ಜಲನರ್ತನವಿಲ್ಲದೆ ಖಾಲಿ ಖಾಲಿಯಾದ ಚಿಕ್ಲಿಹೊಳೆ...
ಮಡಿಕೇರಿ, ಜುಲೈ 18: ಕೊಡಗಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೊದಲ ಬಾರಿಗೆ ಭರ್ತಿಯಾಗಿ ಗಮನ ಸೆಳೆಯುವ ಚಿಕ್ಲಿಹೊಳೆ ಜಲಾಶಯವು ಈ ಬಾರಿ ಮಳೆ ಕೊರತೆಯಿಂದಾಗಿ ಖಾಲಿ ಖಾಲಿಯಾಗಿ ಗೋಚರಿಸುತ್ತಿದೆ.
ಹಾಗೆ ನೋಡಿದರೆ ಚಿಕ್ಲಿಹೊಳೆ ಜಲಾಶಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎರಡು ಗುಡ್ಡಗಳ ನಡುವೆ ಕೃಷಿ ಉದ್ದೇಶಕ್ಕೆ ಈ ಜಲಾಶಯವನ್ನು ನಿರ್ಮಿಸಲಾಗಿದ್ದು, ಮಳೆಗಾಲ ಆರಂಭವಾದ ಕೆಲವೇ ಸಮಯಗಳಲ್ಲಿ ಜಲಾಶಯ ಭರ್ತಿಯಾಗಿ ಬಿಡುತ್ತಿತ್ತು. ಭರ್ತಿಯಾದ ಬಳಿಕ ಜಲಾಶಯದಿಂದ ನೀರು ಹರಿದು ಹೊರಹೋಗಲೆಂದೇ ಅರ್ಧ ಚಂದ್ರಾಕೃತಿಯ ತೂಬನ್ನು ನಿರ್ಮಿಸಲಾಗಿದ್ದು ಇದರ ಮೇಲೆ ಹರಿದು ಕೆಳಕ್ಕೆ ಧುಮುಕುವಾಗ ಕಾಣಸಿಗುವ ದೃಶ್ಯ ಅದ್ಭುತವಾಗಿರುತ್ತಿತ್ತು.
ಕೊಡಗು ; ಭಾರಿ ಮಳೆ ಮುನ್ಸೂಚನೆ, ಜು. 18 ರಿಂದ 22 ಆರೆಂಜ್ ಅಲರ್ಟ್
ಇದನ್ನು ನೋಡಲೆಂದೇ ಪ್ರವಾಸಿಗರು ಧಾವಿಸಿ ಬರುತ್ತಿದ್ದರು. ಜತೆಗೆ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಂಡು ಹಿಂತಿರುಗುತ್ತಿದ್ದರು. ಆದರೆ ಪ್ರಸಕ್ತ ವರ್ಷದ ಮುಂಗಾರು ಆರಂಭದಲ್ಲಿಯೇ ಕ್ಷೀಣಿಸಿರುವುದರಿಂದ ಇಷ್ಟರಲ್ಲೇ ಭರ್ತಿಯಾಗಬೇಕಾಗಿದ್ದ ಜಲಾಶಯ ಇನ್ನೂ ಖಾಲಿಯಾಗಿಯೇ ಉಳಿದಿರುವುದು ಇದನ್ನು ನಂಬಿ ಕೃಷಿ ಮಾಡುವ ರೈತರಲ್ಲಿ ಆತಂಕವನ್ನು ತಂದೊಡ್ಡಿದೆ.
ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯದ ನೀರನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶದ ರೈತರು ಅವಲಂಬಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸುವ ಉದ್ದೇಶದಿಂದ ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯವನ್ನು ನಿರ್ಮಿಸಲಾಯಿತು.
ಕಟ್ಟೆಮಳವಾಡಿಯಲ್ಲಿ ಸೃಷ್ಟಿಯಾಗಿದೆ ಜಲಲ ಜಲಧಾರೆ...
ಆ ಕಾಲದಲ್ಲಿ ವಿರೂಪಾಕ್ಷಪುರ, ರಸೂಲ್ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿತ್ತು. ಆದರೆ ಈಗ ಮಳೆ ಕೊರತೆಯಿಂದಾಗಿ ಜತೆಗೆ ಆಡಳಿತಾರೂಢರ ನಿರ್ಲಕ್ಷ್ಯದಿಂದ ಅಧೋಗತಿಗೆ ತಲುಪಿದೆ. ಜತೆಗೆ ಮಳೆಯ ಕೊರತೆಯೂ ಜಲಾಶಯದ ಸೌಂದರ್ಯಕ್ಕೆ ಧಕ್ಕೆ ತಂದಿದೆ. ಈಗಾಗಲೇ ಇಲ್ಲಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿದೆ. ಇನ್ನು ಜಲಾಶಯದ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಕೊಡಗಿನಲ್ಲಿ ಆತಂಕದ ನಡುವೆಯೇ ಗದ್ದೆಗಿಳಿದ್ದಾರೆ ರೈತರು
ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ಸುರಿದರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ. ಇಲ್ಲದೆ ಹೋದರೆ ಸೊರಗಿದ ಜಲಾಶಯ ತನ್ನ ಸೌಂದರ್ಯ ಕಳೆದುಕೊಳ್ಳುವುದರೊಂದಿಗೆ ಇದನ್ನೇ ನಂಬಿದ ರೈತಾಪಿ ವರ್ಗವೂ ಪರಿತಪಿಸಬೇಕಾಗಬಹುದೇನೋ? ಇನ್ನೂ ಮುಂಗಾರು ಮಳೆಯ ಕಾಲ ಇರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿ ಮತ್ತೆ ಮೊದಲಿನಂತೆ ಜಲನರ್ತನ ಆರಂಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.