ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ ಮಳೆ; ಏನೇನು ತಯಾರಿಯಾಗಿದೆ?
ಮಡಿಕೇರಿ, ಜೂನ್ 03: ಕೊಡಗಿನಲ್ಲಿ ಮುಂಗಾರು ಜೂನ್ ತಿಂಗಳಲ್ಲಿಯೇ ಆರಂಭವಾಗುವುದು ವಾಡಿಕೆ. ಆದರೆ ಕೆಲವು ವರ್ಷಗಳಿಂದೀಚೆಗೆ ಮಳೆಯ ಆರಂಭದಲ್ಲಿಯೂ ಏರುಪೇರಾಗುತ್ತಿದ್ದು, ನಿಗದಿಯಂತೆ ಮಳೆ ಬರುತ್ತಿಲ್ಲ. ಆದರೆ ಈ ಬಾರಿ ಜೂನ್ ಆರಂಭದಿಂದಲೇ ಮಳೆ ಸುರಿಯುತ್ತಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಕಾರಣದಿಂದ ಜಿಲ್ಲಾಡಳಿತ ಈ ಸಂಬಂಧ ಈಗಲೇ ಜಾಗೃತಗೊಂಡಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡರ್, ಪೊಲೀಸ್ ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಲ್ಲದೆ, ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಕೊಡಗಿನಲ್ಲಿ ಮುಂಗಾರು ಶುರುವಾಯ್ತು, ಸಜ್ಜಾದ ಜಿಲ್ಲಾಡಳಿತ
16 ಹೋಬಳಿಗಳಲ್ಲಿ ನೋಡಲ್ ಅಧಿಕಾರಿ ನಿಯೋಜನೆ
ಜಿಲ್ಲೆಯ 16 ಹೋಬಳಿಗಳಲ್ಲಿ ಪ್ರಕೃತಿ ವಿಕೋಪ ಎದುರಿಸುವ ಸಂಬಂಧ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳ ಜೊತೆ ಎನ್ಡಿಆರ್ ಎಫ್ ತಂಡ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು. ಪ್ರಕೃತಿ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಎನ್ಡಿಆರ್ ಎಫ್ ತಂಡಕ್ಕೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದು, ಎನ್ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕ ಇಲಾಖೆ, ಹೋಂ ಗಾರ್ಡ್ ತಂಡಗಳು ಒಟ್ಟುಗೂಡಿ ಅಣಕು ಪ್ರದರ್ಶನ ಏರ್ಪಡಿಸಿ ಜಿಲ್ಲೆಯ ಜನತೆಗೆ ಪ್ರಕೃತಿ ವಿಕೋಪಗಳ ಅರಿವು ಮೂಡಿಸಿ ಭಯಪಡದಂತೆ ಧೈರ್ಯ ತುಂಬುವುದು ಸೇರಿದಂತೆ ಮತ್ತಿತರ ಅಗತ್ಯ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಚರ್ಚೆ ನಡೆಸಿದ್ದಾರೆ.
ಕಾವೇರಿ ನದಿ ಪಾತ್ರಗಳ ಪ್ರದೇಶದತ್ತ ಎಚ್ಚರಿಕೆ
ಪ್ರವಾಹ ಪೀಡಿತ ಪ್ರದೇಶಗಳಾದ ಭಾಗಮಂಡಲ, ಕೊಟ್ಟಮುಡಿ, ನೆಲ್ಯಹುದಿಕೇರಿ, ಕುಶಾಲನಗರ ಸೇರಿದಂತೆ ಕಾವೇರಿ ನದಿ ಪಾತ್ರಗಳ ಪ್ರದೇಶದತ್ತ ಎಚ್ಚರಿಕೆ ವಹಿಸಲಾಗಿದೆ. ಕಳೆದ ಬಾರಿಯ ಪ್ರವಾಹದಿಂದ ಜಲಾವೃತಗೊಂಡ ನದಿ ತಟದ ಪ್ರದೇಶಗಳ ಜನರಿಗೆ ಎಚ್ಚರಿಕೆಯ ನೋಟೀಸ್ ನೀಡಲಾಗಿದೆ. ಇನ್ನು ಭೂಕುಸಿತ ಸಂಭವಿಸುವಂತಹ ಪ್ರದೇಶಗಳಲ್ಲಿ ಕೆಲವರು ವಾಸಿಸುತ್ತಿದ್ದು ಅಂತಹವರು ಎಚ್ಚರಿಕೆಯಿಂದ ಇರಬೇಕಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿವರೆಗೆ ಸುರಿದಿರುವ ಮಳೆಯ ಪ್ರಮಾಣವನ್ನು ನೋಡುವುದಾದರೆ, ಕಳೆದ ವರ್ಷಕ್ಕಿಂತ ಈ ಬಾರಿ ಸ್ವಲ್ಪ ಹೆಚ್ಚಾಗಿಯೇ ಮಳೆ ಸುರಿದಿದೆ ಎನ್ನಬಹುದು.
ಜನವರಿಯಿಂದ ಇಲ್ಲೀವರೆಗೆ 28.64 ಮಿ.ಮೀ ಮಳೆ
ಇಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 20.23 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.02 ಮಿ.ಮೀ.ನಷ್ಟು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 28.64 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 16.81 ಮಿ.ಮೀ ಮಳೆಯಾಗಿತ್ತು.
ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆ ದಾಖಲೆ
ಜಿಲ್ಲೆಯ ವಿವಿಧೆಡೆ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ, ಅತಿ ಹೆಚ್ಚು-ಭಾಗಮಂಡಲದಲ್ಲಿ 57.4 ಮಿ.ಮೀ ಹಾಗೂ ಶ್ರೀಮಂಗಲದಲ್ಲಿ ಅತಿ ಕಡಿಮೆ 3 ಮಿ.ಮೀ. ಮಳೆ ಸುರಿದಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆಗೆ ಹೋಲಿಸಿದರೆ ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದು ಕಂಡುಬರುತ್ತಿದೆ. ಇನ್ನು 2,859 ಅಡಿ ಗರಿಷ್ಠ ಮಟ್ಟ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಸದ್ಯ 2830 ಅಡಿಯಷ್ಟು ನೀರಿದೆ. ಮಳೆ ಮುಂದುವರೆದರೆ ಈ ಬಾರಿ ಜಲಾಶಯ ಬಹುಬೇಗ ಭರ್ತಿಯಾಗುವ ಎಲ್ಲ ಲಕ್ಷಣಗಳು ಇವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2805.64 ಅಡಿಯಷ್ಟಿತ್ತು.