ಕೊಡಗು:ಕೊರೊನಾದಿಂದ ಗುಣಮುಖನಾಗಿದ್ದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲು
ಮಡಿಕೇರಿ,ಏಪ್ರಿಲ್ 16: ಕೊವಿಡ್ 19ನಿಂದ ಗುಣಮುಖರಾಗಿ ಮನೆಗೆ ಸೇರಿದ್ದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಗುಣಮುಖನಾಗಿ ಮನೆಗೆ ಮರಳಿದ್ದ ವಿರಾಜಪೇಟೆ ಸಮೀಪದ ಕೆಟುಮೊಟ್ಟೆ ನಿವಾಸಿ ಜ್ವರ ಕಾಣಿಸಿಕೊಂಡ ಕಾರಣ ಬುಧವಾರ ಮಧ್ಯಾಹ್ನ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏಪ್ರಿಲ್ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ವ್ಯಕ್ತಿ ಮನೆಯಲ್ಲೇ ಇದ್ದರು. ಒಂದು ವಾರದ ನಂತರ ಆತನಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿದೆ.
ವ್ಯಕ್ತಿಯು ತನ್ನ ಮನೆಯಿಂದ ಹೊರಹೋಗಿಲ್ಲವಾದ್ದರಿಂದ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹೇಳಿದ್ದಾರೆ.
ಆಸ್ಪತ್ರೆಗೆ ತಾನಾಗಿಯೇ ದಾಖಲಾದ ವ್ಯಕ್ತಿ ಕೋವಿಡ್ -19 ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಇಂದು ದೊರೆಯುವ ಸಾಧ್ಯತೆ ಇದೆ.
ಭಾರತದಲ್ಲಿ ಕೊರೊನಾ ಹೊಸ ಪ್ರಕರಣಗಳು 12ಸಾವಿರ ಗಡಿ ದಾಟಿದೆ. ಕರ್ನಾಟಕದಲ್ಲಿ ಒಂದೇ ದಿನ 19 ಪಾಸಿಟಿವ್ ಪ್ರಕರನಗಳು ದಾಖಲಾಗಿವೆ. ಸೋಂಕಿತ ಪ್ರಕರಣಗಳು 279ಕ್ಕೆ ಏರಿಕೆಯಾಗಿದೆ.
ಎತ್ತು ಖರೀದಿಸಲು ತೆರಳಿದ ವಿರಾಜಪೇಟೆ ವ್ಯಕ್ತಿ ಹೆಣವಾಗಿ ಪತ್ತೆ
ಕೊಡಗಿನಲ್ಲಿ ಯಾವುದೂ ಕೊವಿಡ್ 19 ಪಾಸಿಟಿವ್ ಪ್ರಕರಣಗಳಿಲ್ಲ ಎಂದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಈ ಹಿಂದೆ ಗುಣಮುಖನಾಗಿದ್ದ ವ್ಯಕ್ತಿಯೊಬ್ಬರು ಪುನಃ ಜ್ವರ ಎಂದು ಹೇಳಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಹಿಂದೆ ಕೊವಿಡ್ ಪತ್ತೆಯಾಗಿದ್ದು ನಂತರ ಜಿಲ್ಲಾಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಿ ಗುಣಮುಖರಾಗಿದ್ದರು. ಇವರು ದುಬೈನಿಂದ ಮಾರ್ಚ್ 15ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಮರು ದಿವಸ ಕೊಡಗಿನ ಕೊಂಡಂಗೇರಿ ಗ್ರಾಮದ ಕೇತುಮೊಟ್ಟೆಯ ನಿವಾಸಕ್ಕೆ ಬಂದು ವಾಸ್ತವ್ಯ ಮಾಡಿದ್ದರು. ಮಾರ್ಚ್ 17ರಂದು ಕೊರೊನಾ ಲಕ್ಷಣ ಕಾಣಿಸಿಕೊಂಡು ತಾವೇ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಪ್ರಕರಣ ದೃಢಪಟ್ಟ ಮೇಲೆ ವ್ಯಕ್ತಿ ವಾಸವಿದ್ದ ಕೊಂಡಂಗೇರಿ ಗ್ರಾಮಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ತಂದಿದೆ.