ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ದಂಡ ಕಟ್ಟಿದ ಎಂಸಿಎನ್
ಮಡಿಕೇರಿ, ಮೇ 31: ನೋ ಪಾರ್ಕಿಂಗ್ ಜಾಗದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ ಮಾಜಿ ಸಚಿವರೊಬ್ಬರು ಸಂಚಾರಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ತಮ್ಮ ವಾಕ್ಚಾತುರ್ಯದಿಂದ ವಿರೋಧ ಪಕ್ಷದ ನಾಯಕರಾಗಿ, ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರೇ ಸಂಚಾರಿ ಪೊಲೀಸರಿಗೆ ದಂಡ ತೆತ್ತವರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇ-ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್
ಮಡಿಕೇರಿ ನಗರ ಕಿಷ್ಕಿಂಧೆಯಂತಿದ್ದು, ದಿನದಿಂದ ದಿನಕ್ಕೆ ಪಟ್ಟಣದಲ್ಲಿ ವಾಹನಗಳು ಹೆಚ್ಚುತ್ತಿವೆ. ಜತೆಗೆ ಹೊರಗಿನಿಂದ ಪ್ರವಾಸಿಗರೂ ಬರುತ್ತಾರೆ. ಹೀಗಾಗಿ ನಗರದ ರಸ್ತೆಗಳಲ್ಲಿ ಯಾವುದಾದರೂ ವಾಹನವನ್ನು ನಿಲ್ಲಿಸಿಬಿಟ್ಟರಂತು ಸಂಚಾರಕ್ಕೆ ಅಡಚಣೆ ಗ್ಯಾರಂಟಿ. ಹೀಗಾಗಿ ಸದಾ ಹದ್ದಿನ ಕಣ್ಣಿಟ್ಟು ಕಾಯುವ ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದರೆ ತಕ್ಷಣವೇ ಕ್ರಮಕೊಳ್ಳುತ್ತಾರೆ.
ಅದರಂತೆ ಗುರುವಾರ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಚಾಲಿಸಿಕೊಂಡು ಬಂದಿದ್ದ ತಮ್ಮ ವಾಹನವನ್ನು ನಗರದ ಚೌಕಿ ರಸ್ತೆಯ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ವಾಹನಕ್ಕೆ ವೀಲ್ ಲಾಕ್ ಅಳವಡಿಸಿದ್ದಾರೆ. ಅಲ್ಲಿಗೆ ಬಂದ ನಾಣಯ್ಯ ಅವರು ಪೊಲೀಸರಿಗೆ ದಂಡದ ಹಣವನ್ನು ಪಾವತಿಸಿ ಅಲ್ಲಿಂದ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ.