ಚಿತ್ರಗಳು : ಕೊಡಗಿನಲ್ಲಿ ಎನ್ಡಿಆರ್ಎಫ್ ಪಡೆ ಅಣಕು ಪ್ರದರ್ಶನ
ಮಡಿಕೇರಿ, ಮೇ 30 : ಬೆಟ್ಟದಿಂದ ಹಗ್ಗ ಹಾಗೂ ಏಣಿ ಬಳಸಿ ನಾಗರಿಕರನ್ನು ರಕ್ಷಿಸುವುದು. ರಕ್ಷಣೆ ಮಾಡಿದವರಿಗೆ ಪ್ರಥಮ ಚಿಕಿತ್ಸೆ ನೀಡುವುದು, ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡುವುದು ಹೀಗೆ ವಿವಿಧ ಬಗೆಯ ರಕ್ಷಣಾ ಕಾರ್ಯಗಳ ಅಣಕು ಪ್ರದರ್ಶನ ಕೊಡಗು ಜಿಲ್ಲೆಯಲ್ಲಿ ನಡೆಯಿತು.
ಪರಿಹಾರ ಸಿಗದವರಿಗೆ ಜಿಲ್ಲಾಡಳಿತದಿಂದ ಪರಿಹಾರ ಅದಾಲತ್
ಮುಂಗಾರು ಮಳೆ ಆರಂಭವಾಗುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಗೆ ಎನ್ಡಿಆರ್ಎಫ್ ತಂಡ ಆಗಮಿಸಿದೆ. ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್ಡಿಆರ್ಎಫ್, ಅಗ್ನಿಶಾಮಕ ಇಲಾಖೆ, ಗೃಹ ರಕ್ಷಕದಳ, ಪೊಲೀಸ್ ಇಲಾಖೆ ಜಂಟಿಯಾಗಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದು ಅಣಕು ಪ್ರದರ್ಶನ ನಡೆಸಿದವು.
ಮಳೆಗಾಲ ಆರಂಭಕ್ಕೂ ಮುನ್ನ ಕೊಡಗಿಗೆ ಬಂದ ಎನ್ಡಿಆರ್ಎಫ್ ಪಡೆ
ಜೋರು ಮಳೆ, ಭೂಕುಸಿತ ಹಾಗೂ ಪ್ರವಾಹ ಉಂಟಾಗಿ ನಾಗರಿಕರು ದಿಕ್ಕು ತೋಚದಂತಾಗಿ ಪರಿತಪಿಸುವ ಸಂದರ್ಭದಲ್ಲಿ ಅವರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಹೆಬ್ಬೆಟಗೇರಿ ಮತ್ತು ಹಟ್ಟಿಹೊಳೆಯಲ್ಲಿ ಅಣಕು ಪ್ರದರ್ಶನ ನಡೆಯಿತು.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯಿತಿ ಸಿಇಓ ಕೆ.ಲಕ್ಷ್ಮಿಪ್ರಿಯ ಅವರು ಅಣಕು ಪ್ರದರ್ಶನವನ್ನು ನೂರಾರು ಜನರ ಜೊತೆ ವೀಕ್ಷಣೆ ಮಾಡಿದರು.
ಕೊಡಗಿನಲ್ಲಿ ಅಣಕು ಪ್ರದರ್ಶನ
ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್ಡಿಆರ್ಎಫ್, ಅಗ್ನಿಶಾಮಕ ಇಲಾಖೆ, ಗೃಹ ರಕ್ಷಕದಳ, ಪೊಲೀಸ್ ಇಲಾಖೆ, ಹೀಗೆ ನಾನಾ ರಕ್ಷಣಾ ತಂಡಗಳು ಪ್ರಕೃತಿ ವಿಕೋಪ ಸಂಭವಿಸಿದ ಕೊಡಗಿನಲ್ಲಿ ನಡೆಸಿದ ಅಣಕು ಪ್ರದರ್ಶನ ಜನರ ಗಮನ ಸೆಳೆಯಿತು.
ವಿವಿಧ ರಕ್ಷಣಾ ತಂತ್ರಗಳು
ಬೆಟ್ಟದಿಂದ ಕೆಳಗೆ ಹಗ್ಗ ಹಾಗೂ ಏಣಿ ಬಳಸಿ ನಾಗರಿಕರನ್ನು ರಕ್ಷಣೆ ಮಾಡುವುದು, ಬೆಟ್ಟದಿಂದ ಸಮತಟ್ಟು ಪ್ರದೇಶಕ್ಕೆ ಹಗ್ಗದ ಮೂಲಕ ಕಳುಹಿಸುವುದು, ರಕ್ಷಣೆ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವುದು ಹೀಗೆ ನಾನಾ ರೀತಿಯ ರಕ್ಷಣಾ ಕಾರ್ಯಗಳ ಪ್ರಾತ್ಯಕ್ಷಿಕೆ ನಡೆಯಿತು.
ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, 'ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಭೂಕುಸಿತ ಹಾಗೂ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿರುವ ಕ್ರಮಗಳ ಬಗ್ಗೆ ವಿವಿಧ ರಕ್ಷಣಾ ತಂಡಗಳಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ' ಎಂದರು.
ಪೊಲೀಸ್ ಇಲಾಖೆ ಸಹಕಾರ
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ, 'ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್ಡಿಆರ್ಎಫ್, ಗೃಹ ರಕ್ಷಕ ದಳ, ಅಗ್ನಿ ಶಾಮಕ ಇಲಾಖೆ ಹೀಗೆ ಹಲವು ರಕ್ಷಣಾ ತಂಡಗಳ ಜೊತೆ ಸಮನ್ವಯತೆ ಸಾಧಿಸಿ ಅಗತ್ಯ ಸಹಕಾರ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ' ಎಂದರು.
ಜಿಲ್ಲಾಧಿಕಾರಿಗಳಿಗೆ ಮಾಹಿತಿ
ಹೆಬ್ಬೆಟಗೇರಿ ಸುತ್ತಮುತ್ತಲಿನ ನಾಗರಿಕರು ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದರು. ಅಣಕು ಪ್ರದರ್ಶನ ನಂತರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರಾಜ್ಯ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ಇಲಾಖೆ, ಎನ್ಡಿಆರ್ಎಫ್ ರಕ್ಷಣಾ ತಂಡಗಳಿಂದ ಪ್ರದರ್ಶಿಸಿದ ಉಪಕರಣಗಳ ಮಾಹಿತಿ ಪಡೆದರು.