ಬರಲಿರುವ ಮುಂಗಾರು ಕೊಡಗಿಗೆ ಒಳಿತು ಮಾಡುವಂತಿರಲಿ!
ಮಡಿಕೇರಿ, ಮೇ 17: ಯಾರು ಏನೇ ಧೈರ್ಯ ಹೇಳಿದರೂ ಕೊಡಗಿನ ಜನರಲ್ಲಿ ಮುಂದೆ ಬರಲಿರುವ ಮಳೆಗಾಲದ ಬಗ್ಗೆ ಚಿಕ್ಕದಾದ ಭಯವಂತು ಇದ್ದೇ ಇದೆ. ಇದುವರೆಗೆ ಅದೆಷ್ಟೋ ಮಳೆಗಾಲಗಳನ್ನು ಕಂಡು ಅದರಲ್ಲಿ ನೊಂದು ಬೆಂದವರಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಳೆಗಾಲವೆಂದರೆ ಜೋರಾಗಿ ಮಳೆ ಬರಬಹುದು, ಪ್ರವಾಹದಿಂದ ಒಂದಷ್ಟು ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಹೋಗಬಹುದು, ನದಿ ದಡಗಳಲ್ಲಿರುವ ಮನೆಗೆ ನೀರು ಬರಬಹುದು, ರಸ್ತೆ ಸಂಚಾರ ಬಂದ್ ಆಗಬಹುದು ಅದಕ್ಕಿಂತ ಹೆಚ್ಚೇನು ಆಗಲಾರದು. ಅದಷ್ಟು ಸಮಸ್ಯೆಯನ್ನು ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಂಡೇ ಮಳೆಗಾಲವನ್ನು ಬರಮಾಡಿಕೊಳ್ಳುತ್ತಿದ್ದರು.
ಆದರೆ 2018 ರ ಮುಂಗಾರು ಮಳೆ ಮಾತ್ರ ಎಲ್ಲ ಮಳೆಗಾಲದಂತೆ ಇರಲಿಲ್ಲ. ಅದು ಬರೀ ಮಳೆಗಾಲವಾಗಿದ್ದರೆ ಜನ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅದು ಜಲಪ್ರಳಯವಾಗಿತ್ತು. ಬೆಟ್ಟಗುಡ್ಡಗಳು ಜರಿದು ಹೋದವು.
ಕೊಡಗು : ವಿವಿಧ ಪ್ರದೇಶದಲ್ಲಿ ತಂಪೆರೆದ ಆಲಿಕಲ್ಲು ಸಹಿತ ಮಳೆ
ಭೂಮಿ ಅಡಿಯಲ್ಲಿದ್ದ ಜಲ ಸಿಕ್ಕ ಸಿಕ್ಕಲ್ಲಿ ಉಕ್ಕಿ ಬಂದವು. ಹಾಗೆ ಬರುವಾಗ ಮಣ್ಣುಗುಡ್ಡ, ಬಂಡೆ, ಮರಗಿಡ ಯಾವುದನ್ನೂ ಬಿಡದೆ ಆಚೆಗೆ ತಳ್ಳಿ ಬಿಟ್ಟವು. ಪರಿಣಾಮ ಏನಾಯಿತು ಎಂಬುದು ನಮ್ಮ ಕಣ್ಣಮುಂದೆಯೇ ಇದೆ. ಅದೆಲ್ಲವನ್ನು ನೋಡಿದ, ಅನುಭವಿಸಿದ ಜನ ಮುಂದೆ ಬರಲಿರುವ ಮಳೆಗಾಲವನ್ನು ನೆನೆದು ಇದೀಗ ಭಯಭೀತಗೊಂಡಿದ್ದಾರೆ.
ಮೂಲ ಸ್ವರೂಪವನ್ನೇ ಕಳೆದುಕೊಂಡ ಜಿಲ್ಲೆ
ಜಿಲ್ಲೆಯ ಸುಮಾರು 40 ಕ್ಕೂ ಹೆಚ್ಚು ಗ್ರಾಮಗಳು ಬೆಟ್ಟಗುಡ್ಡಗಳ ಕುಸಿತ, ಜಲಸ್ಫೋಟ, ಪ್ರವಾಹ, ಬಿರುಗಾಳಿಗೆ ಸಿಕ್ಕಿ ಮೂಲ ಸ್ವರೂಪನ್ನೇ ಕಳೆದುಕೊಂಡಿವೆ. ಅಷ್ಟೇ ಅಲ್ಲದೆ, ಮನುಷ್ಯ ಸೇರಿದಂತೆ ಸಾಕುಪ್ರಾಣಿಗಳನ್ನು ಬಲಿ ತೆಗೆದುಕೊಂಡಿವೆ. ಜಲಪ್ರಳಯಕ್ಕೆ 20 ಮಂದಿ ಬಲಿಯಾಗಿದ್ದಾರೆ. ಇನ್ನು ಅದೆಷ್ಟೋ ಜಾನುವಾರುಗಳು ನಾಪತ್ತೆಯಾಗಿವೆ. ಕಷ್ಟಪಟ್ಟು ಮಾಡಿದ್ದ ಕಾಫಿ ತೋಟ, ಭತ್ತದ ಗದ್ದೆಗಳು ನಾಶವಾಗಿವೆ. ಇನ್ನು ಮನುಷ್ಯನ ಮೂಲಸೌಲಭ್ಯಗಳಲ್ಲೊಂದಾದ ರಸ್ತೆಗಳಂತು ಮಾಯವಾಗಿವೆ. ಈಗಾಗಲೇ ಜಲಪ್ರಳಯಕ್ಕೆ ಒಳಗಾದ ಗ್ರಾಮಗಳು ಎಂದಿನಂತೆ ಆಗುವುದು ಕಷ್ಟವಿದೆ. ಆದರೆ ಅಲ್ಲಿಗೆ ಕೊನೆಪಕ್ಷ ರಸ್ತೆಯನ್ನಾದರೂ ಮಾಡಬೇಕಲ್ಲವೆ? ಅದನ್ನು ಮಾಡಲಾಗುತ್ತಿದೆಯಾದರೂ ಅಲ್ಲಿ ಜನ ಬದುಕು ಸಾಗಿಸುವುದು ಮಾತ್ರ ಕನಸಿನ ಮಾತಾಗಿದೆ.
ಕೊಡಗು ಪ್ರವಾಹ : 35 ಸಂತ್ರಸ್ತರಿಗೆ ಮನೆಗಳ ಹಂಚಿಕೆ
ಮಂದಗತಿಯಲ್ಲಿ ಸಾಗುತ್ತಿವೆ ಕೆಲಸಗಳು
ಇವತ್ತಿಗೂ ತಮ್ಮ ತೋಟ ಮನೆ ಕಳೆದುಕೊಂಡ ಮಂದಿ ಅಲ್ಲಿಗೆ ತೆರಳಿ ಈಗಿನ ಪರಿಸ್ಥಿತಿಯನ್ನು ನೋಡಿ ಕಣ್ಣೀರಿಡುತ್ತಾರೆ. ಆಗಸ್ಟ್ನಲ್ಲಿ ದುರಂತ ಸಂಭವಿಸಿದ್ದು, ಆ ನಂತರ ಸಂತ್ರಸ್ತರಿಗೆ ಪರಿಹಾರವೇನೋ ಹರಿದು ಬಂತು. ಇಡೀ ಕರ್ನಾಟಕದ ಜನ ಒಗ್ಗಟ್ಟಾಗಿ ನಿಂತು ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದರು. ಆದರೆ ಆ ನಂತರ ಮಾಡಬೇಕಾದ ಹಲವು ಕಾರ್ಯಗಳಿದ್ದವು. ಅವು ಸರ್ಕಾರದಿಂದಲೇ ಆಗ ಬೇಕಾಗಿತ್ತು. ಅದು ಆಗುತ್ತಿದೆ, ಆದರೆ ಮಂದಗತಿಯಲ್ಲಿ ಸಾಗಿದ್ದರಿಂದ ಮುಂದಿನ ಮಳೆಗಾಲದ ವೇಳೆಗೆ ಈಗ ಮಾಡಿರುವ ಕಾಮಗಾರಿ ನೀರಿನಲ್ಲಿ ಕೊಚ್ಚಿ ಹೋಗದೆ ಉಳಿದರೆ ಸಾಕಾಗಿದೆ. ಏಕೆಂದರೆ ಅಂತಹದೊಂದು ಭಯ ಜನರನ್ನು ಕಾಡುತ್ತಿದೆ.
ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?
ಕಾಮಗಾರಿಗಳೆಲ್ಲವೂ ಅಪೂರ್ಣ
ಸದ್ಯ ರಸ್ತೆ, ಸೇತುವೆ ಮತ್ತು ಮೋರಿಗಳ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿರುವುದು ಕಾಣಿಸುತ್ತಿದೆ. ಕುಸಿದು ಹೋದ ಹೆದ್ದಾರಿಗಳನ್ನು ಮರಳು ಮೂಟೆ ಹಾಕಿ ಮಣ್ಣು ಹಾಕಿ ತಾತ್ಕಾಲಿವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದು ಹಾಗೆಯೇ ಮುಂದುವರೆದಿದೆ. ಈ ಮಳೆಗಾಲದಲ್ಲಿ ಅದು ಹಾಗೆಯೇ ಉಳಿಯುತ್ತದೆಯಾ? ಎಂಬುದು ಕೂಡ ಪ್ರಶ್ನೆಯಾಗಿದೆ. ಮಳೆ ಆರಂಭಕ್ಕೂ ಮುನ್ನವೇ ಸರ್ಕಾರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ, ಹೀಗಾಗಿ ಕಾಮಗಾರಿಗಳೆಲ್ಲವೂ ಅಪೂರ್ಣಗೊಂಡಿವೆ. ಪ್ರವಾಹದ ಸಂದರ್ಭ ಕುಸಿದ ಮಣ್ಣೆಲ್ಲ ಹಾರಂಗಿ ಜಲಾಶಯ ಸೇರಿದ್ದು, ಅದರಿಂದ ಹೂಳನ್ನು ತೆಗೆಸುವ ಕೆಲಸ ಮಾಡಬೇಕಿತ್ತು. ಆದರೆ ಅಂತಹದೊಂದು ಕೆಲಸ ಆಗಲೇ ಇಲ್ಲ.
ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ
ಜಲಪ್ರಳಯದಿಂದ ಅತಿಹೆಚ್ಚು ಹಾನಿಗೀಡಾದ ದೇವಸ್ತೂರು, ಕಾಲೂರು, ಹಟ್ಟಿಹೊಳೆ, ಹಮ್ಮಿಯಾಲ, ಮುಕ್ಕೋಡ್ಲು, ಮಕ್ಕಂದೂರು ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ರಸ್ತೆ, ಸೇತುವೆ, ಮೋರಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಈ ಕಾಮಗಾರಿ ಮಳೆಗಾಲದ ವೇಳೆಗೆ ಪೂರ್ಣ ಗೊಳ್ಳುತ್ತಾ ಎಂಬ ಸಂಶಯವಿದೆ. ಈ ಕಾಮಗಾರಿಗಳು ಮುಗಿದರಷ್ಟೆ ಇಲ್ಲಿನ ಗ್ರಾಮಸ್ಥರಿಗೆ ಸಂಪರ್ಕ ಸಾಧ್ಯವಾಗಲಿದೆ. ಇಲ್ಲದಿದ್ದಲ್ಲಿ ಗ್ರಾಮ ದ್ವೀಪದಂತಾಗಿ ಮತ್ತೆ ಗ್ರಾಮಸ್ಥರು ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಜಿ.ಪಂ, ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹೀಗೆ ವಿವಿಧ ಇಲಾಖೆಗಳ ಮೂಲಕ ಕೋಟಿಗಟ್ಟಲೆ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆಯಾದರೂ ಈ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ.
ಜನರಿಂದ ಕೇಳಿ ಬಂತು ಆರೋಪ
ಕಾಮಗಾರಿ ಬಗ್ಗೆ ಗುತ್ತಿಗೆದಾರರ ಬಳಿ ಗ್ರಾಮಸ್ಥರು ಪ್ರಶ್ನಿಸಿದರೆ ಸೂಕ್ತ ಉತ್ತರ ದೊರೆಯುತ್ತಿಲ್ಲ, ಯಾವ ಇಲಾಖೆಯ ಕಾಮಗಾರಿ, ಎಷ್ಟು ವೆಚ್ಚ, ಯಾರು ಗುತ್ತಿಗೆದಾರರು, ಯಾವಾಗ ಪೂರ್ಣಗೊಳ್ಳುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಗೊಂದಲದ ಉತ್ತರ ದೊರೆಯುತ್ತಿದೆಯೇ ಹೊರತು ಸ್ಪಷ್ಟತೆ ಇಲ್ಲ. ಈ ಕುರಿತಂತೆ ಸಭೆ ಕರೆದು ಯಾವುದೇ ಮಾಹಿತಿಗಳನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜಿಲ್ಲೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಬಹಳ ದಿನಗಳ ಮೇಲೆ ಅಧಿಕಾರಿಗಳ ಸಭೆ ನಡೆಸಿ, ಒಂದಿಷ್ಟು ಸೂಚನೆ ನೀಡಿ ಜಾಗ ಖಾಲಿ ಮಾಡಿದ್ದಾರೆ. ಅವರೀಗ ರಾಜಕೀಯದಲ್ಲಿ ಬಿಜ್ಹಿಯಾಗಿದ್ದು, ಕೊಡಗಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಬೇರೆ ಕಡೆಗೆ ಸ್ಥಳಾಂತರಗೊಂಡ ಜನರು
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣವಾಗುತ್ತಿದ್ದು, ಮಳೆಗಾಲದ ಮುನ್ನ ಎಲ್ಲಾ ಸಂತ್ರಸ್ತರಿಗೆ ಸಿಕ್ಕರೆ ಸಂತೋಷ. ಆದರೆ ಆ ವೇಳೆಗೆ ಮನೆಗಳು ಪೂರ್ಣಗೊಳ್ಳುತ್ತದೆಯಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಈ ನಡುವೆ ಮಡಿಕೇರಿಯ ಚಾಮುಂಡೇಶ್ವರಿ ನಗರದ ರೈಫಲ್ ರೇಂಜ್ ಬೆಟ್ಟದಲ್ಲಿ ಕಳೆದ ಮಳೆಗಾಲ ಅಂದಾಜು 100 ಅಡಿ ಉದ್ದದಷ್ಟು ಬಿರುಕು ಬಿಟ್ಟಿದ್ದು, ಅದು ಹಾಗೆಯೇ ನಿಲ್ಲುತ್ತಾ ಅಥವಾ ಮಳೆಗಾಲದಲ್ಲಿ ಕುಸಿಯುತ್ತಾ ಎಂಬ ಭಯವೂ ಶುರುವಾಗಿದೆ. ಈಗಾಗಲೇ ಅಪಾಯವನ್ನು ಅರಿತ ಬಹಳಷ್ಟು ಮಂದಿ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ತೋಟವನ್ನೇ ನಂಬಿ ಬದುಕುತ್ತಿದ್ದವರ ಬದುಕು ಮಾತ್ರ ಅಯೋಮಯವಾಗಿದೆ. ತೋಟದಿಂದಲೇ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿ ಸ್ವತಂತ್ರ ಜೀವನ ನಡೆಸುತ್ತಿದ್ದವರು ಬದುಕು ಸಾಗಿಸಲು ಬೇರೆ ಏನಾದರು ಕೆಲಸವನ್ನು ಹುಡುಕಿಕೊಳ್ಳುವ ಪರಿಸ್ಥಿತಿಗೆ ಬರುವಂತಾಗಿದೆ.
ಮಳೆಗೆ ಬೆಚ್ಚಿ ಬಿದ್ದ ಜನರ ಪಾಡಿದು
ಇಡೀ ಮಡಿಕೇರಿ ನಗರ ಮತ್ತು ಸುತ್ತಮುತ್ತ ಮನೆಗಳೆಲ್ಲವೂ ಬೆಟ್ಟದ ಮೇಲೆಯೇ ನಿರ್ಮಾಣವಾಗಿವೆ. ಇಲ್ಲಿ ವಾಸಿಸುವ ಜನ ಇದೀಗ ಬರಲಿರುವ ಮಳೆಗಾಲವನ್ನು ನೆನೆದು ಭಯಗೊಂಡಿದ್ದಾರೆ. ಮೊದಲೆಲ್ಲ ಕೊಡಗಿನವರು ಮಳೆಗಾಲವನ್ನು ಖುಷಿಯಿಂದಲೇ ಸ್ವಾಗತಿಸುತ್ತಿದ್ದರು. ದಿನಸಿ ಸಾಮಾನು, ಅಗತ್ಯ ವಸ್ತುಗಳನ್ನೆಲ್ಲ ಶೇಖರಿಸಿಟ್ಟುಕೊಂಡು ಎಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆ ಬಂದರೂ ಖುಷಿಯಾಗಿಯೇ ಇರುತ್ತಿದ್ದರು. ಆದರೆ ಕಳೆದ ವರ್ಷಂದೀಚೆಗೆ ಮಾತ್ರ ಮಳೆ ಎಂದರೆ ಜನ ಬೆಚ್ಚಿ ಬೀಳುವಂತಾಗಿದೆ. ಈ ಬಾರಿಯ ಮುಂಗಾರು ಕೊಡಗು ಸೇರಿದಂತೆ ಮಲೆನಾಡು ಜನತೆಗೆ ಕೆಡಕು ಮಾಡದೆ ಒಳಿತು ಮಾಡುವಂತಿದ್ದರೆ ಅಷ್ಟೇ ಸಾಕು.