ಕೂಲಿ ಕಾರ್ಮಿಕನ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಕಾಡಾನೆ
ಮಡಿಕೇರಿ, ಜುಲೈ 2: ಮಡಿಕೇರಿಯಲ್ಲಿ ಕಾಡಾನೆಯೊಂದು ಕೂಲಿ ಕಾರ್ಮಿಕನ ಮನೆಗೆ ನುಗ್ಗಿ ದಾಂದಲೆ ನಡೆಸಿದೆ. ತಮ್ಮ ಮನೆ ಬಳಿ ಆನೆ ಬರುವುದನ್ನು ಕಂಡ ನಿವಾಸಿಗಳು ಅಲ್ಲಿಂದ ಪಾರಾಗಿದ್ದಾರೆ.
ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ತಾಲೂಕಿನ ಪಾಲಿಬೆಟ್ಟಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಕೂಲಿ ಕಾರ್ಮಿಕ ಸೋಮುಣು ಚಂದ್ರ ಎನ್ನುವವರ ಮನೆಗೆ ಆನೆ ನುಗ್ಗಿ ದಾಂಧಲೆ ನಡೆಸಿದೆ. ಸೋಮುಣು ಚಂದ್ರ, ಅವರ ಪತ್ನಿ ಹಾಗೂ ಮೂವರು ಪುಟ್ಟ ಮಕ್ಕಳು ಮನೆಯಲ್ಲಿ ವಾಸವಾಗಿದ್ದು, ಆನೆಯಿಂದ ಎಲ್ಲರೂ ಪಾರಾಗಿದ್ದಾರೆ.
ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳದ ಆನೆ ಲಕ್ಷ್ಮಿ
ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆನೆ ಮನೆಯ ಪೀಠೋಪಕರಣ, ಪಾತ್ರೆಗಳನ್ನು ಹೊಡೆದು ಹಾಕಿದೆ. ಮನೆಯಲ್ಲಿ ಇದ್ದ ಆಹಾರ ಪದಾರ್ಥಗಳನ್ನು ತಿಂದು ಹಾಕಿದೆ. ಕಷ್ಟಪಟ್ಟು ಮನೆಯ ನಡೆಸುತ್ತಿದ್ದ, ಸೋಮುಣು ಚಂದ್ರ ಕುಟುಂಬಕ್ಕೆ ಇದರಿಂದ ಇನ್ನಷ್ಟು ಕಷ್ಟವಾಗಿದೆ.
ಸೋಮುಣು ಚಂದ್ರ ದಂಪತಿ ಪುಟ್ಟ ಮಕ್ಕಳನ್ನು ಹೊಂದಿದ್ದು, ಮಕ್ಕಳು ಆನೆಗೆ ತುಂಬ ಭಯಪಟ್ಟಿದ್ದಾರೆ. ಆನೆಯಿಂದ ಸೋಮುಣು ಚಂದ್ರ ಕುಟುಂಬಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.