ಮಳೆಗಾಗಿ ತಲಕಾವೇರಿಯಲ್ಲಿ ಸಚಿವ ಎಂ ಬಿ ಪಾಟೀಲ್ ವಿಶೇಷ ಪೂಜೆ
ಮಡಿಕೇರಿ, ಜೂನ್ 05 : ಉತ್ತಮ ಮಳೆಯಾಗಿ ನಾಡು ಸುಭೀಕ್ಷೆಯಾಗಲಿ ಎಂದು ಪ್ರಾರ್ಥಿಸಿ ಕರ್ನಾಟಕ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರು ಭಾನುವಾರ ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಕಾವೇರಿ ನದಿ ಉಗಮ ಸ್ಥಳ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಭಗಂಡೇಶ್ವರ ದೇಗುಲಕ್ಕೆ ತೆರಳಿ ಮಹಾ ಗಣಪತಿ, ವಿಷ್ಣು, ಸುಬ್ರಮಣ್ಯ, ಭಗಂಡೇಶ್ವರ ದೇವರುಗಳಿಗೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು.[ಕೃಷ್ಣಾ-ಕಾವೇರಿ ಪೂಜೆ ಖರ್ಚು- ವೆಚ್ಚದ ಬಗ್ಗೆ ಎಂಬಿ ಪಾಟೀಲ್ ಸ್ಪಷ್ಟನೆ]
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಅನುಕೂಲವಾಗಿ ನಾಡು ಸಮೃದ್ಧಿಯಾಗಲಿ ಎಂದರು.
ಕಾವೇರಿ ಮತ್ತು ಕೃಷ್ಣ ಎರಡು ಜೀವ ನದಿಗಳು ನಮ್ಮ ತಾಯಿ ನದಿಗಳಾಗಿವೆ. ಯಾರಿಂದ ಉಪಕಾರ ಪಡೆದಿದ್ದೇವೆ ಹಾಗೂ ಪಡೆಯುತ್ತಿದ್ದೇವೆ ಅಂತಹ ನದಿಗಳನ್ನು ಪೂಜಿಸುವುದು ಮತ್ತು ಗೌರವಿಸುವುದು ನಮ್ಮದಾಗಿದೆ.
ಪೂಜೆ ಮಾಡುವ ಬಗ್ಗೆ ಏರ್ಪಟ್ಟಿರುವ ಗೊಂದಲದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪೂಜೆಯನ್ನು ಮುಖ್ಯಮಂತ್ರಿಗಳು ಮತ್ತು ಕುಟುಂಬದವರು ಸಲ್ಲಿಸುತ್ತಾರೆ. ನಾವುಗಳು ಸಹ ಪೂಜೆ ಮಾಡುತ್ತೇವೆ, ತಾಯಿಯನ್ನು ಪೂಜಿಸಲು ಮತ್ತು ಗೌರವಿಸಲು ಯಾವುದೇ ಸಂಕೋಚವಿಲ್ಲ ಎಂದು ಹೇಳಿದರು.
ಭಾಗಮಂಡಲದಲ್ಲಿ ಮೇಲು ಸೇತುವೆ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿವೇಶನ ಮುಗಿದ ನಂತರ ಆದಷ್ಟು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ, ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದರು.