ಕೊಡಗು ಭೂಕುಸಿತ; ತಜ್ಞರ ವರದಿ ತಿರಸ್ಕರಿಸಲು ಒತ್ತಾಯ
ಮಡಿಕೇರಿ, ಏಪ್ರಿಲ್ 12; ಕೊಡಗು ಜಿಲ್ಲೆ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಮಾನವ ಹಸ್ತಕ್ಷೇಪವೇ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟಿರುವ ತಜ್ಞರ ವರದಿ ಹಾಗೂ ನೀಡಿರುವ ಮಾರ್ಗೋಪಾಯಗಳನ್ನು ಸರಕಾರ ತಿರಸ್ಕಾರ ಮಾಡಬೇಕೆಂದು ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಭೂಕುಸಿತ ತಡೆಗಟ್ಟಲು ಹಾಗೂ ನಿಯಂತ್ರಿಸಲು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮೂಲಕ ಸರಕಾರವು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.
ಭೂಕುಸಿತ ಅಧ್ಯಯನ ಸಮಿತಿ ವರದಿ ಸಲ್ಲಿಕೆ: ಶಿಫಾರಸುಗಳು
ಈ ಸಮಿತಿಯು ತಯಾರಿಸಿದ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪಗೆ ಸಲ್ಲಿಸಿದೆ. ವರದಿಯಲ್ಲಿ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆ ಹಾಗೂ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ಮೂಲ ಕಾರಣ ಎಂದು ಹೇಳಲಾಗಿದೆ. ಇದರೊಂದಿಗೆ ಕೆಲವೊಂದು ಮಾರ್ಗೋಪಾಯಗಳನ್ನು ಕೂಡ ನೀಡಲಾಗಿದೆ. ಆದರೆ, ಈ ವರದಿ ಸಮರ್ಪಕವಾಗಿಲ್ಲ ಇದನ್ನು ತಿರಸ್ಕರಿಸಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಗಜಗಿರಿ ಬೆಟ್ಟ ಭೂಕುಸಿತ ಪ್ರದೇಶ ಪರಿಶೀಲಿಸಿದ ಕೇಂದ್ರ ತಂಡ
ತಜ್ಞರು ಅರಣ್ಯ ನಾಶ ಆಗಿದೆ ಅಂತ ಹೇಳುತ್ತಾರೆ ಹಾಗಿದ್ದರೆ ಅರಣ್ಯದಲ್ಲಿ ಯಾಕೆ ಭೂಕುಸಿತವಾಗಿದೆ?. ಅರಣ್ಯದಲ್ಲಿ ರಸ್ತೆ ಮಾಡಿಲ್ಲವಲ್ಲ? ಇದೊಂದು ಪ್ರಾಕೃತಿಕ ಸ್ವಾಭಾವಿಕ ಕ್ರಿಯೆ. 500-1000 ವರ್ಷಗಳ ಹಿಂದೆಯೂ ಇದೇ ರೀತಿ ಆಗಿರಬಹುದು. ಹಾಗೆ ನೋಡಿದರೆ ಮಲೇಶಿಯಾ, ಹಿಮಾಲಯಗಳಲ್ಲೂ ಭೂಕುಸಿತವುಂಟಾಗಿದೆ.
ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಸಂಪ್ರದಾಯ ಮುಂದುವರಿಕೆ
"ಪ್ರಸ್ತುತ ಜಿಲ್ಲೆಯಲ್ಲಿ ಮರ, ಗಿಡಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಳೆಗಾರರು ತೋಟದಲ್ಲಿ ಎಕರೆಗೆ 400ರಷ್ಟು ಮರಗಳನ್ನು ಬೆಳೆಸುತ್ತಿದ್ದಾರೆ. ಬೆಳೆಗಾರರು, ರೈತರು ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದಾರೆ. ಸರಕಾರ ಅವರಿಗೆ ಪ್ರೋತ್ಸಾಹಧನ ನೀಡಬೇಕು. ಅದು ಬಿಟ್ಟು ಇಂತಹ ತಪ್ಪು ವರದಿ ಗಳನ್ನು ಸಲ್ಲಿಸುವುದಲ್ಲ. ತಜ್ಞರು ನಮ್ಮೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಳ್ಳಲಿ" ಎಂದು ಮಡಿಕೇರಿ ಬಿಜೆಪಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದರು.
ಅಭಿವೃದ್ಧಿ ಕಾರ್ಯ ಬೇಡವೇ
"ಸರಕಾರಕ್ಕೆ ಸಲ್ಲಿಸಲಾಗಿರುವ ವರದಿಯನ್ನು ಯಾವ ಆಧಾರದಲ್ಲಿ ಮಾಡಿದ್ದಾರೆ? ಎಂಬದನ್ನು ಹೇಳಬೇಕಿದೆ. ನಮಗೆ ತಿಳಿದಿರುವ ಮಟ್ಟಿಗೆ 100 ವರ್ಷಕ್ಕೊಮ್ಮೆ ಪ್ರಕೃತಿಯಲ್ಲಿ ಬದಲಾವಣೆ ಗಳಾಗುತ್ತವೆ. ಇದೂ ಹಾಗೇ ಆಗಿರಬಹುದು. ವರದಿ ಪ್ರಕಾರ ನೋಡಿದರೆ ಜನತೆಗೆ ಅಭಿವೃದ್ಧಿ ಕಾರ್ಯಗಳೇ ಆಗುವುದು ಬೇಡವೆಂಬಂತಿದೆ. ಈ ವರದಿಯನ್ನು ತಿರಸ್ಕಾರ ಮಾಡಬೇಕಿದೆ" ಎಂದು ಎಂಎಲ್ಸಿ ಸುನಿಲ್ ಸುಬ್ರಮಣಿ ಹೇಳಿದ್ದಾರೆ.
ಪ್ರಕೃತಿಗೆ ವಿರುದ್ಧವಾಗಿ ಹೋಗಲ್ಲ
"ತಜ್ಞರು ಮಾಡಿರುವ ವರದಿ ತಪ್ಪು. ಭೂಕುಸಿತಕ್ಕೆ ಕಾರಣ ದೂರದಿಂದ ಗೊತ್ತಾಗುವುದಿಲ್ಲ. ಹೊರಗಿನಿಂದ ಬಂದವರಿಗೆ ಕೊಡಗಿನ ಬಗ್ಗೆ ಏನೂ ಗೊತ್ತಿರುವುದಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮೀಕ್ಷೆ ಮಾಡಿದರೆ ಸರಿಯಾಗುವುದಿಲ್ಲ, ಸಮಿತಿ ಬಂದು ಹೋಗಿರುವುದು ನಮಗ್ಯಾರಿಗೂ ಗೊತ್ತಿಲ್ಲ. ಘಟನೆ ಸ್ಥಳಕ್ಕೆ ಬಂದು ತಿಳಿದವರನ್ನು ಸಂಪರ್ಕ ಮಾಡಿ ಚರ್ಚಿಸಿ ವರದಿ ಮಾಡಬೇಕು. ಪ್ರಕೃತಿ ಪೂಜೆ ಮಾಡುವವರು ಯಾವತ್ತೂ ಪ್ರಕೃತಿಗೆ ವಿರುದ್ಧವಾಗಿ ಹೋಗುವದಿಲ್ಲ, ನಾವು ಪ್ರಕೃತಿಯನ್ನು ಉಳಿಸುವವರು" ಎಂದು ಎಂಎಲ್ ಸಿ ವೀಣಾ ಅಚ್ಚಯ್ಯ ಹೇಳಿದ್ದಾರೆ.
ಸರಿಯಾದ ಕ್ರಮದಲ್ಲಿ ವರದಿ ಇಲ್ಲ
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಎ. ಹರೀಶ್ ಮಾತನಾಡಿ, "ವರದಿಗೆ ವಿರೋಧವಿದೆ, ಸರಿಯಾದ ಕ್ರಮದಲ್ಲಿ ವರದಿ ತಯಾರಿಸಿಲ್ಲ. ಯಾರನ್ನೂ ಭೇಟಿ ಮಾಡಿ ಮಾಹಿತಿ ಪಡೆದಿಲ್ಲ, ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ಮಾಡಿಲ್ಲ. ವರದಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದರು.
ಮೂಗಿನ ನೇರಕ್ಕೆ ವರದಿ ಮಾಡಿದ್ದಾರೆ
ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ. ಎಂ. ಗಣೇಶ್ ಮಾತನಾಡಿ, "ಕೊಡಗಿನಲ್ಲಿ ಮಾನವ ಹಸ್ತಕ್ಷೇಪದಿಂದ ಭೂಕುಸಿತವುಂಟಾಗಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಹೋಂಸ್ಟೇ, ರೆಸಾರ್ಟಗಳಿಂದ ಕುಸಿತವುಂಟಾಗುವಂತಿದ್ದರೆ ಮೆಡಿಕಲ್ ಕಾಲೇಜು ನಿರ್ಮಾಣವಾಗಿರುವ ಬೆಟ್ಟದಲ್ಲೂ ಆಗಬೇಕಿತ್ತು, ಅಂತದ್ದೇನೂ ಆಗಿಲ್ಲ. ತಜ್ಞರು ತಮ್ಮ ಮೂಗಿನ ನೇರಕ್ಕೆ ವರದಿ ತಯಾರಿಸಿದ್ದಾರೆ. ಅದೂ ಅಲ್ಲದೆ 2018ರ ಬಳಿಕ ಎಲ್ಲಿಯೂ ಒಂದೇ ಕಡೆಯಲ್ಲಿ ಕುಸಿತ ಉಂಟಾಗಿಲ್ಲ" ಎಂದರು.
Recommended Video
ಪ್ರಾಕೃತಿಕವಾಗಿ ನಡೆಯುವಂತದ್ದು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಕೆ. ಮಂಜುನಾಥ್ ಕುಮಾರ್ ಮಾತನಾಡಿ, "ಭೂಕುಸಿತವೆಂಬುದು ಪ್ರಾಕೃತಿಕವಾಗಿ ನಡೆಯುವಂತದ್ದು. ಅದಕ್ಕೆ ಮಾನವನ ಹಸ್ತಕ್ಷೇಪವೇ ಕಾರಣ ಎಂಬುದು ಸರಿಯಲ್ಲ. ಭೂವಿಜ್ಞಾನದ ಬಗ್ಗೆ ಅರಿವಿಲ್ಲದವರು ತಯಾರಿಸಿರುವಂತಹ ವರದಿ ಇದಾಗಿದ್ದು, ಭೂವಿಜ್ಞಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವವರು ಭೂಕುಸಿತ ಸಂಬಂಧ ವರದಿ ತಯಾರಿಸುವಂತಾಗಬೇಕು. ಪ್ರಸ್ತುತ ಸಲ್ಲಿಕೆಯಾಗಿರುವ ವರದಿ ದಿಕ್ಕು ತಪ್ಪಿಸುವ ವರದಿಯಾಗಿದೆ" ಎಂದು ದೂರಿದ್ದಾರೆ.