ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ: ಸ್ಥಳಾಂತರಕ್ಕೆ 7 ಕುಟುಂಬಗಳಿಗೆ ನೋಟಿಸ್
ಮಡಿಕೇರಿ, ಜುಲೈ 22: ಗುಡ್ಡಗಾಡು ಜಿಲ್ಲೆ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಜನತೆಗೆ ಆತಂಕ ಶುರುವಾಗುತ್ತದೆ. ಅದರಲ್ಲೂ ಗುಡ್ಡ ಪ್ರದೇಶಗಳಲ್ಲಿ ಮನೆ ನಿರ್ಮಿಸಿರುವವರಿಗೆ ಆಗಸ್ಟ್ ತಿಂಗಳು ಎಂದರೆ ಕಳೆದ ಮೂರು ವರ್ಷಗಳಿಂದಲೂ ದುಸ್ವಪ್ನ ಕಂಡಂತೆ ಭಾಸವಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಿನಲ್ಲಿ ಉಂಟಾಗಿರುವ ಭೂಕುಸಿತವೇ ಇದಕ್ಕೆ ಕಾರಣವಾಗಿದ್ದು, ಈ ಬಾರಿ ಜುಲೈ ತಿಂಗಳಿನಲ್ಲೇ ಮಳೆ ಜೋರಾಗಿರುವುದರಿಂದ ಗುಡ್ಡ ಪ್ರದೇಶಗಳ ಜನತೆ ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಮಳೆಯ ಅರ್ಭಟ ಮುಂದುವರೆದಿದ್ದು, ಕಳೆದ 48 ಘಂಟೆಗಳಿಂದ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ 7 ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ.
ಗಜಗಿರಿ ಬೆಟ್ಟ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ; ತಜ್ಞರ ವರದಿ
2018ರಲ್ಲಿ ಮಾದಾಪುರ- ಮಡಿಕೇರಿ ನಡುವಿನ ಮಕ್ಕಂದೂರಿನ ಬಾಲಾಜಿ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮನೆಗಳು ಸಂಪೂರ್ಣ ನೆಲಕಚ್ಚಿ, ಪ್ರಾಣಿಗಳು ಸಾವನ್ನಪ್ಪಿದ್ದವು. ಇದೀಗ ಅಂದು ಗುಡ್ಡ ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಆತಂಕ ಸೃಷ್ಟಿಸಿದೆ.
ಉದಯಗಿರಿ ಬೆಟ್ಟ ಕುಸಿಯುವ ಅತಂಕ
ಅಷ್ಟೇ ಅಲ್ಲದೆ ಮಕ್ಕಂದೂರು ಸುತ್ತಲಿನ ಪ್ರದೇಶವಾದ ಉದಯಗಿರಿ, ಮೇಘಾತಾಳು, ತಂತಿಪಾಲ ಹಾಗೂ ಹುಲಿತಾಳ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ ಜನರಿಗೆ ಮತ್ತೆ ಇಲ್ಲಿನ ಉದಯಗಿರಿ ಬೆಟ್ಟ ಕುಸಿಯುವ ಅತಂಕ ಮನೆ ಮಾಡಿದೆ. ವಾರದಿಂದ ಅಗುತ್ತಿರುವ ಮಳೆಯಿಂದ ಈಗಾಗಲೇ ಬೆಟ್ಟ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಅರಂಭವಾಗಿದೆ.
2018ರಲ್ಲೂ ಪಕ್ಕದ ಬೆಟ್ಟ ಕುಸಿದಿತ್ತು
ಹೀಗಾಗಿ ಈ ಬೆಟ್ಟದ ಕೆಳಭಾಗದಲ್ಲಿ ವಾಸ ಮಾಡುವ 7 ಕುಟುಂಬಗಳ ಮನೆಗಳಲ್ಲಿ ಆತಂಕ ಮನೆ ಮಾಡಿದ್ದು, ಈ ಪ್ರದೇಶದಲ್ಲಿ ವಾಸ ಮಾಡುವ ಜನರು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಸುತ್ತಲೂ ಬೆಟ್ಟ ಇರುವ ಹಿನ್ನಲೆಯಲ್ಲಿ 2018ರಲ್ಲೂ ಪಕ್ಕದ ಬೆಟ್ಟ ಕುಸಿದಿದ್ದು, ಬಾಬು ಎಂಬುವರು ಇದೇ ಬೆಟ್ಟದ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. 2018ರಲ್ಲಿ ಬೆಟ್ಟ ಕುಸಿದು ಈ ಭಾಗದ ಮನೆಗಳ ಬಳಿ ಕೃತಕವಾಗಿ ಕೆರೆ ನಿರ್ಮಾಣವಾಗಿದೆ.
ತಕ್ಷಣ ಸ್ಥಳಾಂತರಿಸುವಂತೆ ನಿವಾಸಿಗಳ ಮನವಿ
ಬೆಟ್ಟದ ಪ್ರದೇಶದಲ್ಲಿ ತೇವಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೀಗೆ ಮಳೆ ಮುಂದುವರಿದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ತಕ್ಷಣ ಸ್ಥಳಾಂತರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಸೂಕ್ಷ್ಮತೆಗಳನ್ನು ಪರಿಶೀಲನೆ ಮಾಡಿದ ಮಕ್ಕಂದೂರು ಗ್ರಾಮ ಪಂಚಾಯತಿಯು ಈಗಾಗಲೇ ಏಳು ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾನವಿ ಮಾಡಿದೆ.
Recommended Video
ಭೂಕುಸಿತದ ಭೀತಿ ಜಿಲ್ಲಾಧಿಕಾರಿ ಕಚೇರಿಯನ್ನೂ ಬಿಟ್ಟಿಲ್ಲ
> ಈ ಹಿಂದೆ ಮಡಿಕೇರಿ ಸಮೀಪದ ಮಂಗಳೂರು ಹೆದ್ದಾರಿಯಲ್ಲಿ ಜಿಲ್ಲಾಡಳಿತ 6 ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ ನೀಡಿತ್ತು. ಇಲ್ಲಿ ಭೂಕುಸಿತದ ಭೀತಿ ಜಿಲ್ಲಾಧಿಕಾರಿಗಳ ಕಚೇರಿಯನ್ನೂ ಬಿಟ್ಟಿಲ್ಲ. ಅಲ್ಲಿಯೂ ಕೂಡ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಭೂಕುಸಿತಕ್ಕೆ ಕಾರಣವಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಕಳೆದ ಮೂರು ತಿಂಗಳ ಮುಂಚೆಯೇ ಮಣ್ಣು ಕುಸಿತವಾಗದಂತೆ ತಡೆಗೋಡೆಯನ್ನೂ ನಿರ್ಮಿಸಿರುವುದರಿಂದ ಕೊಂಚ ನಿರಾಳವಾಗಿದೆ. ಆದರೆ ವಿಪರೀತ ಮಳೆಯಾದರೆ ಕುಸಿಯುವ ಭೀತಿ ಇಲ್ಲದ ಗುಡ್ಡಗಳೂ ಕುಸಿಯುವ ಸಾದ್ಯತೆ ಇದ್ದೇ ಇದೆ.