ಕೊಡವ ಯುವತಿಯರ ಅಂತರ್ಜಾತಿ ವಿವಾಹ ಕಡಿವಾಣಕ್ಕೆ ಕೊಡವ ಸಮಾಜ ತೀರ್ಮಾನ
ಮಡಿಕೇರಿ, ಸೆಪ್ಟೆಂಬರ್ 30; ಆಧುನೀಕತೆಯ ಕಾರಣದಿಂದಾಗಿ ಇಂದು ಸಮಾಜದಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಸಮಾಜದಲ್ಲಿ ಈಗಲೂ ಜೀವಂತವಾಗಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅಂತರ್ಜಾತಿ ವಿವಾಹಗಳೇ ಸೂಕ್ತ ಮದ್ದಾಗಿದೆ. ಆದರೆ ಈ ಅಂತರ್ಜಾತಿ ವಿವಾಹದಿಂದಾಗಿ ಕೆಲವೊಂದು ಸಣ್ಣ ಸಮುದಾಯಗಳಿಗೆ ಗಂಡು ಮತ್ತು ಹೆಣ್ಣು ಸಿಗುವುದೇ ಕಷ್ಟವಾಗಿದೆ.
ಉತ್ತರ ಕನ್ನಡದ ಹವ್ಯಕ ಸಮುದಾಯದ ವರರಿಗೆ ಸ್ವಜಾತೀಯ ವಧುಗಳು ಸಿಗುವುದೇ ದುರ್ಲಭವಾಗಿದೆ. ಇತ್ತೀಚೆಗೆ ರಾಜ್ಯದ ಪುಟ್ಟ ಜಿಲ್ಲೆ, ವಿಶಿಷ್ಟ ಸಂಸ್ಖೃತಿಯ ಕೊಡಗಿನಲ್ಲೂ ಕೊಡವ ಜನಾಂಗದಲ್ಲಿ ಯುವತಿಯರ ಕೊರತೆ ಕಂಡು ಬರುತ್ತಿದೆ. ಈ ಅಸಮತೋಲನಕ್ಕೆ ಕಡಿವಾಣ ಹಾಕಲು ಕೊಡವ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ನಾಂದಿಯಾಗಿ ದಕ್ಷಿಣ ಕೊಡಗಿನ ಬಾಳೆಲೆ ಕೊಡವ ಸಮಾಜವು ಕೊಡವ ಯುವತಿಯರು ಅಂತರ್ಜಾತಿ ಯುವಕನನ್ನು ಮದುವೆ ಆಗುವುದಾದರೆ ಕಲ್ಯಾಣ ಮಂಟಪ ಬಾಡಿಗೆಗೆ ನೀಡದಿರಲು ತೀರ್ಮಾನಿಸಿದೆ.
ಸಾವಿನ ಮನೆಯಲ್ಲಿ ನೋ ಆಲ್ಕೊಹಾಲ್; ಕೊಡವ ಸಮಾಜ ತೀರ್ಮಾನ
ಅಂತರ್ಜಾತಿ ಯುವಕರು "ಗೆಜ್ಜೆತಂಡ್" ಹಿಡಿಯುವಂತಿಲ್ಲ
ಕಲ್ಯಾಣ ಮಂಟಪ ಬಾಡಿಗೆ ನೀಡುವುದಿಲ್ಲ ಎಂಬ ತೀರ್ಮಾನದೊಂದಿಗೆ, ಆ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, "ಗೆಜ್ಜೆತಂಡ್" ಅನ್ನು ಹಿಡಿಯುವಂತಿಲ್ಲ ಎಂದು ಬಾಳೆಲೆ ಕೊಡವ ಸಮಾಜದಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.
ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ ಅವರು, ಇನ್ನು ಮುಂದೆ ಕೊಡವ ಯುವತಿಯರು ಅಂತರ್ಜಾತಿ ಮದುವೆಯಾದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಾದ ಕುಪ್ಯ ಚೇಲೆ, ಪೀಚೆಕತ್ತಿ, ಮಂಡೆತುಣಿ ಮತ್ತು ಕೊಡವ ಮದುಮಗ ಮದುವೆಯಲ್ಲಿ ಹಿಡಿಯುವ ಗೆಜ್ಜೆತಂಡ್ ಅನ್ನು ಅನ್ಯ ಜಾತಿಯ ಹುಡುಗರಿಗೆ ತೊಡಿಸಿ ವೈಭವೀಕರಿಸುವಂತಿಲ್ಲ ಎಂದು ತಿಳಿಸಿದ್ದಾರೆ.
"ನಮ್ಮ ಸಂಸ್ಕೃತಿಗೆ ಧಕ್ಕೆ ತರುವುದಕ್ಕೆ ವಿರೋಧವಿದೆ"
ಈ ಕುರಿತು ಯುನೈಟೆಡ್ ಕೊಡವ ಆರ್ಗನೈಸೇಷನ್ ಅಧ್ಯಕ್ಷ ಮಂಜು ಚಿಣ್ಣಪ್ಪ ಅವರನ್ನು ಮಾತಾಡಿಸಿದಾಗ, 18 ವಯಸ್ಸು ಮೀರಿದ ಯುವಕ ಯುವತಿಯರು ನಮ್ಮ ಸಂವಿಧಾನದ ಪ್ರಕಾರ ಅವರಿಗಿಷ್ಟ ಬಂದವರನ್ನು ಮದುವೆ ಆಗುವ ಹಕ್ಕು ಹೊಂದಿದ್ದಾರೆ. ಆದರೆ ಕೊಡವ ಸಮುದಾಯದಲ್ಲಿ ಇಂದು ಯುವತಿಯರು ಅನ್ಯ ಜಾತಿಯವರನ್ನು ಮದುವೆ ಆಗುತ್ತಿರುವುದಕ್ಕೆ ಸಂಸ್ಕೃತಿ, ಸಂಸ್ಕಾರಗಳ ಅರಿವಿಲ್ಲದಿರುವುದೇ ಆಗಿದೆ. ಆ ರೀತಿ ಮದುವೆ ಆಗುವುದಾದರೆ ಅವರು ಮದುವೆ ಮಾಡಿಕೊಂಡು ಹೋಗಲಿ, ತಮ್ಮ ಗಂಡನ ಮನೆ ಬೆಳಗಲಿ. ಆದರೆ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಿ ಹೋಗುವುದಕ್ಕೆ ನಮ್ಮ ತೀವ್ರ ವಿರೋಧ ಇದೆ ಎಂದರು. ಯಾವುದೋ ಜನಾಂಗದ ಯುವಕರು ಕೊಡವ ಪರಂಪರೆಯ ಸಾಂಪ್ರದಾಯಿಕ ಹೆಮ್ಮೆಯ ಗುರುತಾದ ವೇಷ ಭೂಷಣ ಧರಿಸುವುದನ್ನು ಒಪ್ಪಲಾಗದು ಎಂದರು.
ಕೊಡವ ಯುವಕರಿಗೆ ವಧುವಿನ ಕೊರತೆ
ಇಂದು ಕೊಡವ ಜನಾಂಗದ ಯುವತಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಮಹಾನಗರಗಳಲ್ಲಿ ಉನ್ನತ ಸಂಬಳ ಪಡೆಯುವ ಹುದ್ದೆಯಲ್ಲಿದ್ದಾರೆ. ಅವರು ಸಹಜವಾಗೇ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಸೂಕ್ತ ವರನನ್ನು ಪ್ರೇಮ ವಿವಾಹ ಆಗುತ್ತಿದ್ದಾರೆ. ಕೊಡಗಿನಲ್ಲಿ ಇಂದು ಉದ್ಯೋಗ ನಿಮಿತ್ತ ಯುವಕ ಯುವತಿಯರು ಬೆಂಗಳೂರಿನ ಹಾದಿ ಹಿಡಿದಿದ್ದಾರೆ. ಇದು ಬದುಕಿನ ಅನಿವಾರ್ಯತೆ ಕೂಡ. ಆದರೆ ಈ ರೀತಿ ಅಂತರ್ಜಾತಿ ವಿವಾಹ ಆಗುತ್ತಿರುವುದರಿಂದ ಇಂದು ಕೊಡವ ಯುವಕರು ವಧುಗಳ ಕೊರತೆಯನ್ನು ಎದುರಿಸುತಿದ್ದಾರೆ.
Recommended Video
35 ಕೊಡವ ಸಮಾಜಗಳೂ ಅನುಸರಿಸುವ ಸಾಧ್ಯತೆ
ಕೆಲವೊಂದು ಸಂದರ್ಭ ಯುವಕ ಯುವತಿ ಇಬ್ಬರೂ ಶ್ರೀಮಂತರೇ ಆಗಿರುತ್ತಾರೆ. ಆದರೆ ಯುವಕ ಅಥವಾ ಯುವತಿ ಇತ್ತೀಚೆಗೆ ಶ್ರೀಮಂತರಾಗಿದ್ದು, ಅವರ ಕುಟುಂಬದವರೆಲ್ಲರೂ ಮಧ್ಯಮ ವರ್ಗದವರಾಗಿದ್ದು ಸಣ್ಣ ಉದ್ಯೋಗದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಕುಟುಂಬ ಸರಿಹೊಂದುವುದಿಲ್ಲ ಎಂಬ ಕಾರಣಕ್ಕೆ ಮದುವೆ ಆಗುವುದಿಲ್ಲ.
ಇದೀಗ ಬಾಳೆಲೆ ಕೊಡವ ಸಮಾಜವು ಮಾಡಿರುವ ತೀರ್ಮಾನವನ್ನೇ ಉಳಿದ 35 ಕೊಡವ ಸಮಾಜಗಳೂ ಅನುಸರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಬಾಳೆಲೆ ಕೊಡವ ಸಮಾಜ ಮದುವೆಯ ಹಿಂದಿನ ದಿನದ ಗಂಗೆ ಪೂಜೆಯ ಸಂದರ್ಭದಲ್ಲಿ ಮದ್ಯ ಸೇವನೆಯನ್ನು ನಿಷೇಧಿಸಿತ್ತು. ನಂತರ ಅನೇಕ ಸಮಾಜಗಳು ಮದ್ಯ ಸೇವನೆಯನ್ನು ನಿಷೇಧಿಸಿದವು.