ಲಾಕ್ ಡೌನ್: ಮಡಿಕೇರಿಯಲ್ಲಿ ಯುವಕರ ಮಿಡ್ನೈಟ್ ಪಾರ್ಟಿ
ಮಡಿಕೇರಿ, ಏಪ್ರಿಲ್ 12: ಮಡಿಕೇರಿ ಸಮೀಪದ ಕತ್ತಲೆಕಾಡು ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ, ಲಾಕ್ ಡೌನ್ ನಡುವೆಯೂ ಭರ್ಜರಿ ಮದ್ಯದ ಪಾರ್ಟಿ ಮಾಡುತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೋಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ನಿನ್ನೆ ರಾತ್ರಿ 12.30 ಗಂಟೆಯ ವೇಳೆಗೆ ದಾಳಿ ನಡೆಸಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು, ಸ್ಥಳದಲ್ಲಿಯೇ ಓರ್ವನನ್ನು ಬಂಧಿಸಿದ್ದು, ಮೂರು ಬೈಕ್ ಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಯುವಕರ ತಂಡದಲ್ಲಿದ್ದ ಇತರ ನಾಲ್ವರು ಪರಾರಿಯಾಗಿದ್ದಾರೆ. ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಅದೇ ರೀತಿ ಮಡಿಕೇರಿ ಸಮೀಪದ ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಬ್ರೂಕ್ ವ್ಯೂ(ಕ್ಲೋಸ್ಬರ್ನ್) ಕಾಫಿ ತೋಟದಲ್ಲಿ ನಿನ್ನೆ ರಾತ್ರಿ ಎರಡು ಗೋವುಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಸ್ಥಳಿಯ ನಿವಾಸಿಯೊಬ್ಬರ ಎರಡು ಹಸುಗಳನ್ನು ತೋಟದಲ್ಲಿ ರಾತ್ರಿ ಕಟ್ಟಿ ಹಾಕಲಾಗಿತ್ತು. ಬೆಳಿಗ್ಗೆ ನೋಡಿದಾಗ ಎರಡೂ ಹಸುಗಳು ಗುಂಡೇಟಿನಿಂದ ಮೃತ ಪಟ್ಟಿರುವುದು ತಿಳಿದು ಬಂದಿದೆ.
ಬೇಟೆಗಾರರು ಗುಂಡಿಕ್ಕಿ ಕೊಂದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಕದ್ದಮೆ ದಾಖಲು ಮಾಡಿಕೊಂಡು ಶೋಧ ನಡೆಸಲಾಗುತ್ತಿದೆ.