ಮಡಿಕೇರಿ ಕೆಸರುಗದ್ದೆಯಲ್ಲಿ ಓಡಿ, ಆಡುವ ಮಜವೇ ಬೇರೆ!
ಮಡಿಕೇರಿ, ಜುಲೈ 21: ಒಂದೆಡೆ ಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ಕೆಸರುಗದ್ದೆಯನ್ನೇ ಕ್ರೀಡಾಂಗಣವಾಗಿಸಿಕೊಂಡು ಓಟ, ಹಗ್ಗಜಗ್ಗಾಟ, ಫುಟ್ಬಾಲ್, ವಾಲಿಬಾಲ್ ಹೀಗೆ ವಿವಿಧ ಕ್ರೀಡೆಗಳನ್ನಾಡಿ ಕೊಡಗಿನ ಜನ ಖುಷಿ ಪಡುತ್ತಿದ್ದಾರೆ.
ಈಗಾಗಲೇ ಹಲವೆಡೆ ಕೆಸರುಗದ್ದೆ ಕ್ರೀಡಾಕೂಟಗಳು ನಡೆದಿದ್ದರೆ, ಇನ್ನು ಹಲವೆಡೆ ನಡೆಯುತ್ತಿದೆ. ಬೇಸಿಗೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಿ ಮನರಂಜನೆ ಪಡೆದಿದ್ದವರು ಇದೀಗ ಸುರಿಯುವ ಮಳೆಯಲ್ಲಿ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳನ್ನಾಡುವ ಮೂಲಕ ತಾವು ಕ್ರೀಡಾಭಿಮಾನಿಗಳು ಎಂಬುದನ್ನು ಸಾರುತ್ತಿದ್ದಾರೆ.
ಭಾಗಮಂಡಲದಲ್ಲಿ ಭಾರೀ ಮಳೆ: ಉಕ್ಕಿದ ಕಾವೇರಿ, ಜನ ಜೀವನ ಅಸ್ತವ್ಯಸ್ತ
ಹಾಗೆನೋಡಿದರೆ ಕೊಡಗಿನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ರೀತಿಯ ಕ್ರೀಡೆಗಳು ನಡೆಯುತ್ತಿರುತ್ತವೆ. ಹಿಂದೆ ಬೇಸಿಗೆಯ ದಿನಗಳಲ್ಲಿ ಮಾತ್ರ ಕ್ರೀಡಾಕೂಟ ನಡೆಯುತ್ತಿತ್ತು. ಮಳೆಗಾಲದಲ್ಲಿ ಯಾವುದೇ ಕ್ರೀಡಾಕೂಟ ನಡೆಸಲು ತೊಂದರೆಯಾಗುತ್ತಿದ್ದ ಕಾರಣ, ಗದ್ದೆಯಲ್ಲಿ ದೊಡ್ಡ ನಾಟಿ ದಿನ ನಾಟಿ ನೆಟ್ಟು ಕೊನೆಗೆ ಅದರ ಮೇಲೆಯೇ ಓಟ ಏರ್ಪಡಿಸಲಾಗುತ್ತಿತ್ತು. ಈ ಸಂಪ್ರದಾಯ ಅನಾದಿ ಕಾಲದಿಂದಲೂ ಬಂದಿತ್ತಲ್ಲದೆ, ಗ್ರಾಮದಲ್ಲಿ ಕೆಲವೇ ಕೆಲವು ಕುಟುಂಬಗಳು ಇದನ್ನು ನಡೆಸುತ್ತಿದ್ದರು. ನಾಟಿ ಓಟವನ್ನು ನೋಡಲು ಗ್ರಾಮ ಮಾತ್ರವಲ್ಲದೆ, ದೂರದ ಊರುಗಳಿಂದ ಕ್ರೀಡಾಭಿಮಾನಿಗಳು ಬರುತ್ತಿದ್ದರು.
ನಾಟಿ ಓಟದಲ್ಲಿ ಪಾಲ್ಗೊಂಡು ಗೆಲುವು ಪಡೆಯುತ್ತಿದ್ದವನನ್ನು ಓಟಗಾರ ಎಂದು ಕರೆಯಲಾಗುತ್ತಿತ್ತು. ಆತನನ್ನು ಸೋಲಿಸಲು ಹೊಸಬರು ಗದ್ದೆಗೆ ಇಳಿಯುತ್ತಿದ್ದರು. ಹೀಗೆ ಓಡಿ ಗೆದ್ದವರಿಗೆ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಇಲ್ಲಿ ಪಡೆಯುವ ಬಹುಮಾನಕ್ಕಿಂತ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈ ಓಟದಲ್ಲಿ ಪುರುಷರಿಗೆ ಮಾತ್ರ ಅವಕಾಶವಿತ್ತಾದರೂ ಮಹಿಳೆಯರಿಗೆ ಯಾವುದೇ ಅವಕಾಶವಿರಲಿಲ್ಲ.
ಶುರುವಾಯ್ತು ಕೆಸರು ಗದ್ದೆ ಓಟ-ಆಟ
ಕಳೆದ ಎರಡು ದಶಕಗಳಿಂದೀಚೆಗೆ ಸಾಂಪ್ರದಾಯಿಕ ನಾಟಿ ಓಟವನ್ನು ಬದಿಗಿಟ್ಟು, ಅದರ ಮುಂದುವರಿದ ಭಾಗ ಎನ್ನುವಂತೆ ಕೆಸರುಗದ್ದೆ ಕ್ರೀಡಾಕೂಟವನ್ನು ಆರಂಭಿಸಲಾಗಿದ್ದು, ಈಗ ಕೊಡಗು ಜಿಲ್ಲೆಯಾದ್ಯಂತ ಕೆಸರುಗದ್ದೆ ಕ್ರೀಡೆ ಜನಪ್ರಿಯಾಗುತ್ತಿದೆ. ಇಲ್ಲಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ.
ಮಹಿಳೆಯರಿಗೂ ಅವಕಾಶ
ಈ ಎಲ್ಲ ಕ್ರೀಡಾಕೂಟಗಳಲ್ಲಿಯೂ ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಕ್ರೀಡಾಕೂಟಗಳು ಜನಪ್ರಿಯವಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಆ.12ರಂದು ಮಡಿಕೇರಿ ಸಮೀಪದ ಕಗ್ಗೋಡ್ಲುನಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದ್ದು ಬಹುಶಃ ಅಲ್ಲಿಗೆ ಕೆಸರುಗದ್ದೆ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.
ರೋಮಾಂಚನಕಾರಿ
ಈಗಾಗಲೇ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಸ್ಪರ್ಧಿಗಳು ತಯಾರಾಗುತ್ತಿದ್ದು, ತಮ್ಮದೇ ತಂಡಕಟ್ಟಿಕೊಂಡು ಅಭ್ಯಾಸದಲ್ಲಿ ನಿರತರಾಗುತ್ತಿದ್ದಾರೆ. ರೋಮಾಂಚನಕಾರಿ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ನೆರೆದವರನ್ನು ಮೈನವಿರೇಳಿಸುವುದು ಸ್ಪರ್ಧಿಗಳ ಬಯಕೆಯಾಗಿರುತ್ತದೆ. ಕೆಸರಿನಲ್ಲಿ ಬಿದ್ದು ಒದ್ದಾಡುತ್ತಾ ಗೆಲುವಿಗಾಗಿ ಹೋರಾಡುವುದನ್ನು ನೋಡುವುದೇ ರೋಮಾಂಚನಕಾರಿಯಾಗಿರುತ್ತದೆ.
ಕ್ರೀಡಾಕೂಟವೇ ಬದುಕು
ಒಟ್ಟಾರೆ ಹೇಳಬೇಕೆಂದರೆ ಬಿಸಿಲು, ಚಳಿ, ಮಳೆ ಯಾವುದೇ ಕಾಲವಾಗಿರಲಿ ಇಲ್ಲಿ ಮಾತ್ರ ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಕ್ರೀಡೆ ಬಿಟ್ಟರೆ ಇಲ್ಲಿನವರಿಗೆ ಬದುಕೇ ಇಲ್ಲ ಎಂಬಂತೆ ಕಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿದೆ ಎಂದರೆ ತಪ್ಪಾಗಲಾರದು.