ಮಡಿಕೇರಿ: ಆತಂಕ ಮೂಡಿಸುವ ಬಂಟ್ವಾಳ-ಮೈಸೂರು ಹೆದ್ದಾರಿ ಬಿರುಕು!
ಮಡಿಕೇರಿ, ಜುಲೈ 14: ಕೊಡಗಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಒಂದೊಂದೇ ರೀತಿಯ ಅನಾಹುತಗಳು ಎದುರಾಗುತ್ತಿವೆ.
ಈಗಾಗಲೇ ದಕ್ಷಿಣಕೊಡಗಿನ ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಿತಿಮತಿ ಬಳಿ ತಾತ್ಕಾಲಿಕ ಸೇತುವೆ ಕುಸಿದ ಪರಿಣಾಮ ಬಂದ್ ಆಗಿದ್ದರೆ, ವೀರಾಜಪೇಟೆಯಿಂದ ಕೇರಳಕ್ಕೆ ತೆರಳುವ ಸಂಪರ್ಕವೂ ಕಷ್ಟಸಾಧ್ಯವಾಗಿದೆ. ಇದೀಗ ಮಡಿಕೇರಿ ಮಂಗಳೂರು ಸಂಪರ್ಕವೂ ಕಡಿತವಾಗುವ ಭಯ ಎದುರಾಗಿದೆ. ಕಾರಣ ಮಡಿಕೇರಿ ಬಳಿಯ ಬಂಟ್ವಾಳ-ಮೈಸೂರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮಂಜಿನನಗರಿ ಮಡಿಕೇರಿಲಿ ಬೇರೂರಿದ ವರುಣ: ತಾಪತ್ರಯ ಒಂದೋ, ಎರಡೋ!
ಹೆದ್ದಾರಿ ಮಾಡುವ ವೇಳೆ ಹಾಕಿದ ಮಣ್ಣು ಈಗ ಮಳೆಯ ಕಾರಣ ಬಿರುಕು ಕಾಣಿಸಿಕೊಂಡಿದ್ದು ಕುಸಿಯುವ ಹಂತದಲ್ಲಿದೆ. ಸದ್ಯ ಅಪಾಯಕಾರಿ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಎಚ್ಚರಿಕೆ ವಹಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆ ಬಂದ್ ಆದ ಬಳಿಕ ಭಾರೀ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಆರಂಭವಾಗಿದ್ದರಿಂದ ಅತಿಯಾದ ಮಳೆಗೆ ಹೆದ್ದಾರಿಯಲ್ಲಿ ಬಿರುಕು ಕಾಣಿಸಿದೆ. ಈ ಹಿಂದೆ ಇದೇ ಹೆದ್ದಾರಿಯಲ್ಲಿ ಸಂಪಾಜೆ ಬಳಿ ರಸ್ತೆ ಕುಸಿತವಾಗಿತ್ತು.
ಸದ್ಯ ರಸ್ತೆಯ ಒಂದು ಬದಿಯಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಬಿರುಕು ಬಿಟ್ಟ ರಸ್ತೆಂಯು ಸುಮಾರು 30 ಅಡಿಯಷ್ಟು ಬಿರುಕು ಬಿಟ್ಟಿದ್ದು, ಕೆಳಭಾಗ ಕಂದಕವಿದ್ದು, ಒಂದು ವೇಳೆ ಕುಸಿದರೆ ರಸ್ತೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚುರಂಜನ್ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆದ್ದಾರಿಗಳು ಕುಸಿಯುವ ಹಂತಕ್ಕೆ ಬಂದಿವೆ. ಇದನ್ನು ಸರಿಪಡಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ಮಡಿಕೇರಿಯಿಂದ ಮಂಗಳೂರು ಮಾರ್ಗದ ರಸ್ತೆಯ ಒಂದು ಬದಿ ಇಳಿಜಾರಿನಿಂದ ಕೂಡಿದೆ. ಮತ್ತೊಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದೆ, ಇದರಿಂದ ರಸ್ತೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದ್ದು, ಈ ಸಂಬಂಧ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುಂದುವರೆದಿದೆ. ಹಾಗೆಯೇ ಆಗಸ್ಟ್ ವರೆಗೂ ಮಳೆಯಾಗುವುದರಿಂದ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ. ಸರ್ಕಾರ ಆ ನಿಟ್ಟಿನಲ್ಲಿ ಮಳೆ ಹಾನಿ ಸಂಬಂಧ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಶಿರಾಡಿ ಘಾಟ್ ರಸ್ತೆ ಮಾರ್ಗದಲ್ಲಿ ಜುಲೈ 16 ರಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡುವುದರಿಂದ ಬಂಟ್ವಾಳ-ಮೈಸೂರು ಮಾರ್ಗದ ರಸ್ತೆಗೆ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಬದಲಿಸಿ, ಅಧಿಕ ಭಾರದ ವಾಹನಗಳನ್ನು ಮೇಕೇರಿ ಮಾರ್ಗ ಸಂಚಾರಕ್ಕೆ ಅವಕಾಶ ಮಾಡುವುದು ಅಗತ್ಯ ಎಂದು ಶಾಸಕರು ಸಲಹೆ ಮಾಡಿದರು.
ಜೂನ್ ಮೊದಲ ವಾರದಲ್ಲಿ ಸುರಿದ ಧಾರಾಕರ ಮಳೆ ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ವ್ಯಾಪಕ ಮಳೆಗೆ ವಾಸದ ಮನೆ, ಹಾನಿ, ವಿದ್ಯುತ್ ಕಂಬಗಳು, ರಸ್ತೆಗಳು ಹೀಗೆ ಅಪಾರ ಪ್ರಾಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು. ಈಗಾಗಲೇ ಮಳೆ ಹಾನಿ ಸಂಬಂಧ 10 ಕೋಟಿ ರೂ ಬಿಡುಗಡೆಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಬೇಕು. ಹಾಗೂ ರಸ್ತೆ ಮತ್ತಿತರ ಹಾನಿಗೆ ಬಳಸುವಂತಾಗಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಲಾಗಿದ್ದು, ತ್ವರಿತ ಪರಿಹಾರ ವಿತರಣೆಗೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು.