲ್ಲಿ ತಾಯಿ ಜೊತೆ ಸಾವಿನ ಮನೆ ಸೇರಿದ್ದಾನೆ.
ಗಂಡ ಹಾಗೂ ಅತ್ತೆ ಸಾವಿನ ಸುದ್ದಿ ತಿಳಿದು ನೋಡಲು ಬಂದ ನಳಿನಿಗೆ ಮೃತರ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮದುವೆಯಾಗಿ ಸಂಸಾರ ಮಾಡಿದ್ದಿದ್ದರೆ ನಾವು ತಾಯಿ ಮತ್ತು ಅಣ್ಣನ ಕಳೆದುಕೊಳ್ಳುತ್ತಿರಲಿಲ್ಲ. ನಾವೆಲ್ಲ ಈಗ ತಬ್ಬಲಿಗಳಾದೆವು ಎಂದು ಹರೀಶ್ ಸೋದರಿಯರು ಕಣ್ಣೀರಿಟ್ಟಿದ್ದಾರೆ.