ಮಡಿಕೇರಿ-ಮಂಗಳೂರು ರಸ್ತೆ ಆಧುನಿಕ ತಂತ್ರಜ್ಞಾನದಿಂದ ದುರಸ್ತಿ
ಮಡಿಕೇರಿ, ಜೂನ್ 06 : ಮಡಿಕೇರಿ-ಮಂಗಳೂರು ರಸ್ತೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಮಾಡಲಾಗುತ್ತಿದೆ. 2018ರಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದಾಗಿ ರಸ್ತೆಗೆ ಬಾರಿ ಹಾನಿಯಾಗಿತ್ತು.
ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಭೂಕುಸಿತದಿಂದ ಹಾನಿಯಾಗಿದ್ದ ರಸ್ತೆಯನ್ನು Soil Nailing ಹಾಗೂ Shotcreting ತಂತ್ರಜ್ಞಾನ ಬಳಸಿ ಶಾಶ್ವತ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಚಿತ್ರಗಳು : ಕೊಡಗಿನಲ್ಲಿ ಎನ್ಡಿಆರ್ಎಫ್ ಪಡೆ ಅಣಕು ಪ್ರದರ್ಶನ
ಕಳೆದ ವರ್ಷ ಈ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ 3 ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂ-ಸ್ಯಾಂಡ್ ಚೀಲ, ಜಿಯೋ ಸಿಂಥೆಟಿಕ್ ಅಳವಡಿಕೆ ಮಾಡಿ ತಾತ್ಕಾಲಿಕವಾಗಿ ದುರಸ್ತಿ ಮಾಡಿತ್ತು.
ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು
ಬೇಸಿಗೆಯ ಬಿಸಿಲು, ಆಗಾಗ ಸುರಿಯುವ ಮಳೆಯಿಂದಾಗಿ ರಸ್ತೆ ಮತ್ತೆ ಕುಸಿಯುವ ಆತಂಕ ಎದುರಾಗಿತ್ತು. ಈಗ ಮುಂಗಾರು ಸಹ ಆರಂಭವಾಗುವುದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಭೂ ಕುಸಿತ ಉಂಟಾಗುವ ಸ್ಥಳಗಳನ್ನು ದುರಸ್ತಿ ಮಾಡಲಾಗುತ್ತಿದೆ.
ಮಳೆಗಾಲ: ಕೊಡವರು ಆತಂಕಪಡುವುದು ಬೇಡ ಎಂದ ಸಾರಾ ಮಹೇಶ್
ರಸ್ತೆ ಬದಿಯಲ್ಲಿ ಹಾಕಿರುವ ಮರಳಿನ ಚೀಲದ ಮೇಲೆ ಕಬ್ಬಿಣದ ಸರಳು ಅಳವಡಿಸಿ, ಅದರ ಮೇಲೆ ಕಾಂಕ್ರೀಟ್ ಹಾಕಿ ಮಳೆಯ ನೀರು ಒಳಹೋಗದಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಎರಡು ದಿನಗಳಿಂದ ಈ ಕಾಮಗಾರಿ ಪ್ರಗತಿಯಲ್ಲಿದೆ.
14 ಕಡೆ ಭೂ ಕುಸಿತ : 2018ರಲ್ಲಿ ಸುರಿದ ಮಳೆ, ಭೂ ಕುಸಿತದಿಂದಾಗಿ ಮಡಿಕೇರಿಯಿಂದ ಸಂಪಾಜೆ ತನಕ 14 ಕಡೆ ಭೂ ಕುಸಿತ ಉಂಟಾಗಿತ್ತು. ಕೆಲವು ಕಡೆ ರಸ್ತೆ ಇತ್ತು ಎಂಬುದನ್ನು ಹೇಳುವ ಕುರುಹುಗಳೇ ಇರಲಿಲ್ಲ. 10 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.