ಕೊಡಗು; ಮುಂಗಾರು ಎದುರಿಸಲು ಸಜ್ಜಾದ ಅಧಿಕಾರಿಗಳು
ಮಡಿಕೇರಿ, ಮೇ 30; ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂತೆಂದರೆ ಕೊಡಗಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಎಲ್ಲಿ, ಏನು ಅನಾಹುತವಾಗಿ ಬಿಡುತ್ತದೋ? ಎಂಬ ಭೀತಿಯೂ ಕಾಡುತ್ತದೆ. ಹೀಗಾಗಿಯೇ ಜಿಲ್ಲಾಡಳಿತ ಮುಂಗಾರು ಆಗಮನದ ಮುನ್ನವೇ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳತ್ತ ನಿಗಾ ವಹಿಸುತ್ತದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದರೂ ಅನಾಹುತ ನಡೆಯುತ್ತಲೇ ಇದೆ. ಹೀಗಾಗಿ ಮಳೆಗಾಲದಲ್ಲಿ ಸಂಭವಿಸಬಹುದಾದ ಹಲವು ಅನಾಹುತಗಳನ್ನು ತಡೆಯಲು ಈಗಿನಿಂದಲೇ ತಯಾರಿ ಆರಂಭವಾಗಿದೆ.
ಕೊಡಗು ಜಿಲ್ಲಾಡಳಿತ ಮುಂಗಾರು ಎದುರಿಸಲು ಸನ್ನದ್ಧ
ಕೊರೊನಾದ ನಡುವೆಯೂ ಮುಂಗಾರು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ನಿರ್ದೇಶನ ನೀಡಿದ್ದಾರೆ.
ಮೇ 31ರಂದು ಕೇರಳಕ್ಕೆ ಮುಂಗಾರು ಆಗಮನ
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಎಲ್ಲ ಇಲಾಖೆಗಳು ಅಲರ್ಟ್ ಆಗಲೇಬೇಕು. ಏಕೆಂದರೆ ಒಂದು ಇಲಾಖೆಯದಷ್ಟೇ ಇಲ್ಲಿ ಜವಬ್ದಾರಿ ಅಲ್ಲ. ಎಲ್ಲಾ ಇಲಾಖೆಯೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಒಂದೇ ಸಮನೆ ಮಳೆ ಸುರಿದು ಪ್ರವಾಹ ಏರ್ಪಟ್ಟರೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಪಡೆ ಸಜ್ಜಾಗಬೇಕು.
ಜೂನ್ ಮೊದಲ ವಾರದಲ್ಲಿ ಬೆಂಗಳೂರಿಗೆ ಮುಂಗಾರು ಪ್ರವೇಶ, ಹೇಗಿರಲಿದೆ ಮಳೆ
ಅಷ್ಟೆ ಅಲ್ಲದೆ, ಗುಡ್ಡ ಕುಸಿತ, ರಸ್ತೆ ಕುಸಿತವಾದರೆ ಲೋಕೋಪಯೋಗಿ ಇಲಾಖೆ, ವಿದ್ಯುತ್ ಸಮಸ್ಯೆಯಾದರೆ ಸೆಸ್ಕ್, ಮರಬಿದ್ದರೆ ಅರಣ್ಯ ಇಲಾಖೆ, ಆಸ್ತಿಪಾಸ್ತಿಗೆ ಹಾನಿಯಾದರೆ ಕಂದಾಯ ಇಲಾಖೆ ಹೀಗೆ ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ.
ವಿದ್ಯುತ್ ಕಂಬ, ಮಾರ್ಗಗಳತ್ತ ಗಮನಹರಿಸಿ
ಮುಂದೆ ಬರಲಿರುವ ಮಳೆಗಾಲವನ್ನು ಎದುರಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದ್ದು, ಸೆಸ್ಕ್ ಇಲಾಖೆ ಅಧಿಕಾರಿಗಳು ವಿದ್ಯುತ್ ಹಳೇ ಕಂಬಗಳನ್ನು ಬದಲಿಸಬೇಕು. ವಿದ್ಯುತ್ ಮಾರ್ಗ ಮತ್ತಿತರ ಬಗ್ಗೆ ಗಮನಹರಿಸಬೇಕು. ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ಮಳೆಯಿಂದ ಬಿದ್ದ ಮರಗಳನ್ನು ಅರಣ್ಯ ಇಲಾಖೆಯವರು ತ್ವರಿತವಾಗಿ ತೆರವುಗೊಳಿಸಬೇಕು. ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಬಗ್ಗೆ ಗಮನಹರಿಸಬೇಕು. ಗುಡ್ಡ ಕುಸಿದಲ್ಲಿ ತೆರವುಗೊಳಿಸಬೇಕು. ಈ ಸಂಬಂಧ ಜೆಸಿಬಿ, ಕ್ರೇನ್, ಹಿಟಾಚಿ ಹೀಗೆ ಹಲವು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅಗತ್ಯ ಉಪಕರಣಗಳ ಸಿದ್ಧತೆ ಮಾಡಿಕೊಳ್ಳಿ
ಇನ್ನು ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾಯ ನಿರ್ವಹಿಸಬೇಕು. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರ ವಹಿಸಬೇಕು. ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಬೇಕಿರುವ ಅಗತ್ಯ ಉಪಕರಣಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಗೆ ಬರುವ ಚರಂಡಿ, ಕಾಲುವೆಗಳನ್ನು ಸ್ವಚ್ಚಗೊಳಿಸಬೇಕು. ಜಾನುವಾರು ಸಂರಕ್ಷಣೆಗೆ ಒತ್ತು ನೀಡುವಲ್ಲಿ ಗೋಶಾಲೆಗಳನ್ನು ಅಗತ್ಯ ಇರುವ ಕಡೆ ತೆರೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ
ಮಳೆಯಿಂದ ಕೃಷಿ, ತೋಟಗಾರಿಕೆ, ಕಾಫಿ ಮತ್ತಿತರ ಬೆಳೆ ಹಾನಿಯಾದಲ್ಲಿ ತಕ್ಷಣವೇ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜತೆಗೆ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಹಾರ ಕೇಂದ್ರ ತೆರೆಯಲು ಅನುಕೂಲವಾಗುವಂತೆ ಶಾಲೆಗಳಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಈ ಕೇಂದ್ರಗಳಲ್ಲಿ ಬಿಸಿ ನೀರು ಹಾಗೂ ಶೌಚಾಲಯ ಇರುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
Recommended Video
ಸಹಾಯವಾಣಿ ಕೇಂದ್ರ ಆರಂಭ
ಇನ್ನೊಂದೆಡೆ ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಿನಿಂದಲೇ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಜನರು ಹೆಚ್ಚಿನ ಮಾಹಿತಿಯನ್ನು 08272-221077, 08272-221088 ಹಾಗೂ 08272-221099 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.