ಮುಂಗಾರು ಪ್ರಾರಂಭ: ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ
ಮಡಿಕೇರಿ, ಜೂನ್ 9: ಕೊಡಗಿನಲ್ಲಿ ಮುಂಗಾರು ಚುರುಕುಗೊಂಡು ಪ್ರವಾಹ ಪರಿಸ್ಥಿತಿ ಉಂಟಾದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಆಗಮಿಸಿರುವ ಎನ್.ಡಿ.ಆರ್.ಎಫ್ ತಂಡ ಈಗಾಗಲೇ ಹಲವೆಡೆ ಭೇಟಿ ನೀಡಿ ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆ ನಡೆಸಿದೆ. ಜೊತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಮುಂಗಾರು ಸಮಯದಲ್ಲಿ ಪ್ರವಾಹ ಹಾಗೂ ಭೂ ಕುಸಿತದಂತಹ ದುರ್ಘಟನೆ ನಡೆದಿದ್ದು, ಇದರಿಂದ ಪ್ರಾಣ ಆಸ್ತಿ-ಪಾಸ್ತಿ ಹಾನಿ ಸಂಭವಿಸಿರುವುದರಿಂದ ಈಗ ಜಿಲ್ಲೆಯ ಜನ ಮಳೆ ಎಂದರೆ ಬೆಚ್ಚಿ ಬೀಳುವ ಪರಿಸ್ಥಿತಿ ಬಂದೊದಗಿದೆ. ಹೀಗಿರುವಾಗ ಜಿಲ್ಲಾಡಳಿತ ಎನ್.ಡಿ.ಆರ್.ಎಫ್ ತಂಡವನ್ನು ಕರೆಯಿಸಿದ್ದು, ಇವರಿಗೆ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ ಹಾಗೂ ಗೃಹ ರಕ್ಷಕ ದಳ ಸಾಥ್ ನೀಡಲಿದ್ದಾರೆ. ಇದೀಗ ಈ ರಕ್ಷಣಾ ತಂಡಗಳಿಗೆ ಮಡಿಕೇರಿ ನಗರದ ಪೊಲೀಸ್ ಮೈದಾನದಲ್ಲಿರುವ ಪೊಲೀಸ್ ಕ್ಯಾಂಟೀನ್ ಕಟ್ಟಡದ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಜಂಟಿ ತರಬೇತಿ ಕಾರ್ಯಾಗಾರ ಜೂನ್ 11 ರ ವರೆಗೆ ನಡೆಯಲಿದೆ.
ನೈರುತ್ಯ ಮುಂಗಾರು: ಕೊಡಗು, ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಪೊಲೀಸ್ ಠಾಣೆಗಳ ಮೇಲೆ ಹೆಚ್ಚಿನ ಜವಾಬ್ದಾರಿ
ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು, ""ಜಿಲ್ಲೆಯಲ್ಲಿ ಈಗಾಗಲೇ ವಿಪತ್ತು ಸಂಭವಿಸಬಹುದಾದ ಸ್ಥಳಗಳ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಪ್ರವಾಹ, ಭೂ ಕುಸಿತ ಉಂಟಾದ ಸಂದರ್ಭದಲ್ಲಿ ಸೇನೆ ಮತ್ತು ರಕ್ಷಣಾ ತಂಡಗಳು ಬರಲು ಕೆಲ ಸಮಯಾವಕಾಶ ಬೇಕಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಇದನ್ನರಿತು ಕ್ಲಿಷ್ಟಕರ ಸಂದರ್ಭ ಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಹೇಳಿದರು.
ಎರಡು ವರ್ಷದ ನಂತರ ಕೊನೆಗೂ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನೆ ಸಿಕ್ತು!
ಸ್ಥಳೀಯ ಪೊಲೀಸರನ್ನು ಹೆಚ್ಚಾಗಿ ಈ ತಂಡದಲ್ಲಿ ಬಳಸಲಾಗಿದೆ
ವಿಪತ್ತು ನಿರ್ವಹಣೆಗೆ ಎನ್.ಡಿ.ಆರ್.ಎಫ್ ಜೊತೆಗೆ ಜಿಲ್ಲೆಯ 4 ಪೊಲೀಸ್ ತಂಡವನ್ನು ನಿಯೋಜಿಸಲಾಗುತ್ತದೆ. ಪ್ರತಿ ತಂಡದಲ್ಲಿ 16 ಮಂದಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವು ಎನ್.ಡಿ.ಆರ್.ಎಫ್ ಜೊತೆಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಲಿದೆ. ಸ್ಥಳೀಯ ಪೊಲೀಸರನ್ನು ಹೆಚ್ಚಾಗಿ ಈ ತಂಡದಲ್ಲಿ ಬಳಸಲಾಗಿದೆ. ಜಿಲ್ಲೆಯ 3 ಉಪ ವಿಭಾಗಗಳಿಗೆ 3 ತಂಡವನ್ನು ನಿಯೋಜಿಸಿದ್ದು, ಮತ್ತೊಂದು ತಂಡ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದೆ. ಯಾವುದೇ ಸಂದರ್ಭದಲ್ಲಿಯೂ ತಂಡವಾಗಿಯೇ ಕಾರ್ಯನಿರ್ವಹಿಸಿ, ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಎಸ್ಪಿ ಸುಮನ್ ಡಿ.ಪನ್ನೇಕರ್ ಸಲಹೆ ನೀಡಿದರು.
ಸಮನ್ವಯತೆಯಿಂದ ಕಾರ್ಯ ನಿರ್ವಹಣೆ
ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಅನನ್ಯ ವಾಸುದೇವ ಅವರು ಮಾತನಾಡಿ, ಮುಂಗಾರು ಈಗಾಗಲೇ ಆರಂಭವಾಗಿದ್ದು, ಸಾಕಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸಮನ್ವಯತೆಯಿಂದ ಕೆಲಸ ಮಾಡಿದಲ್ಲಿ ಪ್ರಾಕೃತಿಕ ವಿಪತ್ತು ಉಂಟಾದಾಗ ಪ್ರಾಣ ಹಾನಿ ತಪ್ಪಿಸಲು ಸಾಧ್ಯವಿದೆ. ಪೊಲೀಸ್, ಪಂಚಾಯತ್ ಮತ್ತು ಎನ್.ಡಿ.ಆರ್.ಎಫ್ ತಂಡಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಗ್ರಾ.ಪಂ ಮಟ್ಟದಲ್ಲಿ ಗ್ರಾಮ ಲೆಕ್ಕಿಗರು ಸಹ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು ಎಂದರು.
ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ
ಇದೇ ವೇಳೆ ಎನ್.ಡಿ.ಆರ್.ಎಫ್ ತಂಡದ ನೇತೃತ್ವ ವಹಿಸಿರುವ ಆರ್.ಕೆ.ಉಪಾಧ್ಯ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ಅಗ್ನಿ ಶಾಮಕ, ಗೃಹ ರಕ್ಷಕ ದಳ ಮತ್ತು ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿದಲ್ಲಿ ಅತಿವೃಷ್ಠಿಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಎದುರಿಸಬಹುದಾಗಿದೆ ಎಂದರು. ಡಿವೈಎಸ್ಪಿ ದಿನೇಶ್ ಕುಮಾರ್, ಶೈಲೇಂದ್ರ, ಜಯ ಕುಮಾರ್, ಇನ್ಸ್ ಪೆಕ್ಟರ್ ಜಯರಾಂ, ಪಿಎಸ್ಐ ಶಿವಶಂಕರ್ ಚಂದ್ರಶೇಖರ್ ಮೊದಲಾದವರಿದ್ದರು.