ಕೊಡಗಿನಲ್ಲಿ ಮತ್ತೆ ಮುಂಗಾರು ಚೇತರಿಕೆ: ಡಿಸಿಎಂನಿಂದ ಅಗತ್ಯ ಕ್ರಮದ ಭರವಸೆ
ಮಡಿಕೇರಿ, ಸೆಪ್ಟೆಂಬರ್ 4: ಕೊಡಗಿನಲ್ಲಿ ಮತ್ತೆ ಮುಂಗಾರು ಮಳೆ ಚೇತರಿಕೆ ಕಂಡಿದೆ. ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ವರುಣ ಮತ್ತೆ ಸುರಿಯತೊಡಗಿದ್ದು, ಇದೇ ರೀತಿ ಮುಂದುವರೆದರೆ ಮತ್ತೆ ಪ್ರವಾಹ ಪರಿಸ್ಥಿತಿವುಂಟಾದರೂ ಅಚ್ಚರಿ ಪಡಬೇಕಾಗಿಲ್ಲ.
ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 46.07 ಮಿ.ಮೀ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ 55 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 50.53 ಮಿ.ಮೀ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 32.67 ಮಿ.ಮೀ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿತನಕ ಈ ವರ್ಷ 2283.88 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3782.88 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1499 ಮಿ.ಮೀ.ರಷ್ಟು ಮಳೆ ಕಡಿಮೆ ಮಳೆ ಸುರಿದಿರುವುದನ್ನು ಕಾಣಬಹುದಾಗಿದೆ.
ಕರ್ನಾಟಕಕ್ಕೆ ಅನ್ಯಾಯ! ನೆರೆ ಸಂತ್ರಸ್ತರ ಕಣ್ಣೀರು ಒರೆಸದ ಮೋದಿ-ಅಮಿತ್ ಶಾ ಜೋಡಿ
ಇನ್ನು 2,859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 2858.03 ಅಡಿಯಷ್ಟು ನೀರಿದೆ. 3595 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ನದಿಗೆ 2357 ಕ್ಯುಸೆಕ್ ಮತ್ತು ನಾಲೆಗೆ 1650 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಈ ನಡುವೆ ಮಳೆಯಿಂದಾಗಿ ರಸ್ತೆ, ಸೇತುವೆ ಕುಸಿತ ಸೇರಿದಂತೆ ಹಲವು ರೀತಿಯ ಅನಾಹುತಗಳಾಗಿದ್ದು, ಮಡಿಕೇರಿ, ಕಾಟಕೇರಿ, 2ನೇ ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿತ ಕಂಡಿದೆ.
ಮಡಿಕೇರಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಬುಧವಾರ ಮಡಿಕೇರಿ-ಸಂಪಾಜೆ ಮಾರ್ಗ ರಾಷ್ಟ್ರೀಯ ಹೆದ್ದಾರಿಯನ್ನು ವೀಕ್ಷಿಸಿದ್ದಾರೆ.
ಕೊಡಗು ಮಾದರಿ ವಿಶೇಷ ಪ್ಯಾಕೇಜನ್ನು ಬೆಳ್ತಂಗಡಿಗೆ ಘೋಷಿಸಲಿ- ಅಭಯಚಂದ್ರ ಜೈನ್
ಬಳಿಕ ಮಾತನಾಡಿದ ಅವರು, "ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ರಸ್ತೆಗಳು ಕುಸಿದಿವೆ, ಸೇತುವೆಗಳು ಹದಗೆಟ್ಟಿವೆ. ರಸ್ತೆ, ಸೇತುವೆಗಳನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈಗಾಗಲೇ ಮುಖ್ಯಮಂತ್ರಿ ಅವರು 536 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ನ್ನು ಘೋಷಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿಯಾಗಿ 58 ಕೋಟಿ ರೂ. ಬಿಡುಗಡೆ ಮಾಡಲಾಗುವುದು" ಎಂದು ಹೇಳಿದ್ದಾರೆ.
ಇದೇ ವೇಳೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ರಸ್ತೆ ಮತ್ತು ಸೇತುವೆಗಳು ಹದಗೆಡುತ್ತಿದ್ದು, ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬೇಕೆಂದು ಉಪ ಮುಖ್ಯಮಂತ್ರಿ ಅವರಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಮನವಿ ಮಾಡಿದರು.