ಶೀಘ್ರದಲ್ಲೇ ಕೊಡಗಿಗೆ ಸಿಎಂ ಭೇಟಿ; ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ
ಮಡಿಕೇರಿ, ಅಕ್ಟೋಬರ್ 18: "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ ಅಕ್ಟೋಬರ್ 25 ಅಥವಾ ನವೆಂಬರ್ 3ರೊಳಗೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ಹಸ್ತಾಂತರಿಸಲಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಕೊಡಗಿನ ವಿವಿಧೆಡೆ ಸಂಭವಿಸಿದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರದಿಂದ ಪ್ರವಾಹ ಪರಿಹಾರ; ತೇಪೆ ಹಚ್ಚಿದ ರಾಜ್ಯ ಬಿಜೆಪಿ ಘಟಕ
"ಸಿಎಂ ಭೇಟಿ ನೀಡುವ ಸಂದರ್ಭ ಜಿಲ್ಲಾ ಪಂಚಾಯತಿಯ ನೂತನ ಭವನ ಉದ್ಘಾಟನೆ, ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ತೋರ ಗ್ರಾಮದಲ್ಲಿ ನಾಲ್ಕು ಮಂದಿ ಕಣ್ಮರೆಯಾಗಿದ್ದಾರೆ. ಈ ಕುಟುಂಬಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಲಿದೆ. ಈಗಾಗಲೇ ಮುಖ್ಯಮಂತ್ರಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಲು ಕ್ರಮವಹಿಸಿದ್ದಾರೆ. ಇನ್ನು ಎಂಟು ಹತ್ತು ದಿನಗಳಲ್ಲಿ ಬೆಳೆ ಪರಿಹಾರ ವಿತರಿಸಲಾಗುವುದು. ಇದುವರೆಗೆ 4.60 ಕೋಟಿ ರೂ. ಪರಿಹಾರ ನೀಡಲಾಗಿದೆ" ಎಂದು ವಿವರಿಸಿದರು.
ಪರಿಹಾರದ ಚೆಕ್ ಹಸ್ತಾಂತರ: ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಶುಕ್ರವಾರ ತೋರ ಗ್ರಾಮಕ್ಕೆ ಭೇಟಿ ನೀಡಿ ಭೂ ಕುಸಿತದಿಂದ ತಾಯಿ, ಹೆಂಡತಿ, ಎರಡು ಹೆಣ್ಣು ಮಕ್ಕಳನ್ನು ಕಳೆದುಕೊಂಡ ಪ್ರಭು ಅವರಿಗೆ ಸಾಂತ್ವನ ಹೇಳಿ ತಲಾ 4 ಲಕ್ಷ ರೂ.ಗಳ ಮೂರು ಚೆಕ್ ಹಸ್ತಾಂತರಿಸಿದರು.
ಕೊಡಗಿನ ಸಂತ್ರಸ್ತರಿಗೆ ಡಿಸೆಂಬರ್ನಲ್ಲಿ ಮನೆ ಹಸ್ತಾಂತರ; ಸೋಮಣ್ಣ ಭರವಸೆ
ಮಾಕುಟ್ಟ ರಸ್ತೆ ವೀಕ್ಷಿಸಿದ ಸೋಮಣ್ಣ: ಇದೇ ಸಂದರ್ಭ ವಿ.ಸೋಮಣ್ಣ ಅವರು ಮಾಕುಟ್ಟ ರಸ್ತೆ ವೀಕ್ಷಿಸಿದರು. ರಾಜ್ಯ ಹೆದ್ದಾರಿಯಾಗಿರುವ ಮಾಕುಟ್ಟ ರಸ್ತೆಯನ್ನು ವಿಸ್ತರಿಸಬೇಕಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯ ಯಾವುದೇ ರೀತಿಯ ವಾಹನಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಗಮನಹರಿಸಿದೆ ಎಂದು ತಿಳಿಸಿದರು. ರಾಜ್ಯ ಹೆದ್ದಾರಿಯನ್ನು ಆದ್ಯತೆ ಮೇಲೆ ನಿರ್ಮಾಣ ಮಾಡಲಾಗುವುದು ಎಂದರು.