ಮಡಿಕೇರಿಯ upsc ಸ್ಪರ್ಧಾಕಾಂಕ್ಷಿಗೆ ಇಂಗ್ಲಿಷ್ ನಲ್ಲಿ ಜಾತಿ ಪ್ರಮಾಣಪತ್ರ ನಿರಾಕರಣೆ
ಮಡಿಕೇರಿ, ಮಾರ್ಚ್ 04; ಮಡಿಕೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಯುಪಿಎಸ್ ಸಿ ಸ್ಪರ್ಧಾ ಆಕಾಂಕ್ಷಿಯೊಬ್ಬರಿಗೆ ಜಾತಿ ಪ್ರಮಾಣ ಪತ್ರವನ್ನು ಆಂಗ್ಲ ಭಾಷೆಯಲ್ಲಿ ನೀಡಲು ನಿರಾಕರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಡಿಕೇರಿಯ ತಹಶೀಲ್ದಾರ್ ಕಚೇರಿಯಿಂದ ಒಂದು ತಿಂಗಳ ಹಿಂದೆ ಕನ್ನಡದಲ್ಲಿ ಒಬಿಸಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ, ಇದೇ ಪ್ರಮಾಣ ಪತ್ರವನ್ನು ಇಂಗ್ಲಿಷ್ನಲ್ಲಿ ನೀಡುವಂತೆ ಅರ್ಜಿ ಸಲ್ಲಿಸಿದಾಗ, ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಯುಪಿಎಸ್ ಸಿ ಪ್ರಾಥಮಿಕ ಪರೀಕ್ಷೆ ಎದುರಿಸಲು ಸಿದ್ಧರಾಗುತ್ತಿರುವ ಯು.ಬಿ.ಮೋಕ್ಷಿತಾ ಇಂಗ್ಲಿಷ್ನಲ್ಲಿ ಒಬಿಸಿ ಪ್ರಮಾಣ ಪತ್ರ ಪಡೆಯಲು ವಿಫಲರಾಗಿದ್ದಾರೆ. ಸಂಪಾಜೆ ಹೋಬಳಿ ವ್ಯಾಪ್ತಿಯ ಮೇಲ್ಚೆಂಬು ಗ್ರಾಮದ ನಿವಾಸಿ ಊರುಬೈಲು ಕೆ.ಬಾಲಚಂದ್ರ-ಗೀತಾ ದಂಪತಿ ಮಗಳಾದ ಮೋಕ್ಷಿತಾ ಗುಜರಾತಿನ ಗೌರವ್ ಪಟೇಲ್ ಅವರನ್ನು ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ಪತಿಯೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಯುಪಿಎಸ್ ಸಿ ಪರೀಕ್ಷೆಯ ಅಭ್ಯಾಸದಲ್ಲಿ ತೊಡಗಿದ್ದಾರೆ.
ಯುಪಿಎಸ್ಸಿ ನೇಮಕಾತಿ 2020: 134 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಡಿಕೇರಿ ತಾಲೂಕು ಕಚೇರಿಯಿಂದ ಯು.ಬಿ.ಮೋಕ್ಷಿತಾ ಜನವರಿ 24ರಂದು ತಹಶೀಲ್ದಾರ್ ಪಿ.ಎಸ್.ಮಹೇಶ್ ಸಹಿ ಮಾಡಿರುವ ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ವ್ಯಾಪ್ತಿಗೆ ಬರುವ ಗೌಡ ಜಾತಿಗೆ ಸೇರಿದವರೆಂದು ಕನ್ನಡದಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಎಂದು ಪ್ರಮಾಣ ಪತ್ರದಲ್ಲಿ ದೃಢೀಕರಿಸಲಾಗಿದೆ.
ಯುಪಿಎಸ್ ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೇಂದ್ರ ಒಬಿಸಿ ಪ್ರಮಾಣ ಪತ್ರ ಆಂಗ್ಲ ಭಾಷೆಯಲ್ಲಿ ಬೇಕೆಂದು ಮೋಕ್ಷಿತಾ ಫೆಬ್ರವರಿ 24ರಂದು ಮಡಿಕೇರಿ ತಹಶೀಲ್ದಾರ್ ಕಚೇರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 3ರೊಳಗೆ ಪ್ರಮಾಣ ಪತ್ರ ಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಕನ್ನಡ ಭಾಷೆಯಲ್ಲಿ ಪ್ರಮಾಣ ಪತ್ರ ನೀಡುವಾಗ ಇಲ್ಲದ ತೊಡಕು, ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ಪತ್ರ ನೀಡಲು ಕೋರಿದಾಗ ಎದುರಾಗಿದೆ. ಪತಿಯ ಆದಾಯದ ಅಧಿಕೃತ ದಾಖಲೆ ಸಲ್ಲಿಸಿದ್ದಲ್ಲಿ, ಅದನ್ನು ಪರಿಶೀಲಿಸಿ, ಪ್ರಮಾಣ ಪತ್ರ ನೀಡಲಾಗುವುದೆಂದು ತಹಶೀಲ್ದಾರ್ ಪಿ.ಎಸ್. ಮಹೇಶ್ ಭರವಸೆ ನೀಡಿದ್ದರು.
ಒಬಿಸಿ ಪ್ರಮಾಣ ಪತ್ರ ಪಡೆಯಲು ಪತಿಯ ಆದಾಯದ ಅಗತ್ಯ ಇಲ್ಲ ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ, ಪತಿಯ ಆದಾಯದ ಮಾಹಿತಿ ಕೇಳುತ್ತಿದ್ದಾರೆ. ಇಂದಿಗೂ ನನ್ನ ಎಲ್ಲ ದಾಖಲಾತಿಗಳು ಮೇಲ್ ಚೆಂಬು ಗ್ರಾಮದ ವಿಳಾಸದನ್ವಯ ಇದೆ. ಪಡಿತರ ಚೀಟಿ, ಆಧಾರ ಕಾರ್ಡ್ ಎಲ್ಲವೂ ತಂದೆ ಹೆಸರಿನೊಂದಿಗೆ ಇದೆ. ಗುಜರಾತಿನಲ್ಲಿರುವ ಪತಿಯ ವಿಳಾಸದ ಯಾವ ದಾಖಲೆಯೂ ಮಾಡಿಸಿಲ್ಲ ಎಂದು ಮೋಕ್ಷಿತಾ ಹೇಳುತ್ತಾರೆ.
ಮೇಲ್ಚೆಂಬು ಗ್ರಾಮದಲ್ಲಿ ನೆಲೆಸಿಲ್ಲ ಎಂದು ಸಂಪಾಜೆ ಗ್ರಾಮಲೆಕ್ಕಿಗರು ಮೋಕ್ಷಿತಾ ಅರ್ಜಿ ತಿರಸ್ಕೃರಿಸಿ, ತಾಲೂಕು ಕಚೇರಿಗೆ ರವಾನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲು, ಸಂಪಾಜೆ ಗ್ರಾಮ ನಿರೀಕ್ಷಕರು ಪತಿಯ ಆದಾಯ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಮೇಲ್ ಚೆಂಬು ನಿವಾಸಿಯಲ್ಲ ಎಂದು ಯು.ಬಿ.ಮೋಕ್ಷಿತಾ ಅರ್ಜಿ ತಿರಸ್ಕರಿಸುವುದಾದಲ್ಲಿ ಜನವರಿ 24 ರಂದು ಮಡಿಕೇರಿ ತಹಶೀಲ್ದಾರ್ ಪಿ.ಎಸ್.ಮಹೇಶ್ ಸಹಿ ಮಾಡಿರುವ ಹಿಂದುಳಿದ ವರ್ಗಗಳ ಪ್ರವರ್ಗ 3 (ಎ) ಪ್ರಮಾಣ ಪತ್ರ ಹೇಗೆ ನೀಡಿದ್ದಾರೆಂಬ ಪ್ರಶ್ನೆ ಎದ್ದಿದೆ. ಒಂದು ತಿಂಗಳ ಅವಧಿಯಲ್ಲಿ ಕಾನೂನು ಬದಲಾಗಿದೆಯೇ ಎಂಬ ಜಿಜ್ಞಾಸೆ ಕಾಡಲಾರಂಭಿಸಿದೆ.
ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣ ಪತ್ರ ಪಡೆಯುವುದರಿಂದ ಯುಪಿಎಸ್ ಸಿ ಪರೀಕ್ಷೆ ಬರೆಯಲು ಮೂರು ಹೆಚ್ಚುವರಿ ವರ್ಷ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 32 ಪ್ರಾಯದವರೆಗೆ ಪರೀಕ್ಷೆ ಬರೆಯಬಹುದಾಗಿದ್ದು, ಪ್ರವರ್ಗ 3(ಎ) ಅವರಿಗೆ 35 ವರ್ಷದವರೆಗೂ ಅವಕಾಶ ದೊರೆಯಲಿದೆ. ಸಾರ್ವಜನಿಕ ಉದ್ಯೋಗದಲ್ಲಿ ಪ್ರವರ್ಗ 3(ಎ) ಅವರಿಗೆ ಶೇ.27ರಷ್ಟು ಮೀಸಲಾತಿ ದೊರೆಯಲಿದೆ. ಇದರ ಪ್ರಯೋಜನ ಪಡೆಯಲು ಮೋಕ್ಷಿತಾ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಟ್ಟು, ವಿಫಲರಾಗಿದ್ದಾರೆ.
ಪಾಲಕರ ಆಧಾರದಲ್ಲಿ ಜಾತಿ ಪ್ರಮಾಣ ಪತ್ರ ನೀಡಬಹುದು. ಆದರೆ, ಮೋಕ್ಷಿತಾ ವಿವಾಹವಾಗಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣ ಪತ್ರ ನೀಡಲು ಪತಿಯ ಆದಾಯದ ಮಾಹಿತಿ ಬೇಕಾಗಿದೆ. ತಡವಾಗಿ ಪತಿಯ ಆದಾಯ ಮಾಹಿತಿ ನೀಡಿದ್ದು, ಇದನ್ನು ಪರಿಶೀಲಿಸಿ ಪ್ರಮಾಣ ಪತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.