ಕೊಡಗಿನ ಸೌಂದರ್ಯಕ್ಕೆ ಹೊಳಪು ನೀಡಿದ ಮುಂಗಾರುಮಳೆ
ಮಡಿಕೇರಿ, ಜೂನ್ 08: ಕೊಡಗಿನಲ್ಲಿ ಮುಂಗಾರು ಚುರುಕುಗೊಳ್ಳತೊಡಗಿದ್ದು, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಳೆ ಇದೇ ರೀತಿ ಮುಂದುವರೆದರೆ ನೀರಿನ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ಆರಂಭದಲ್ಲಿ ದುರ್ಬಲವಾಗಿರುತ್ತಿತ್ತು. ಆದರೆ ಈ ಬಾರಿ ಉತ್ತಮವಾಗಿದ್ದು, ಲಯ ಕಂಡುಕೊಳ್ಳುತ್ತಿರುವುದರಿಂದ ರೈತಾಪಿ ವರ್ಗಕ್ಕೆ ಖುಷಿತಂದಿದೆ. ಮಡಿಕೇರಿ ತಾಲೂಕಿನಲ್ಲಿ ಮಳೆ ಚುರುಕಾಗಿದೆ ಚಳಿ ಆರಂಭವಾಗಿದೆ. ಮೋಡ ಕವಿದ ವಾತಾವರಣ ಹೊಂದಿದ್ದು ಆಗಾಗ್ಗೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.
ತುಸು ಹೆಚ್ಚೇ ಆಯ್ತು, ಮಹಾನಗರಿ ಮುಂಬೈಗೆ ಮುಂಗಾರಿನ ಅಭಿಷೇಕ!
ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ಭಾಗಮಂಡಲದಲ್ಲಿ ಅತಿ ಹೆಚ್ಚು ಅಂದರೆ 143 ಮಿ.ಮೀ ಮಳೆ ಬಿದ್ದಿದ್ದರೆ ಕುಶಾಲನಗರದಲ್ಲಿ ಅತಿ ಕಡಿಮೆ 25 ಮಿ.ಮೀ. ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 64 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 37.48 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 46.92 ಮಿ.ಮೀ. ಮಳೆ ಸುರಿದಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ 404.91 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 278.64 ಮಿ.ಮೀ. ಮಳೆಯಾಗಿದ್ದನ್ನು ಸ್ಮರಿಸಬಹುದಾಗಿದೆ.
ಕೊಡಗಿನ ಪ್ರಮುಖ ಸ್ಥಳಗಳಾದ ಮಡಿಕೇರಿ ವ್ಯಾಪ್ತಿಯಲ್ಲಿ 101.20, ನಾಪೋಕ್ಲು 85.20, ಸಂಪಾಜೆ 105.20, ಭಾಗಮಂಡಲ 143.60, ವಿರಾಜಪೇಟೆ 68.60, ಹುದಿಕೇರಿ 48, ಶ್ರೀಮಂಗಲ 42.80, ಪೊನ್ನಂಪೇಟೆ 48.60, ಅಮ್ಮತಿ 40.53, ಬಾಳಲೆ 33, ಸೋಮವಾರಪೇಟೆ 34.60, ಶನಿವಾರಸಂತೆ 24.30, ಶಾಂತಳ್ಳಿ 54.60, ಕೊಡ್ಲಿಪೇಟೆ 35.40, ಕುಶಾಲನಗರ 25, ಸುಂಟಿಕೊಪ್ಪ 51 ಮಿ.ಮೀ. ಮಳೆಯಾಗಿದೆ.
ಇನ್ನು 2,859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 278
8.18 ಅಡಿಗಳಷ್ಟು ನೀರಿದೆ. 295 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಇದೇ ರೀತಿ ಮಳೆ ಮುಂದುವರೆದಿದ್ದೇ ಆದರೆ ನೀರಿನ ಒಳಹರಿವಿನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.