ಸಾವಿನ ಮನೆಯಲ್ಲಿ ನೋ ಆಲ್ಕೊಹಾಲ್; ಕೊಡವ ಸಮಾಜ ತೀರ್ಮಾನ
ಮಡಿಕೇರಿ, ಡಿಸೆಂಬರ್ 2: ವೀರರ ನಾಡಾದ ರಾಜ್ಯದ ಪುಟ್ಟ ಜಿಲ್ಲೆ ಕೊಡಗು ವಿಶಿಷ್ಟ ಸಂಸ್ಕೃತಿಯಿಂದ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಚಿಗುರಿತು. ಹೀಗಾಗಿ ಜಿಲ್ಲೆಯ ಆತಿಥ್ಯಕ್ಕೂ ಒಂದಷ್ಟು ಮೆರುಗು ಬಂದಿದೆ. ಗುಡ್ಡಗಾಡು ಹಾಗೂ ಚಳಿ ಪ್ರದೇಶವಾಗಿರುವುದರಿಂದಲೋ ಏನೋ ಕೊಡಗಿನಲ್ಲಿ ಮದ್ಯದ ಸೇವನೆ ಒಂದಷ್ಟು ಜಾಸ್ತಿಯೇ ಇರುತ್ತದೆ.
ಇಲ್ಲಿ ಬಯಲು ನಾಡಿನಂತೆ ಗುಂಪು ಮನೆಗಳು ಇಲ್ಲದಿರುವುದರಿಂದ ಇಲ್ಲಿನ ಮೂಲನಿವಾಸಿ ರೈತ ಸಮುದಾಯ ಮನೆಗಳಲ್ಲೇ ಒಂದೆರಡು ಬಾಟಲಿ ಮದ್ಯವನ್ನು ಇಟ್ಟುಕೊಳ್ಳುವುದು ವಾಡಿಕೆ. ಮನೆಗೆ ಸಂಜೆಯ ನಂತರ ಅತಿಥಿಗಳು ಬಂದಲ್ಲಿ ಮದ್ಯವನ್ನು ಆಫರ್ ಮಾಡಲಾಗುವುದೂ ರೂಢಿ.
ಪೂರ್ವ ಕಾಲದ ಆಚರಣೆಯಲ್ಲಿ ಬದಲಾವಣೆ?
ಸಾಮಾನ್ಯವಾಗಿ ಕೊಡವ ಜನಾಂಗದ ಎಲ್ಲ ಕೌಟುಂಬಿಕ ಸಮಾರಂಭಗಳು, ಮದುವೆ, ನಾಮಕರಣ ಹಾಗೂ ಸಾವಿನ ಸಂದರ್ಭದಲ್ಲಿ ಬಂದ ಅತಿಥಿಗಳಿಗೆ, ನೆಂಟರಿಗೆ ಮದ್ಯವನ್ನು ನೀಡಿ ಉಪಚರಿಸಲಾಗುತ್ತದೆ. ಇದೀಗ ಕೊಡವ ಸಮಾಜದ ಹಿರಿಯರು ತಮ್ಮ ಪೂರ್ವ ಕಾಲದಿಂದ ಬಂದಿರುವ ಆಚರಣೆಗಳಲ್ಲಿ ಒಂದಷ್ಟು ಬದಲಾವಣೆಯನ್ನೂ ತರಲು ಮುಂದಾಗಿರುವುದು ಜನಾಂಗದ ಮೆಚ್ಚುಗೆಗೂ ಪಾತ್ರವಾಗಿದೆ.
ಸಂಜೆ 6 ಅಥವಾ ರಾತ್ರಿ 7 ರೊಳಗೆ ಮದ್ಯದಂಗಡಿ ಬಂದ್ ಗೆ ಆಂಧ್ರ ಸರಕಾರ ಚಿಂತನೆ
ಆರು ತಿಂಗಳ ಹಿಂದೆ ಗಂಗಾಪೂಜೆ ನಂತರ ಮದ್ಯ ನಿಷೇಧ
ಆರು ತಿಂಗಳ ಹಿಂದೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಕೊಡವ ಸಮಾಜವು ಮದುವೆಯಾದ ನಂತರ ಮಾಡುವ ಗಂಗಾ ಪೂಜೆಯ ಶಾಸ್ತ್ರದಲ್ಲಿ ಮದ್ಯದ ವಿತರಣೆಯನ್ನು ನಿಷೇಧಿಸಿ ನಿರ್ಣಯವನ್ನು ಕೈಗೊಂಡಿತ್ತು. ಶುಭ ಸಮಾರಂಭದ ದೇವತಾ ಕಾರ್ಯದಲ್ಲಿ ಮದ್ಯವನ್ನು ವಿತರಿಸುವುದು ಅಪಚಾರ ಆಗುತ್ತದೆ ಎಂಬುದು ಕೊಡವ ಸಮಾಜದ ನಿಲುವಾಗಿತ್ತು. ಈ ನಿರ್ಣಯದ ನಂತರ ಕೊಡಗಿನ ಎಲ್ಲ ಸಮಾಜಗಳೂ ಗಂಗಾ ಪೂಜೆಯ ಸಂದರ್ಭದಲ್ಲಿ ಮದ್ಯವನ್ನು ನಿಷೇಧಿಸಿವೆ.
ಸಾವಿನ ಮನೆಯಲ್ಲಿ ಮದ್ಯ ವಿತರಣೆ ನಿಷೇಧಕ್ಕೆ ಚಿಂತನೆ
ಇದೀಗ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಟಿ ಶೆಟ್ಟಿಗೇರಿಯ ಮೂಂದ್ ನಾಡ್ ಕೊಡವ ಸಮಾಜವು ಶನಿವಾರ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಾವಿನ ಮನೆಯಲ್ಲಿ ಮದ್ಯ ವಿತರಿಸುವುದನ್ನು ನಿಷೇಧಿಸುವ ನಿರ್ಣಯ ಕೈಗೊಂಡಿದೆ.
ಮತ್ತಿಳಿಸಲು ಪಾದಯಾತ್ರೆಯಲ್ಲಿ ಬಂದ ಮಹಿಳೆಯರಿಗೆ ವಿಧಾನಸೌಧದ ಬಾಗಿಲು ಬಂದ್
ಇತ್ತೀಚೆಗೆ ಸಾವಿನ ಮನೆಯಲ್ಲಿ ಮದ್ಯ ಬಳಸುವುದು ಹೆಚ್ಚಾಗುತ್ತಿದ್ದು, ಇದು ಕೊಡವ ಜನಾಂಗದ ಸಂಸ್ಕೃತಿಗೆ ಹಾಗೂ ಕೊಡವ ಜನಾಂಗಕ್ಕೆ ಧಕ್ಕೆ ತರುವಂಥದ್ದಾಗಿರುತ್ತದೆ. ಸಾವಿನ ಮನೆಯಲ್ಲಿ ಎಲ್ಲರೂ ದುಖಃದಲ್ಲಿರುವ ಸಂದರ್ಭ ಮದ್ಯ ಸೇವನೆ ಮಾಡುವುದು ಸಮಂಜಸವಲ್ಲದಿರುವುದರಿಂದ ಮದ್ಯ ಬಳಕೆಯನ್ನು ನಿಷೇಧಿಸಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅರುಣ್ ಅಪ್ಪಣ್ಣ ತಿಳಿಸಿದರು.
ಮದ್ಯ ಬಳಕೆ ಕಡಿಮೆಯಿಂದ ಉತ್ತಮ ಸಂದೇಶ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಇದರ ಬಳಕೆ ಕಡಿಮೆ ಮಾಡುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 40 ಕೊಡವ ಸಮಾಜಗಳು ಇದ್ದು, ಶೀಘ್ರದಲ್ಲೇ ಎಲ್ಲ ಕೊಡವ ಸಮಾಜಗಳೂ ಇದೇ ರೀತಿಯ ತೀರ್ಮಾನ ಕೈಗೊಳ್ಳಲಿರುವುದಾಗಿ ತಿಳಿದುಬಂದಿದೆ.