ಮಂಜಿನನಗರಿ ಮಡಿಕೇರಿಲಿ ಬೇರೂರಿದ ವರುಣ: ತಾಪತ್ರಯ ಒಂದೋ, ಎರಡೋ!
ಮಡಿಕೇರಿ, ಜುಲೈ 12: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಮಂಜಿನ ನಗರಿಯಲ್ಲೀಗ ವರುಣನ ಆರ್ಭಟಕ್ಕೆ ಎಲ್ಲೆ ಇಲ್ಲದಂತಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.
ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ, ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಆರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.
ಚಿತ್ರಗಳು: ಮುಗಿಲಲ್ಲಿ ಕಟ್ಟಿದ ಕಾರ್ಮೋಡ, ಇಳೆಯಲ್ಲಿ ಬಿಡದ ಮಳೆ
ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ ನಾಗರಿಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗದ ರಸ್ತೆಯಲ್ಲಿ ನೀರು ಹೆಚ್ಚಳವಾಗಿದೆ. ಭಾಗಮಂಡಲದಲ್ಲಿ ನುರಿತ ಈಜು ತಜ್ಞರು, ಗೃಹ ರಕ್ಷಕದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಪ್ರವಾಹ ಹೆಚ್ಚಾದ ಸಂದರ್ಭದಲ್ಲಿ ಬೋಟ್ ಬಳಸಿ ಅಲ್ಲಿನ ಜನರು ಹಾಗೂ ಪ್ರವಾಸಿಗರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ
ಕೊಡಗಿನ ದಕ್ಷಿಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ತಿತಿಮತಿ ರಸ್ತೆಯು ಹದಗೆಟ್ಟಿದ್ದು, ಸರಿಪಡಿಸಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಹಾಗೆಯೇ ಪೆರುಂಬಾಡಿ-ಮಾಕುಟ್ಟ ರಸ್ತೆ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸುತ್ತಿವೆ. ಹೀಗೆ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವುದರಿಂದ ಮಳೆಗೆ ಜನರ ಬದುಕು ದುಸ್ತರವಾಗಿದೆ. ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಗಮ ಸಂಚಾರ ಹಾಗೂ ಜನಜೀವನಕ್ಕೆ ಅಗತ್ಯ ಕ್ರಮಕೈಗೊಂಡಿದೆ
ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ?
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 77.97 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 1846.66 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 822.30 ಮಿ.ಮೀ ಮಳೆ ಸುರಿದಿತ್ತು.
ಜಲಾಶಯ ಭರ್ತಿಯಾಗಿದೆಯೇ?
2,859 ಅಡಿಗಳ ಹಾರಂಗಿ ಜಲಾಶಯದಲ್ಲಿ 2856.64 ಅಡಿಯನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಸದ್ಯ ಜಲಾಶಯದಲ್ಲಿ 15162 ಕ್ಯುಸೆಕ್ ಒಳಹರಿವಿದ್ದು, ನದಿಗೆ 18334 ಕ್ಯುಸೆಕ್ ಹಾಗೂ ನಾಲೆಗೆ 450 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಮಳೆ ಹಿನ್ನಲೆಯಲ್ಲಿ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ನಾಗರಿಕರಿಗೆ ಒಂದಷ್ಟು ಸೂಚನೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿ ಪಿ.ಐ.ವಿದ್ಯಾ ನೀಡಿದ್ದು, ಪಾಲಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಏನು?
ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿ, ತೊರೆ ಹಾಗೂ ಇನ್ನಿತರೆ ಜಲಮೂಲಗಳಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಳವಾಗುವ ಸಂಭವವಿದೆ. ಆದ್ದರಿಂದ ಸಾರ್ವಜನಿಕರು, ಪ್ರವಾಸಿಗರು ಈಜು ಮುಂತಾದ ಜಲಕ್ರೀಡೆಗಳಿಂದ ದೂರವಿರುವಂತೆ ಸೂಚಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು, ಸಾರ್ವಜನಿಕರು ಮತ್ತು ಸ್ಥಳೀಯರು ನದಿ, ತೊರೆ ಇತ್ಯಾದಿಗಳಿಗೆ ಇಳಿಯುವುದು ಅಪಾಯಕಾರಿಯಾಗಿದೆ ಮತ್ತು ಮರ, ಬಿದಿರು ಇತ್ಯಾದಿ ಸ್ಥಳೀಯ ನಿರ್ಮಿತ ಸಾಧನಗಳಿಂದ ನದಿಯನ್ನು ದಾಟಬಾರದು. ಸುರಕ್ಷಿತ ವಿಧಾನವಾದ ದೋಣಿ, ಬೋಟ್ ಗಳನ್ನು ನದಿ ದಾಟಲು ಬಳಸುವಂತೆ ಸಲಹೆ ನೀಡಲಾಗಿದೆ.
ಎಚ್ಚರಿಕೆಯಿಂದಿರುವಂತೆ ಸೂಚನೆ
ಮಳೆಯಿಂದ ಜಿಲ್ಲೆಯ ಜಲಾಶಯಗಳು ತುಂಬಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ತಟದಲ್ಲಿ ವಾಸವಿರುವವರು ಸದಾ ಜಾಗೃತರಾಗಿರುವುದು ಒಳ್ಳೆಯದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ನದಿ ತೊರೆ, ಜಲಪಾತ ಮುಂತಾದವುಗಳ ಸಮೀಪ ತೆರಳದೆ ಸುರಕ್ಷಿತ ಸ್ಥಳದಿಂದಲೇ ವೀಕ್ಷಿಸಬೇಕು. ಅಲ್ಲದೆ ಮರಗಳ ಕೆಳಗೆ ಮತ್ತು ಎತ್ತರವಾದ ಬರೆ ಇರುವ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದಾಗಲೀ, ತಾವು ನಿಲ್ಲುವುದಾಗಲೀ ಮಾಡಬಾರದು.
ಈ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ!
ನದಿ ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬೇಡಿ, ಸುರಕ್ಷತೆಯ ದೃಷ್ಠಿಯಿಂದ ವಾಹನ ಚಾಲಕರು ಸಾರಿಗೆ ನಿಯಮ, ರಸ್ತೆಯ ಅಂಚಿನಲ್ಲಿರುವ ಸಂಜ್ಞಾ ಫಲಕಗಳಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಕಡಿದಾದ ತಿರುವು ರಸ್ತೆಗಳಲ್ಲಿ ನಿಧಾನವಾಗಿ ಚಾಲಿಸಬೇಕು. ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ 24x7 ಕಾರ್ಯನಿರತ ಟೋಲ್ ಫ್ರೀ ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆ: 08272-221077ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.