ಮಡಿಕೇರಿಯಲ್ಲಿ ಒಡಹುಟ್ಟಿದವರನ್ನೇ ಹತ್ಯೆಗೈದ ಆಸ್ತಿ ವೈಷಮ್ಯ
ಮಡಿಕೇರಿ, ಫೆಬ್ರವರಿ 03: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆಯನ್ನು ಗುಂಡಿಕ್ಕಿ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಬಳಿಯ ಕಿಗ್ಗಾಲು ಗ್ರಾಮದಲ್ಲಿ ಇಂದು(ಫೆ.03) ನಡೆದಿದೆ.
ಕಿಗ್ಗಾಲು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ತಮ್ಮಯ್ಯ ಎಂಬಾತನೇ ಅಣ್ಣ ದೇವಯ್ಯ(54) ಹಾಗೂ ಅತ್ತಿಗೆ ಪ್ರೇಮ(48) ಎಂಬುವರಿಗೆ ಗುಂಡಿಕ್ಕಿ ಹತ್ಯೆಗೈದು ಬಳಿಕ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದವನು.
ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದ ತಾಯಿ
ಕಿಗ್ಗಾಲು ಗ್ರಾಮದಲ್ಲಿ ಕಾಫಿ ತೋಟ ಸೇರಿದಂತೆ ಒಂದಷ್ಟು ಆಸ್ತಿಪಾಸ್ತಿ ಹೊಂದಿದ್ದ ಈ ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಮನಸ್ಸು ಇತ್ತು ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಅಣ್ಣ ಮತ್ತು ತಮ್ಮನ ನಡುವೆ ಇದೇ ವಿಚಾರಕ್ಕೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಇದೀಗ ಕಾಫಿ ಕೊಯ್ಲುಗೆ ಬಂದಿದ್ದು, ಕೊಡಗಿನಲ್ಲಿ ಹಣ ಓಡಾಡುವ ಕಾಲವಾಗಿದ್ದರಿಂದ ಮತ್ತೆ ಆಸ್ತಿಗೆ ಸಂಬಂಧಿಸಿದ ವಿಚಾರಗಳು ಶನಿವಾರ ಅಣ್ಣ ತಮ್ಮನ ನಡುವೆ ಪ್ರಸ್ತಾಪವಾಗಿ ಜಗಳ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ತಮ್ಮಯ್ಯ ತನ್ನ ಬಳಿಯಿದ್ದ ಕೋವಿಯಿಂದ ಅಣ್ಣ ದೇವಯ್ಯ ಹಾಗೂ ಅತ್ತಿಗೆ ಪ್ರೇಮ ಮೇಲೆ ಗುಂಡು ಹಾರಿಸಿದ್ದಾನೆ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಅದೇನಾಯಿತೋ ತಾನು ಕೂಡ ಗುಂಡು ಹಾರಿಸಿಕೊಂಡಿದ್ದಾನೆ. ಮೇಲಿಂದ ಮೇಲೆ ಕೇಳಿ ಬಂದ ಗುಂಡಿನ ಶಬ್ದದಿಂದ ಬೆಚ್ಚಿದ ಅಕ್ಕಪಕ್ಕದವರು ಸ್ಥಳಕ್ಕೆ ಓಡಿಬಂದಿದ್ದಾರೆ. ಅದಾಗಲೇ ಗುಂಡೇಟಿನಿಂದ ರಕ್ತಸ್ರಾವಗೊಂಡು ದೇವಯ್ಯ ಮತ್ತು ಪ್ರೇಮ ಸಾವನ್ನಪ್ಪಿದ್ದರೆ, ತಮ್ಮಯ್ಯ ರಕ್ತದ ಮಡುವಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ. ತಕ್ಷಣ ಆತನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಒಟ್ಟಾರೆ ಆಸ್ತಿವೈಷಮ್ಯಕ್ಕೆ ಮೂರು ಬಲಿಯಾದಂತಾಗಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.