ಶೀಘ್ರವೇ ಭೂಕುಸಿತದ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಾಣ
ಮಡಿಕೇರಿ, ಅಕ್ಟೋಬರ್.08: ಪ್ರಕೃತಿ ವಿಕೋಪಕ್ಕೊಳಗಾದ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕಿಟ್ಟಿದ್ದು, ಸಂತ್ರಸ್ತರಿಗೆ ಒಪ್ಪಿಗೆಯಾಗುವ ಮಾದರಿಯ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆ ನಿರ್ಮಾಣ ಮಾಡಲು ಸುರಕ್ಷಿತ ಗ್ರಾಮಗಳಾದ ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಗ್ರಾಮಗಳಲ್ಲಿ ಒಟ್ಟು 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವೂ ಪೂರ್ಣಗೊಂಡಿದ್ದು, ಸದ್ಯ ಲೇಔಟ್ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ
ಘಟಕ ವೆಚ್ಚ ನಿಗದಿಯಾದ ನಂತರ ಒಪ್ಪಿಗೆಯಾಗುವ ಮನೆಯನ್ನು ಗೃಹ ಮಂಡಳಿ ವತಿಯಿಂದ ಮನೆ ನಿರ್ಮಿಸಲು ಉದ್ದೇಶ ಹೊಂದಲಾಗಿದೆ.
ಸದ್ಯ ಕರ್ಣಂಗೇರಿ ಗ್ರಾಮದ ಸರ್ವೆ ನಂ.178 ರಲ್ಲಿ ನಾಲ್ಕು ಎಕರೆ ಗುರುತಿಸಲಾಗಿದ್ದು, ಸುಮಾರು 80 ನಿವೇಶನಗಳು ಲಭ್ಯವಾಗಲಿದೆ. ಈ ಗ್ರಾಮದಲ್ಲಿ ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡಿ 1, ಹೊದಕಾನ 9 ಹಾಗೂ ನಗರದ 43 ಕುಟುಂಬಗಳಿಗೆ ಒಟ್ಟು 65 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತ ಸಂಕ್ಷಿಪ್ತ ಲೇಖನ ಇಲ್ಲಿದೆ.
ನಿವೇಶನ ಹಂಚಿಕೆ
ಕೆ.ನಿಡುಗಣೆ ಗ್ರಾಮದ ಸರ್ವೆ ನಂ.1/13 ರಲ್ಲಿ ಅಂದಾಜು 5 ಎಕರೆ ಜಾಗ ಗುರುತಿಸಲಾಗಿದ್ದು, ಕಾಲೂರು ಗ್ರಾಮದ 22 ಕುಟುಂಬಗಳಿಗೆ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ.103 ರಲ್ಲಿ 7 ಎಕರೆ ಜಾಗ ಗುರುತಿಸಲಾಗಿದೆ.
ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ ಗಾಳಿಬೀಡು ಸರ್ವೆ ನಂ.99/3, 100/3, 100/4 ರಲ್ಲಿ 13 ಎಕರೆ ಜಾಗ ಗುರುತಿಸಲಾಗಿದ್ದು, ಗಾಳಿಬೀಡು ಗ್ರಾಮದ 19 ಕುಟುಂಬಗಳಿಗೆ, ನಿಡುವಟ್ಟಿನ 26 ಕುಟುಂಬಗಳಿಗೆ ಬಾರಿಬೆಳ್ಳಚ್ಚು 2 ಕುಟುಂಬಗಳಿಗೆ, ಒಂದನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ.
173 ಕುಟುಂಬಗಳಿಗೆ ಆಶ್ರಯ
ಮದೆ ಗ್ರಾಮದ ಸರ್ವೆ ನಂ.399 ರಲ್ಲಿ 10ಎಕರೆ ಜಾಗ ಗುರುತಿಸಲಾಗಿದ್ದು, ಎರಡನೇ ಮೊಣ್ಣಂಗೇರಿಯ 188ಕುಟುಂಬಗಳಿಗೆ, ಮದೆ ಗ್ರಾಮದ 79 ಕುಟುಂಬಗಳಿಗೆ, ಸಂಪಾಜೆಯಲ್ಲಿ ಸರ್ವೆ ನಂ.54/1ರಲ್ಲಿ 1.50 ಎಕರೆ ಗುರುತಿಸಲಾಗಿದ್ದು, ಸಂಪಾಜೆಯ 4 ಕುಟುಂಬಗಳಿಗೆ, ಬಿಳಿಗೇರಿಯ ಸರ್ವೆ ನಂ.347/3 ರಲ್ಲಿ 1.88 ಎಕರೆ ಜಾಗ ಗುರುತಿಸಲಾಗಿದ್ದು, ಹೆರವನಾಡಿನ 10 ಕುಟುಂಬಗಳಿಗೆ ಒಟ್ಟು 281 ಕುಟುಂಬಗಳಿಗೆ, ಜಂಬೂರು ಗ್ರಾಮದ ಸರ್ವೆ ನಂ.13/1 ರಲ್ಲಿ 50 ಎಕರೆ ಜಾಗ ಗುರುತಿಸಲಾಗಿದ್ದು, ಮಕ್ಕಂದೂರು ಗ್ರಾಮದ99 ಕುಟುಂಬಗಳಿಗೆ, ಎಮ್ಮೆತಾಳು ಗ್ರಾಮದ 39ಕುಟುಂಬಳಿಗೆ, ಮುಕ್ಕೋಡ್ಲು ಗ್ರಾಮದ 9 ಕುಟುಂಬಗಳಿಗೆ, ಮೇಘತ್ತಾಳು ಗ್ರಾಮದ 26ಕುಟುಂಬಗಳಿಗೆ ಒಟ್ಟು 173 ಕುಟುಂಬಗಳಿಗೆ ಆಶ್ರಯ ಸಿಗಲಿದೆ.
ಕೊಡಗು 1500 ನಿರಾಶ್ರಿತ ಕುಟುಂಬಗಳಿಗೆ 50 ಸಾವಿರ ಪರಿಹಾರ
84 ಕುಟುಂಬಗಳಿಗೆ ನಿವೇಶನ
ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು 2 ಕುಟುಂಬಗಳಿಗೆ, ಕಿರಂಗಂದೂರು 6, ಬೇಳೂರು 4, ಹಾನಗಲ್ಲು 3, ನೆರುಗಳಲೆ 1, ಹಾಡಗೇರಿ 22, ಮುವತ್ತೋಕ್ಲು 4, ಇಗ್ಗೋಡ್ಲು 9, ಕಡಗದಾಳು 11 ಕಾಂಡನಕೊಲ್ಲಿ 5, ಕೊಪ್ಪತ್ತೂರು 3, ಜಂಬೂರು 4, ಗರ್ವಾಲೆ 2, ಶಿರಂಗಳ್ಳಿ 1, ಮಂಕ್ಯ 1, ಕಿಕ್ಕರಳ್ಳಿ 1, ಹಾಲೇರಿ 5 ಒಟ್ಟು 84 ಕುಟುಂಬಗಳಿಗೆ ನಿವೇಶನವನ್ನು ಗುರುತಿಸಲಾಗಿದೆ.
ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವ
ನೊಂದವರ ಕಣ್ಣುಗಳಲ್ಲಿ ಆಶಾಕಿರಣ
ಒಟ್ಟಾರೆ ಸಂತ್ರಸ್ತರ ಬದುಕಿಗೆ ಆಶ್ರಯ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಒಂದು ಹಂತಕ್ಕೆ ಬರಲಿದ್ದು, ನೊಂದವರ ಕಣ್ಣುಗಳಲ್ಲಿ ಆಶಾಕಿರಣ ಕಾಣುವಂತಾಗಿದೆ.