ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಸಡಗರ ಸಂಭ್ರಮದಿಂದ ನಡೆದ ಗಿರಿಜನೋತ್ಸವ
ಮಡಿಕೇರಿ, ಫೆಬ್ರವರಿ 24: ಇಂದು ಮಾನವ ಎಷ್ಟೇ ಆಧುನಿಕನಾಗಿದ್ದರೂ ನಮ್ಮ ಪೂರ್ವಜರು ಕಲಿಸಿಕೊಟ್ಟ ಸಂಸ್ಕೃತಿ, ಸಂಪ್ರದಾಯ, ಜಾನಪದಗಳು ಇಂದಿಗೂ ಕೂಡ ಜನಪ್ರಿಯವೇ ಆಗಿವೆ. ಕನ್ನಡ ನಾಡಿನ ವೈವಿಧ್ಯಮಯ ಕಲೆ, ಜಾನಪದದ ಶ್ರೀಮಂತಿಕೆ ನಿಜಕ್ಕೂ ಅಭಿಮಾನ, ಹೆಮ್ಮೆ ಮೂಡಿಸುವಂತದ್ದಾಗಿದೆ.
ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ರಂಗಾಯಣದಿಂದ ಆಯೋಜಿಸಲಾಗಿದ್ದ 'ನಮ್ಮ ಜನ-ನಮ್ಮ ಸಂಸ್ಕೃತಿ' ಗಿರಿಜನೋತ್ಸವಕ್ಕೆ ಗೋಣಿಕೊಪ್ಪ ಸಮೀಪದ ನಿಟ್ಟೂರಿನಲ್ಲಿ ಮಂಗಳವಾರ ಸಾವಿರಾರು ಜನರು ಸಾಕ್ಷಿಯಾದರು.
ಕುಶಾಲನಗರ ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿಗೆ ಮನವಿ
ಇದೊಂದು ಅಪರೂಪದ ಜಾನಪದ ಹಬ್ಬವಾಗಿದ್ದು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಾನಪದ ಕಲಾತಂಡಗಳು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿ ಬರುತ್ತಿತ್ತು. ಒಂದಕ್ಕೊಂದು ಮೀರಿಸುವ ರೀತಿಯಲ್ಲಿ ಜಾನಪದ ಕಲಾವಿದರು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಗ್ರಾಮಸ್ಥರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಗ್ರಾಮದಲ್ಲಾಗುತ್ತಿರುವ ಗಿರಿಜನೋತ್ಸವದ ಸಂಭ್ರಮವನ್ನು ಸವಿದರು.
ನಮ್ಮ ಜನ-ನಮ್ಮ ಸಂಸ್ಕೃತಿ
ನಿಟ್ಟೂರಿನ ಗ್ರಾಮ ಪಂಚಾಯತಿ ಸಮೀಪವಿರುವ ವಿಶಾಲವಾದ ಮೈದಾನದಲ್ಲಿ ರಂಗಾಯಣ ಮೈಸೂರು, ವನವಾಸಿ ಕಲ್ಯಾಣ ಕೇಂದ್ರ ಕೊಡಗು ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಿರಿಜನ ಉಪಯೋಜನೆ, ನಿಟ್ಟೂರು ಗ್ರಾಮ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಮ್ಮ ಜನ-ನಮ್ಮ ಸಂಸ್ಕೃತಿ' ಗಿರಿಜನೋತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಂಸ್ಕೃತಿ ಉಳಿಯಲು ಆದಿವಾಸಿಗಳೇ ಮುಖ್ಯ ಕಾರಣ
ನಂತರ ಮಾತನಾಡಿದ ಕೆ.ಜಿ.ಬೋಪಯ್ಯ ಇಂದು ಪಾಶ್ಚಾತ್ಯ ಸಂಸ್ಕೃತಿ ಲಗ್ಗೆ ಇಟ್ಟಿದ್ದರೂ ಆದಿವಾಸಿಗಳಲ್ಲಿರುವ ಆಚಾರ-ವಿಚಾರ, ಸಂಸ್ಕೃತಿ ಕಡಿಮೆಯಾಗಿಲ್ಲ. ಇಂದಿಗೂ ಕೂಡ ಸಂಸ್ಕೃತಿ ಉಳಿಯಲು ಕಾಡಿನಲ್ಲಿರುವ ಆದಿವಾಸಿಗಳೇ ಮುಖ್ಯ ಕಾರಣ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಗಿರಿಜನರ ಸಂಸ್ಕೃತಿಗಳು ನಶಿಸಿಹೋಗುವುದನ್ನು ತಡೆಯಲು ರಂಗಾಯಣದ ಮೂಲಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಡುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಗಿರಿಜನರ ಬದುಕು ಇನ್ನೂ ಕೂಡ ಸಂಕಷ್ಟದಲ್ಲಿದೆ. ಮೂಲಭೂತ ಸೌಕರ್ಯ ನೀಡಲು ಸರ್ಕಾರ ಇವರಿಗಾಗಿ ಪ್ರತ್ಯೇಕ ಇಲಾಖೆಯನ್ನೇ ನೇಮಕ ಮಾಡಿದೆ ಎಂದರು. ಅರಣ್ಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಇದು ಸರಿಯಾದ ರೀತಿಯಲ್ಲಿ ಇನ್ನು ಕೂಡ ಜನರಿಗೆ ತಲುಪಿಲ್ಲ. ಮೂಲಭೂತ ಸೌಕರ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತಿಲ್ಲ. ಕೆಲವು ಅಧಿಕಾರಿಗಳಿಗೆ ಮಾನವಿಯತೆಯೇ ಇಲ್ಲದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
54ಕ್ಕೂ ಅಧಿಕ ಸಿಬ್ಬಂದಿಗಳನ್ನೊಳಗೊಂಡ ರಂಗಾಯಣ
ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಮೈಸೂರು ರಂಗಾಯಣ ಸೃಜನಶೀಲ ಸಂಸ್ಥೆಯಾಗಿದ್ದು, ವಿದೇಶಗಳಲ್ಲಿ ಪ್ರದರ್ಶನ ನೀಡಿದೆ. ನಾಡಿನಾದ್ಯಂತ ಹೆಸರುಳ್ಳ 54ಕ್ಕೂ ಅಧಿಕ ಸಿಬ್ಬಂದಿಗಳನ್ನೊಳಗೊಂಡ ನೂರಾರು ಕಲಾವಿದರಿರುವ ದೊಡ್ಡ ಸಂಸ್ಥೆಯಾಗಿದೆ. ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ರಂಗಾಯಣದ ಮೂಲಕ ರಾಜ್ಯಮಟ್ಟದ ಕಾರ್ಯಕ್ರಮವನ್ನು ಗಿರಿಜನರಿಗೋಸ್ಕರ ಆಯೋಜನೆ ಮಾಡಿದ್ದೇವೆ. ಈ ಹಿಂದೆ ಇಂತಹ ಕಾರ್ಯಕ್ರಮಗಳು ಕೇವಲ ಹೆಸರಿಗಷ್ಟೆ ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿದ್ದವು ಎಂದು ಹೇಳಿದರು. ಇದೀಗ ವನವಾಸಿ ಕಲ್ಯಾಣದ ಜೊತೆಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನೈಜ್ಯ ಗಿರಿಜನರಿನಲ್ಲಿರುವ ಸಂಸ್ಕೃತಿಯನ್ನು ಬಿಂಬಿಸಲು ವೇದಿಕೆ ನಿರ್ಮಾಣ ಮಾಡಿಕೊಡಲಾಗಿದೆ. ಗಿರಿಜನರ ಭಾಷೆಗಳನ್ನು ಹಾಡಲು ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ ಗಿರಿಜನರ ಸಂಸ್ಕೃತಿಯನ್ನು ತೋರಿಸಿಕೊಡಲು ಗ್ರಾಮೀಣ ಭಾಗದಲ್ಲಿ ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಸಚಿವಾಲಯ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಉತ್ತರ ಕನ್ನಡದ ಶಾಂತರಾಮ್ ಸಿದ್ಧಿ ಮಾತನಾಡಿ, ಗಿರಿಜನರ ಕಲ್ಯಾಣಕ್ಕಾಗಿ ವನವಾಸಿ ಕಲ್ಯಾಣ 70 ವರ್ಷಗಳಿಂದ ದುಡಿಯುತ್ತಿದೆ. ಗಿರಿಜನರಿಗೆ ಸವಲತ್ತುಗಳು ದೊರಕಲು ಕೆಲವು ದಾಖಲಾತಿಗಳನ್ನು ನೀಡಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ರಾಜ್ಯದ ಎಲ್ಲಾ ಭಾಗದಲ್ಲಿಯೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಕೇವಲ ಅಲ್ಪಸ್ವಲ್ಪವಿರುವ ಜಮೀನುಗಳಿಗೆ ದಾಖಲೆಗಳನ್ನು ನೀಡಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಗುಡಿಸಲು ಮನೆಗಳಲ್ಲಿಯೇ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳ ಮಾನವೀಯತೆಯ ಕೊರತೆಯಿಂದಾಗಿ ಇನ್ನು ಕೂಡ ಗಿರಿಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಅರಣ್ಯ, ಈ ಪ್ರಕೃತಿ ಉಳಿದಿದ್ದರೆ ಇದು ಬುಡಕಟ್ಟು ಜನಾಂಗದ ಕೊಡುಗೆ ಹೊರತು ಬೇರೇನೂ ಅಲ್ಲ. ಪ್ರಕೃತಿಯನ್ನು ದೇವರೆಂದು ಆರಾಧಿಸುವ ಆದಿವಾಸಿಗಳು ಅರಣ್ಯದಲ್ಲಿರುವ ವನ್ಯಜೀವಿಗಳು ಉಳಿಯಲು ಮುಖ್ಯ ಕಾರಣರಾಗಿದ್ದಾರೆ. ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಸಚಿವಾಲಯ, ಮಂತ್ರಿ ನೇಮಕವಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ ಎಂದು ಹೇಳಿದರು.
Recommended Video
ಕಲಾವಿದರಿಂದ ಕಂಸಾಳೆ ನೃತ್ಯ
ದಕ್ಷಿಣ ಕನ್ನಡ ಜಿಲ್ಲೆಯ ಬಾಬು ಪಾಂಗಳ ಕಲಾವಿದರ ಕೊರಗರ ಡೋಲು ಕುಣಿತ, ರಾಮನಗರ ಜಿಲ್ಲೆಯ ಹನುಮಂತನಾಯ್ಕ ಕಲಾವಿದರು ಮಾದೇಶ ಪೂಜಾ ಕುಣಿತ, ಉತ್ತರ ಕನ್ನಡ ಜಿಲ್ಲೆಯ ಅಮ್ಮಚ್ಚೆ ಮೌಳಿ ಸಿದ್ಧಿ ಕಲಾವಿದರಿಂದ ಸಿದ್ದಿ ಡಮಾಮಿ ನೃತ್ಯ, ಚಾಮರಾಜನಗರ ಜಿಲ್ಲೆಯ ಸೋಲಿಗ ಪುಷ್ಪಮಾಲೆ ಕಲಾತಂಡದಿಂದ ಗೊರುಕನ ಸೋಲಿಗರ ನೃತ್ಯ, ಮೈಸೂರು ಜಿಲ್ಲೆಯ ಕುಮಾರ್ ನಾಯಕ್ ಕಲಾವಿದರಿಂದ ಕಂಸಾಳೆ ನೃತ್ಯ, ತುಮಕೂರು ಜಿಲ್ಲೆಯ ಮಂಜುನಾಥ್ ತಂಡದಿಂದ ಕೀಲುಕುದುರೆ ಪಿರಿಯಾಪಟ್ಟಣ ತಾಲೂಕಿನ ನಾಗನಾಯಕ್ ತಂಡದಿಂದ ಡೊಳ್ಳು ಕುಣಿತ, ಮೈಸೂರು ಜಿಲ್ಲೆಯ ರಮೇಶ ತಂಡದಿಂದ ಕರಡಿ ಕುಣಿತ ನೃತ್ಯಗಳು, ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಪಿ.ಬಿ.ಕಾಳ ತಂಡದಿಂದ ಯರವರ ಚೀನಿ ದುಡಿ, ಜೆ.ಕೆ.ರಾಮು ತಂಡದಿಂದ ಜೇನುಕುರುಬರ ಕೋಲಾಟ, ತೋರ ಗ್ರಾಮದ ಗೋಪಮ್ಮ ಮಹಿಳಾ ತಂಡದಿಂದ ಕುಡಿಯರ ಉರಟಿಕೊಟ್ಟ್ ಆಟ್, ನಾಣಚ್ಚಿಯ ರಮೇಶ್ ತಂಡದಿಂದ ಸೋದೊದಿಮ್ಮಿ ಕುಣಿತ, ಮತ್ತೂರುವಿನ ಸುಮ ತಂಡದಿಂದ ಬೆಟ್ಟ ಕುರುಬ ದೇವರ ಕರಿಯಾಟ ಪ್ರದರ್ಶನಗೊಂಡವು.