ಪ್ರವಾಹ ಪೀಡಿತ ಕೊಡಗಿಗೆ ಸಚಿವರ ದೌಡು
ಮಡಿಕೇರಿ, ಆಗಸ್ಟ್ 22: ಪ್ರವಾಹದ ವೇಳೆ ಕಾಣಿಸಿಕೊಳ್ಳದ ಜನಪ್ರತಿನಿಧಿಗಳು ಇದೀಗ ಪ್ರವಾಹ ನಿಂತ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅದರಲ್ಲೂ ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವರು ಎದ್ದೆನೋ ಬಿದ್ದೆನೋ ಎಂಬಂತೆ ದೌಡಾಯಿಸುತ್ತಿದ್ದು, ಸಂತ್ರಸ್ತರ ಕಣ್ಣೊರೆಸುವ ಜರೂರು ತೋರಿಸುತ್ತಿದ್ದಾರೆ.
ಕಳೆದ ಎರಡು ದಿನದಿಂದ ಕೊಡಗಿನಲ್ಲಿ ವಾಸ್ತವ್ಯ ಹೂಡಿರುವ ಸಚಿವ ಸುರೇಶ್ ಕುಮಾರ್ ಅವರು ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕರ್ಣಂಗೇರಿ ಹಾಗೂ ಜಂಬೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಹಾಗೂ ಮಕ್ಕಂದೂರು ವ್ಯಾಪ್ತಿಯಲ್ಲಿ ಭೂಕುಸಿತದಿಂದ ಉಂಟಾಗಿರುವ ಪ್ರದೇಶಗಳನ್ನು, ಇಷ್ಟೇ ಅಲ್ಲದೆ, ದಿಡ್ಡಳ್ಳಿ ಗಿರಿಜನರಿಗೆ ಹಸ್ತಾಂತರಿಸಲಾಗಿರುವ ಬಸವನಹಳ್ಳಿಯ ಮನೆಗಳನ್ನು ವೀಕ್ಷಣೆ ಮಾಡಿದ್ದಾರೆ.
ಪ್ರವಾಹದ ಬಳಿಕ, ನೆಲೆ ಕಾಣಬೇಕಾದ ಬದುಕಿಗಾಗಿ ಶುರುವಾಗಿದೆ ಹುಡುಕಾಟ
ಇದೇ ವೇಳೆ ಮಾತನಾಡಿದ ಸಚಿವರು, "ಕಳೆದ ಬಾರಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕರ್ಣಂಗೇರಿಯಲ್ಲಿ 35, ಜಂಬೂರಿನಲ್ಲಿ 350ಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಸದ್ಯ ಕರ್ಣಂಗೇರಿಯಲ್ಲಿ ಮನೆಯ ಕಾಮಗಾರಿ ಪೂರ್ಣಗೊಂಡಿದೆ. ಸಿಎಂ ಜೊತೆ ಚರ್ಚಿಸಿ ಒಂದು ತಿಂಗಳಲ್ಲಿ ಮನೆಗಳನ್ನು ಹಸ್ತಾಂತರಿಸಲಾಗುವುದು. ಜಂಬೂರಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 350 ಮನೆಗಳು ಹಾಗೂ ಇನ್ಫೋಸಿಸ್ ಸಂಸ್ಥೆಯಿಂದ 200 ಮನೆಗಳನ್ನು ನಿರ್ಮಿಸಲಾಗುತ್ತಿದೆ" ಎಂದು ಹೇಳಿದರು.
ಪ್ರಸಕ್ತ ವರ್ಷದಲ್ಲಿ ತೋರ ಮತ್ತು ಕಾವೇರಿ ನದಿ ಪಾತ್ರದ ಕರಡಿಗೋಡು, ಕುಂಬಾರಗುಂಡಿ ಮತ್ತಿತರ ಕಡೆಗಳಲ್ಲಿ ಪ್ರವಾಹ ಉಂಟಾಗಿದ್ದು, ಈ ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಈ ಸಂಬಂಧ ಗ್ರಾಮಸಭೆಯಲ್ಲಿ ತೀರ್ಮಾನಿಸಿ ವರದಿ ನೀಡುವಂತೆ ಗ್ರಾ.ಪಂ.ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಈ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗುವುದು. ಜನರ ಪುನರ್ ವಸತಿ ಸಂಬಂಧ ಹತ್ತಿರದಲ್ಲಿ ಸರ್ಕಾರಿ ಜಾಗ ಗುರ್ತಿಸಲಾಗುವುದು. ಇಲ್ಲದಿದ್ದಲ್ಲಿ ಖಾಸಗಿಯವರು ಭೂಮಿ ನೀಡಲು ಮುಂದೆ ಬಂದಲ್ಲಿ ಖರೀದಿಸಲಾಗುವುದು. ಒಟ್ಟಾರೆ ಈ ಬಾರಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮನೆ ಕಟ್ಟಲು 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ
ಕಳೆದ ವರ್ಷ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಇನ್ನೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಈ ಬಾರಿಯೂ ಸಂತ್ರಸ್ತರಾದವರು ಸರ್ಕಾರದತ್ತ ದೈನೇಶಿಯಂತೆ ಮುಖಮಾಡುತ್ತಿದ್ದಾರೆ. ಇದೀಗ ಸಚಿವರು ಭೇಟಿ ನೀಡಿರುವುದರಿಂದ ಸಂತ್ರಸ್ತರಿಗೆ ಒಂದಷ್ಟು ಆತ್ಮವಿಶ್ವಾಸ ಬಂದಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.