ಗೋಣಿಕೊಪ್ಪಲು ಬಳಿ ಗಂಡು ಹುಲಿ ಸೆರೆ
ಮಡಿಕೇರಿ, ಮಾರ್ಚ್ 15: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಸುಳುಗೋಡುವಿನಲ್ಲಿ ಸತತ ಆರು ಗಂಟೆಯ ಕಾರ್ಯಾಚರಣೆ ನಂತರ ಗಂಡು ಹುಲಿ ಸೆರೆಯಾಗಿದೆ.
ಈ ಹುಲಿಯು ಸುಮಾರು 8 ರಿಂದ 9 ವಯಸ್ಸಿನ ಪ್ರಾಯವಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಯ ವೇಳೆಯಲ್ಲಿ ಸುಳುಗೋಡು ಗ್ರಾಮದ ಪಾಸುರ ಕಾಶಿ ಕಾರ್ಯಪ್ಪ ಎಂಬವರು, ತಮ್ಮ ಹಸುವನ್ನು ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು.
ಮಡಿಕೇರಿ ಅರಮನೆಗೆ ದುರಸ್ತಿ ಭಾಗ್ಯ: ಭರದಿಂದ ಸಾಗಿದೆ ಕಾಮಗಾರಿ
ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ತೆರಳಿದಾಗ ಭಾರಿ ಗಾತ್ರದ ಹುಲಿಯೊಂದು ಕೆರೆಯಲ್ಲಿ ನೀರು ಕುಡಿಯುತ್ತಿತ್ತು. ಇದನ್ನು ಕಂಡ ಕಾಶಿಯವರು ಗಾಬರಿಗೊಂಡು ತಮ್ಮ ಹಸುವನ್ನು ಕೆರೆಯ ಏರಿಯಿಂದಲೇ ಕರೆದುಕೊಂಡು ವಾಪಾಸಾಗಿದ್ದಾರೆ. ಅವರು ದೂರದಿಂದ ನಿಂತು ನೀರು ಕುಡಿಯುತ್ತಿದ್ದ ಹುಲಿಯನ್ನು ಗಮನಿಸಿದಾಗ, ಹುಲಿಯು ಘರ್ಜಿಸಿ ಮುಂದೆ ಹೋಗುವ ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.
ಆದರೆ ಹುಲಿಯ ಸೊಂಟದ ಭಾಗಕ್ಕೆ ತೀವ್ರ ಸ್ವರೂಪದ ನೋವು ಉಂಟಾಗಿದ್ದ ಕಾರಣ ಕೆರೆಯಲ್ಲಿ ವಿಶ್ರಾಂತಿ ಪಡೆಯತಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಸ್ಥಳಕ್ಕೆ ತೆರಳಿ ಕಾಶಿ ಕಾರ್ಯಪ್ಪ ಹಾಗೂ ಗ್ರಾಮಸ್ಥರ ಮಾಹಿತಿಪಡೆದಿದ್ದಾರೆ.
ನಂತರ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ಶ್ರೀಪತಿ, ಅರ್.ಎಫ್.ಒ. ಅಶೋಕ್ ಹುನಗುಂದ ಅವರ ಗಮನಕ್ಕೆ ತರುವ ಮೂಲಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಹುಲಿಯ ಚಲನವಲನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು.
ಸಂಗಾತಿ ಹುಡುಕಿಕೊಂಡು 2 ಸಾವಿರ ಕಿಮೀ ನಡೆದ ಹುಲಿರಾಯ
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹುಲಿಯ ಚಲನವಲನ ಬಗ್ಗೆ ಮಾಹಿತಿ ಪಡೆದು ಅರವಳಿಕೆ ಮದ್ದಿನ ಸಹಾಯದಿಂದ ಹುಲಿಯನ್ನು ಪ್ರಜ್ಞೆ ತಪ್ಪಿಸಿ, ನಂತರ ಸೆರೆ ಹಿಡಿದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.
ಎರಡು ಬಾರಿ ಅರವಳಿಕೆ ಮದ್ದನ್ನು ಪ್ರಯೋಗ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಗಾಬರಿಗೊಂಡ ಹುಲಿಯು ಭಾರೀ ಘರ್ಜನೆಯೊಂದಿಗೆ ಸಮೀಪದ ಕಾಫಿ ತೋಟವನ್ನು ಪ್ರವೇಶ ಮಾಡಿತ್ತು. ಅಂತಿಮವಾಗಿ ನುರಿತ ತಜ್ಞರು ಮೂರನೆಯ ಪ್ರಯೋಗದಲ್ಲಿ ಯಶಸ್ವಿಯಾದರು. ಗ್ರಾಮದ ಜನರು ಹುಲಿಯನ್ನು ವೀಕ್ಷಿಸಲು ಮುಗಿಬಿದ್ದರು. ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು.