ಕೊಡಗಿನಲ್ಲಿ ಹಣ್ಣು ಬೆಳೆಯೋದಕ್ಕೆ ಮಾರುಕಟ್ಟೆ ಕೊರತೆ?
ಮಡಿಕೇರಿ, ಜನವರಿ 29: ಮೊದಲಿಗೆ ಹೋಲಿಸಿದರೆ ಕೊಡಗಿನ ವಾತಾವರಣದಲ್ಲಿ ಬದಲಾವಣೆ ಕಾಣಿಸಿದೆ. ಹೀಗಾಗಿ ಹಣ್ಣುಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಕೆಲಸವಾದರೆ ಇಲ್ಲಿ ಬೆಳೆಗಾರರು ಕಾಫಿ ಜತೆಯಲ್ಲಿ ಇತರೆ ಹಣ್ಣುಗಳನ್ನು ಬೆಳೆಯಲು ಸಾಧ್ಯವಾಗಲಿದೆ.
ಇವತ್ತಿಗೂ ಇಲ್ಲಿನ ಬಹುತೇಕ ಬೆಳೆಗಾರರು ಕಾಫಿ, ಕರಿಮೆಣಸು ಹೊರತುಪಡಿಸಿ ಬೇರೆ ಹಣ್ಣಿನ ಬೆಳೆಗಳತ್ತ ಮುಖ ಮಾಡಿಲ್ಲ. ಇದಕ್ಕೆ ಪ್ರೋತ್ಸಾಹ ಮತ್ತು ಮಾರುಕಟ್ಟೆಯ ಕೊರತೆ ಕಾರಣವಾಗಿದೆ. ಹೀಗಾಗಿ ಕಾಫಿ ತೋಟದ ನಡುವೆ ಹೋಂ ಸ್ಟೇ, ರೆಸಾರ್ಟ್ ಗಳನ್ನು ನಿರ್ಮಿಸುವ ಚಿಂತನೆ ಮಾಡುತ್ತಾರೆಯೇ ಹೊರತು ಅವುಗಳ ನಡುವೆ ಮಿಶ್ರ ಬೆಳೆಯಾಗಿ ಬೆಳೆಯುವ ಹಣ್ಣುಗಳ ಬಗ್ಗೆ ಚಿಂತನೆ ಮಾಡುತ್ತಿಲ್ಲ.
ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಕರಡಿ ಕಾಟ
ಹಾಗೆ ನೋಡಿದರೆ ಮೊದಲು ಇಲ್ಲಿನ ಜನ ಭತ್ತದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ನಂತರ ದಟ್ಟಕಾಡುಗಳಿದ್ದ ಕಾರಣ ಅವತ್ತಿನ ವಾತಾವರಣಕ್ಕೆ ಏಲಕ್ಕಿಯಷ್ಟೆ ಹೊಂದಿಕೊಳ್ಳುತ್ತಿದ್ದರಿಂದ ಅದನ್ನು ಬೆಳೆಯುತ್ತಿದ್ದರು. ಉಳಿದಂತೆ ಕಾಫಿ ತೋಟಗಳಿದ್ದವು. ಅವುಗಳ ನಡುವೆ ಕರಿಮೆಣಸಿಗೆ ಆದ್ಯತೆ ನೀಡುತ್ತಿದ್ದರು.
ವಾಣಿಜ್ಯ ದೃಷ್ಠಿಯಿಂದ ಬೆಳೆಯುತ್ತಿಲ್ಲ
ಇನ್ನು ಕಾಫಿ ತೋಟಗಳ ನಡುವೆ ಬಾಳೆ, ಕಿತ್ತಳೆ, ಮಾವು, ಚಕ್ಕೋತ ಹೀಗೆ ಹಣ್ಣಿನ ಗಿಡಗಳನ್ನು ನೆಡುತ್ತಿದ್ದರು. ಇವುಗಳನ್ನು ವಾಣಿಜ್ಯ ದೃಷ್ಠಿಯಿಂದ ಬೆಳೆಯುತ್ತಿರಲಿಲ್ಲ. ತಮ್ಮ ಉಪಯೋಗಕ್ಕಷ್ಟೆ ಸೀಮಿತವಾಗಿತ್ತು. ಈ ಹಣ್ಣುಗಳಿಗೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲದ ಕಾರಣ ಯಾರಾದರೂ ವ್ಯಾಪಾರಿಗಳು ತೋಟಕ್ಕೆ ಬಂದು ಖರೀದಿಸಿದರಷ್ಟೆ ಅವುಗಳಿಗೆ ಬೆಲೆ ಸಿಗುತ್ತಿತ್ತು. ಇಲ್ಲವೆಂದರೆ ಕೊಳೆತು ಹೋಗುತ್ತಿತ್ತು. ಕಾಲ ಕ್ರಮೇಣ ಕೇರಳದ ವ್ಯಾಪಾರಿಗಳು ಇಲ್ಲಿಗೆ ಬಂದು ಬಾಳೆ, ಕಿತ್ತಳೆ, ನಿಂಬೆ ಹೀಗೆ ಎಲ್ಲವನ್ನೂ ಖರೀದಿಸಲಾರಂಭಿಸಿದರು. ಹೀಗಾಗಿ ಕೆಲವರು ಕಾಫಿ, ಏಲಕ್ಕಿ ಜತೆಯಲ್ಲಿ ಬೇರೆ ಬೇರೆ ಬೆಳೆಯನ್ನು ಬೆಳೆಯಲಾರಂಭಿಸಿದರು.
ಬದಲಾದ ಕೊಡಗಿನ ಚಿತ್ರಣ
90ರ ದಶಕದ ನಂತರ ಕೊಡಗಿನ ಚಿತ್ರಣ ಬದಲಾಯಿತು. ಕಾರಣ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತು. ಅಲ್ಲಿ ತನಕ ಕಾಫಿ ಬೆಳೆಯೋದಕ್ಕೆ ನಿರ್ಬಂಧ ಇತ್ತಾದರೂ ಅದನ್ನು ತೆಗೆದು ಹಾಕಿ ಯಾರು ಬೇಕಾದರೂ ಕಾಫಿ ಬೆಳೆಯಬಹುದು ಎಂಬ ಆದೇಶ ಹೊರಬಂತು. ಹೀಗಾಗಿ ಎಲ್ಲರೂ ಕಾಫಿ ತೋಟವನ್ನು ನಿರ್ಮಾಣ ಮಾಡಿದರು. ಅದೇ ವೇಳೆಗೆ ಏಲಕ್ಕಿಗೂ ಬೆಲೆ ಇಳಿಕೆಯಾಗತೊಡಗಿತು. ಜತೆಗೆ ರೋಗಗಳು ಕಾಣಲಾರಂಭಿಸಿತು. ಹೀಗಾಗಿ ಏಲಕ್ಕಿ ಬೆಳೆಯುವುದು ಕಷ್ಟ ಎಂದರಿತ ಬೆಳೆಗಾರರು ಕಾಫಿಯತ್ತ ವಾಲಿದರು.
ಕಾಫಿ ಬೆಳೆಯೋದು ಸುಲಭವಾಗಿರಲಿಲ್ಲ
ಬೆಳೆಗಾರರ ಸ್ವಾಧೀನದಲ್ಲಿ ಹತ್ತಾರು ಎಕರೆ ಜಾಗಗಳಿದ್ದು, ಅವು ಪಾಳು ಬಿದ್ದಿದ್ದವು. ಬಿದಿರು ಮೆಳೆಗಳು, ಕಾಡುಗಳು ಬೆಳೆದಿದ್ದವು. ಇವುಗಳನ್ನು ತೋಟವನ್ನಾಗಿ ಪರಿವರ್ತಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹೀಗಿರುವಾಗಲೇ ಕೇರಳದಿಂದ ಶುಂಠಿ ಬೆಳೆಯಲು ಬೆಳೆಗಾರರು ಬಂದರು. ಅವರಿಗೆ ಶುಂಠಿ ಬೆಳೆಯಲು ಕೊಡಗು ಪ್ರಸಕ್ತ ತಾಣ ಎಂಬುದು ಗೊತ್ತಾಗಿತ್ತು. ಅವರು ಕಾಡು ಕಡಿದು ಶುಂಠಿ ಬೆಳೆಯಲು ತಯಾರಿದ್ದರು. ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದ ಅವರು ಕಾಡನ್ನೆಲ್ಲ ಕಡಿದು ಶುಂಠಿ ಬೆಳೆದರು. ಆ ನಂತರು ಇಲ್ಲಿನ ಬೆಳೆಗಾರರು ಅಲ್ಲಿ ಕಾಫಿ ತೋಟವನ್ನು ನಿರ್ಮಿಸಿದರು. ಜತೆಗೆ ಗದ್ದೆಗಳು ಕೂಡ ಕಾಫಿ ತೋಟವಾಗಿ ಮಾರ್ಪಾಡಾದವು.
ಹಣ್ಣು ಬೆಳೆಯುವತ್ತ ಚಿಂತನೆ
ಇತ್ತೀಚೆಗೆ ಕಾಫಿ, ಕರಿಮೆಣಸು ಜತೆಯಲ್ಲಿ ಇಲ್ಲಿನವರು ಬಾಳೆ, ಶುಂಠಿ ಇನ್ನಿತರ ಕೃಷಿಯನ್ನು ಮಾಡಲಾರಂಭಿಸಿದ್ದಾನೆ. ಒಂದಷ್ಟು ಹಣ್ಣನ್ನು ಬೆಳೆಯುವತ್ತ ಚಿಂತನೆ ಮಾಡಿದ್ದಾನೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಮಾಡುವುದು ಈಗ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ. ಕೆಲವು ಬೆಳೆದ ಅನಾನಸ್, ಕಿತ್ತಳೆ, ಮಾವು, ಹಲಸು ಹೀಗೆ ಹಲವು ರೀತಿಯ ಹಣ್ಣುಗಳನ್ನು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡಲು ಆರಂಭಿಸಿದ್ದಾರೆ.
ಉತ್ತಮವಾಗಿ ಬೆಳೆಯುವ ಬೆಣ್ಣೆಹಣ್ಣು
ಒಂದು ಕಾಲದಲ್ಲಿ ಕಾಫಿ ತೋಟದ ನಡುವೆ ಹಣ್ಣು ಬಿಟ್ಟು ಅವುಗಳ ಪಾಡಿಗೆ ನೆಲಕ್ಕೆ ಬಿದ್ದು ಕೊಳೆತು ಹೋಗುತ್ತಿದ್ದ ಬೆಣ್ಣೆಹಣ್ಣಿಗೂ ಈಗ ಬೆಲೆ ಬಂದಿದೆ. ಇವು ಕೊಡಗಿನ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುವುದರಿಂದ ಒಂದಷ್ಟು ಆದಾಯ ಪಡೆಯಲು ಸಾಧ್ಯವಿದೆ. ಆದರೆ ಇದುವರೆಗೂ ಇಲ್ಲಿ ವಾಣಿಜ್ಯ ದೃಷ್ಠಿಯಿಂದ ಇದನ್ನು ಬೆಳೆದಿಲ್ಲ. ಆದರೆ ಬೆಳೆದರೆ ಒಂದಷ್ಟು ಆದಾಯ ಪಡೆಯಲು ಸಾಧ್ಯವಿದೆ ಎಂಬುದು ಅಷ್ಟೇ ಸತ್ಯ.
ಅಮೆರಿಕಾದಿಂದ ಬೆಂಗಳೂರಿಗೆ ಬೆಣ್ಣೆಹಣ್ಣು
ಇನ್ನು ಬೆಣ್ಣೆಹಣ್ಣಿನ ಬಗ್ಗೆ ಹೇಳಬೇಕಾದರೆ ಮನೆಬಳಿ ಒಂದಷ್ಟು ಜಾಗವಿದ್ದರೆ ಈ ಮರವನ್ನು ನೆಡುವುದರಿಂದ ಪೌಷ್ಠಿಕಾಂಶವುಳ್ಳ ಆರೋಗ್ಯದಾಯಕ ಹಣ್ಣನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಣ್ಣೆಹಣ್ಣು ಮೂಲತಃ ಅಮೇರಿಕಾದ ಉಷ್ಣವಲಯದ್ದಾಗಿದ್ದು, ಇದರ ಹೆಸರು ಅವೊಕಡೊ. ಬಹುಶಃ ಒಂದಕ್ಕಿಂತ ಹೆಚ್ಚಿನ ಕಾಡು ಪ್ರಭೇದಗಳಿಂದಾಗಿ ಇದು ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾ ಭಾಗದಲ್ಲಿ ಜನಜನಿತವಾಗಿ ಮುಂದೆ ವಿಶ್ವದ ಇತರ ಭಾಗಗಳಿಗೂ ಹರಡಿತು ಎಂದು ಹೇಳಲಾಗಿದೆ. ಬೆಂಗಳೂರಿಗೆ ಹೇಗೆ ಬಂತು ಎಂಬುದನ್ನು ನೋಡುವುದಾದರೆ 20ನೇ ಶತಮಾನದ ಆದಿಯಲ್ಲಿ ರಾಯಲ್ ಬೋಟಾನಿಕಲ್ ಗಾರ್ಡನ್ಸ್ನಿಂದ ಅಮೇರಿಕನ್ ಪಾದ್ರಿಯೊಬ್ಬರು ತಂದರು ಎನ್ನಲಾಗಿದೆ. ಇದೇ ಪಾದ್ರಿ ಶ್ರೀಲಂಕಾಕ್ಕೂ ಪರಿಚಯಿಸಿದರಂತೆ.
ರೈತರಿಗೆ ಬೆಳೆಸುವುದು ಕಷ್ಟವಾಗಲ್ಲ
ಬೆಂಗಳೂರಿಗೆ ಬಂದ ಬೆಣ್ಣೆಹಣ್ಣು ಮುಂದೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಸಿಕ್ಕಿಂ ಹಾಗೂ ಇನ್ನಿತರ ರಾಜ್ಯಗಳಿಗೂ ಹರಡಿತಂತೆ. ಹಣ್ಣಿನ ಸಿಪ್ಪೆ ಮತ್ತು ಬೀಜದ ನಡುವಿನ ಮೃದುವಾದ ತಿರುಳನ್ನು ತಿನ್ನಲು ಬಳಸಬಹುದು. ಇದು ಸಪ್ಪೆಯಾಗಿದ್ದು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ತಿನ್ನಬಹುದು. ಇದರಿಂದ ಪಾನೀಯ ಮಿಲ್ಕ್ ಶೇಕ್ ಮಾಡಬಹುದಾಗಿದೆ. ಬೀಜದಿಂದ ಸಂತಾನೋತ್ಪತ್ತಿ ಮಾಡಬಹುದಾಗಿದೆ. ಗಿಡವು ಹೆಚ್ಚು ಗೊಬ್ಬರ ನೀರು ಬಯಸದೆ ಶೀಘ್ರವಾಗಿ ಬೆಳೆದು ಫಸಲು ನೀಡುತ್ತದೆ.
ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು
ಹಣ್ಣಿನಲ್ಲಿ ನಾರಿನ ಅಂಶ, ಪೊಟ್ಯಾಷಿಯಂ, ವಿಟಮಿನ್ ಸಿ ಮತ್ತು ಬಿ ಇದೆ. ಶೇ. 4ರಷ್ಟು ಪ್ರೋಟಿನ್ ಹಾಗೂ ಶೇ.30ರಷ್ಟು ಕೊಬ್ಬಿನ ಅಂಶ, ಅಲ್ಪಪಿಷ್ಟ ಶಾಕರ ಗುಣ ಸೇರಿದಂತೆ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಹೇಳಲಾಗಿದೆ. ದಕ್ಷಿಣ ಭಾರತದ ಸಮಶೀತೋಷ್ಣ ಹವಾಮಾನಕ್ಕೆ ಇದು ಹೊಂದಿಕೊಂಡಿರುವುದರಿಂದ ಎಲ್ಲ ಕಡೆಯೂ ಬೆಳೆಯಬಹುದಾಗಿದೆ. ಇಲ್ಲಿನ ವಾತಾವರಣದಲ್ಲಿ ಬಹುತೇಕ ಹಣ್ಣಿನ ಮರಗಳನ್ನು ಬೆಳೆಸಬಹುದಾಗಿದ್ದು, ಮಾರುಕಟ್ಟೆಯ ಕೊರತೆ ಬೆಳೆಗಾರರನ್ನು ಅವುಗಳಿಂದ ದೂರ ಉಳಿಯುವಂತೆ ಮಾಡಿದೆಯಷ್ಟೆ.