ಮಡಿಕೇರಿ: ಅರ್ಚಕ ನಾರಾಯಣಾಚಾರ್ ಅವರಿಗೆ ಸೇರಿದ ಕಾರು ಹಾಗೂ ಒಂದು ಮೃತದೇಹ ಪತ್ತೆ
ಮಡಿಕೇರಿ, ಆಗಸ್ಟ್ 11: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್ಡಿಆರ್ಎಫ್ ತಂಡ ತೀವ್ರ ಶೋಧ ನಡೆಸುತ್ತಿದ್ದು, ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಹಾಗೂ ಮತ್ತೊಂದು ಮೃತದೇಹ ಪತ್ತೆಯಾಗಿವೆ.
Recommended Video
ಕಳೆದ ನಾಲ್ಕು ದಿನಗಳಿಂದ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ನಾಪತ್ತೆಯಾದವರಿಗೆ ತೀವ್ರ ಹುಡುಕಾಟವನ್ನು ಆರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮಾರುತಿ ಓಮ್ನಿ ಕಾರುಗಳು ಪತ್ತೆಯಾಗಿವೆ.
ಭೂಕುಸಿತದಲ್ಲಿ ನಾಪತ್ತೆಯಾದ ಅರ್ಚಕರು; ತಲಕಾವೇರಿ ಪೂಜೆ ನಡೆಸುವವರಾರು?
ಪತ್ತೆಯಾದ ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು, ನಾರಾಯಣ ಆಚಾರ್ ಶೆಡ್ ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಸಿಕ್ಕಿವೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಲಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ಮೂವರ ಮೃತದೇಹಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ
ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿದ್ದು, ಒಟ್ಟು 60 ಸಿಬ್ಬಂದಿ ಉಳಿದ ಮೂವರ ಪತ್ತೆಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆಗಳಿವೆ.
ಇದೇ ವೇಳೆ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೊಡಗಿನ ಭಾಗಮಂಡಲ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿರುವ ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮತ್ತೊಂದು ಮೃತದೇಹ ಪತ್ತೆ
ಬೆಟ್ಟ ಕುಸಿತವಾದ ನಂತರ ಸರ್ಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಬ್ಬರ ಮೃತದೇಹ ಸಿಕ್ಕಿದ ಮೇಲೆ ಮೂರು ದಿನಗಳಿಂದ ಎನ್ಡಿಎಫ್ಆರ್ ತಂಡ, ಪೊಲೀಸ್, ಅಗ್ನಿಶಾಮಕ ದಳದವರು ಸೇರಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅರ್ಚಕರ ಮನೆಯ ಮಂಚ, ಕುರ್ಚಿಗಳು 60 ಅಡಿಯ ಆಳದಲ್ಲಿ ಬಿದ್ದಿವೆ. ಈಗ ಆ ಪ್ರದೇಶದಲ್ಲೇ ಹುಡುಕಾಟ ಮಾಡುತ್ತಿದ್ದೇವೆ ಎಂದರು. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿ ಐದು ದಿನಗಳು ಕಳೆದಿದೆ. ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ವೇಳೆ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಆದರೆ ಯಾರದ್ದು ಮೃತದೇಹ ಎಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ.
ತಲಕಾವೇರಿಯಲ್ಲಿ ಇಂದು ಅಥವಾ ನಾಳೆಯಿಂದ ಪೂಜೆ
ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದ್ದು, ಆದರೆ ಮಳೆ ಬರುತ್ತಿರುವುದರಿಂದ ವಾಸನೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಯಾವ ಯಾವ ರೀತಿ ಶೋಧಕಾರ್ಯ ಮಾಡಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವ ತೀರ್ಮಾನಕ್ಕೆ ಬರುವುದಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಪೂಜೆ ನಿಂತಿರುವ ತಲಕಾವೇರಿಯಲ್ಲಿ ಇವತ್ತು ಅಥವಾ ನಾಳೆಯಿಂದ ಪೂಜೆ ಆರಂಭ ಮಾಡುತ್ತೀವಿ. ಮೃತದೇಹ ಸಿಗುವವರೆಗೂ ಪೂಜೆ ಬೇಡ ಎಂಬ ತೀರ್ಮಾನ ಮಾಡಿಲ್ಲ. ನಾಳೆಯೊಳಗೆ ಪೂಜೆ ಶುರು ಮಾಡುತ್ತೀವಿ ಎಂದು ಹೇಳಿದ್ದಾರೆ.
ನಾರಾಯಣಾಚಾರ್ ಸೇರಿ ಕುಟುಂಬದ ಐವರು ನಾಪತ್ತೆಯಾಗಿದ್ದರು
ನಾರಾಯಣ ಆಚಾರ್ಯ, ಅವರ ಪತ್ನಿ ಶಾಂತ ಮತ್ತು ಇನ್ನಿಬ್ಬರು ಅರ್ಚಕರ ಶವಗಳು ಪತ್ತೆ ಆಗಿಲ್ಲ, ಅಲ್ಲಿ ವಾಸವಿದ್ದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್ ಸೇರಿ ಕುಟುಂಬದ ಐವರು ನಾಪತ್ತೆಯಾಗಿದ್ದರು. ನಂತರ ಇಬ್ಬರ ಮೃತದೇಹ ದೊರೆತಿತ್ತು. ಇನ್ನು ಉಳಿದ ಮೂವರಿಗಾಗಿ ಶೋಧ ಕಾರ್ಯ ಇಂದು ಕೂಡಾ ಮುಂದುವರೆದಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಸಂಸದರಾದ ಪ್ರತಾಪ್ ಸಿಂಹ ಅವರು ತಲಕಾವೇರಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ನಾರಾರಾಯಣಾಚಾರ್ ಅವರ ಮಕ್ಕಳೊಂದಿಗೆ ಕಾರ್ಯಾಚರಣೆ ಬಗ್ಗೆ ಭಾಗಮಂಡಲದ ಹೋಟೆಲ್ ಮಯೂರದಲ್ಲಿ ಮಂಗಳವಾರ ಚರ್ಚಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇತರರು ಇದ್ದರು.