ಮಡಿಕೇರಿ: ಯುವಕನ ಸಲಿಂಗಿ ವಿವಾಹಕ್ಕೆ ಕೊಡವ ಮುಖಂಡರ ಆಕ್ರೋಶ
ಮಡಿಕೇರಿ, ಅಕ್ಟೋಬರ್ 8: ಈಗ ಎಲ್ಲೆಡೆ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳ ಜೊತೆಗೆ ಸಲಿಂಗಿಗಳ ವಿವಾಹ ನಡೆಯುವುದನ್ನು ಆಗಾಗ ಓದುತ್ತಿರುತ್ತೇವೆ. ಈ ನಡುವೆ ಇಂತಹದ್ದೇ ಮತ್ತೊಂದು ಸಲಿಂಗ ಜೋಡಿ ಅದ್ಧೂರಿಯಾಗಿ ಅದೂ ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆದರೆ ಈ ಮದುವೆಗೆ ಕೊಡವ ಜನಾಂಗದವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಮದುವೆ ಜನಾಂಗವನ್ನು ಕೆರಳಿಸಿದ್ದು, ಕೊಡವ ಸಮಾಜದಿಂದಲೇ ಮದುಮಗನನ್ನು ಹೊರಗಿಡಲು ಸಜ್ಜಾಗಿದೆ. ಕೊಡಗು ಮೂಲದ ಶರತ್ ಪೊನ್ನಪ್ಪ ಎಂಬುವವರು ಸಂದೀಪ್ ದೋಸಾಂಜ್ ಎಂಬಾತನನ್ನು ಮದುವೆ ಆಗಿದ್ದಾನೆ. ವೈದ್ಯನಾಗಿರುವ ಶರತ್ ಪೊನ್ನಪ್ಪ ಅಮೇರಿಕಾಗೆ ತೆರಳಿ 20 ವರ್ಷ ಆಗುತ್ತಾ ಬಂದಿದೆ.
ಕೊಡವ ಸಂಪ್ರದಾಯದ ಶೈಲಿಯಲ್ಲಿ ಸಲಿಂಗ ಮದುವೆ
ಅಲ್ಲಿ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬಾತನ ಪರಿಚಯವಾಗಿದ್ದು, ಇಬ್ಬರಿಗೂ ಲವ್ ಆಗಿದೆ. ಪ್ರೀತಿ ಬೆಳೆದು ಕೊನೆಗೆ ಕಳೆದ ಸೆ.26 ರಂದು ಮದುವೆಯನ್ನೂ ಮಾಡಿಕೊಂಡಿದ್ದಾರೆ. ಅದೂ ಕೊಡವ ಸಂಪ್ರದಾಯದ ಶೈಲಿಯಲ್ಲಿ ಸಲಿಂಗ ಮದುವೆ ಸಮಾರಂಭದಲ್ಲಿ ಮದು ಮಕ್ಕಳ ಸ್ನೇಹಿತರು ಭಾಗಿಯಾಗಿ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಡಿಯೋ, ಫೋಟೋ ವೈರಲ್ ಆಗಿದೆ.
ಕೊಡವ ಜನಾಂಗಕ್ಕೆ ಅವಮಾನ
ಕೊಡವರ ಆಕ್ರೋಶಕ್ಕೆ ಮುಖ್ಯ ಕಾರಣ ಅಗಿರುವುದು ಕೊಡವ ಸಂಪ್ರದಾಯಿಕ ಉಡುಪು ತೊಟ್ಟು ಮದುವೆ ಆಗಿರುವುದರ ಬಗ್ಗೆ. ತಲೆಗೆ ಪೇಟ ಧರಿಸಿದ್ದ ಸಲಿಂಗಿ ಮದುಮಕ್ಕಳು, ಕೊಡವರ ಸಾಂಪ್ರದಾಯಿಕ ಉಡುಗೆಯನ್ನು ಅರೆಬರೆಯಾಗಿ ತೊಟ್ಟಿದ್ದರು. ಇದರಿಂದ ಕೊಡವ ಜನಾಂಗಕ್ಕೆ ಅವಮಾನವಾಗಿದ್ದು, ಕೊಡವರ ಇತಿಹಾಸದಲ್ಲಿ ಇಂಥ ಘಟನೆ ನಡೆದಿರಲಿಲ್ಲ.
ಮಡಿಕೇರಿ ಕೊಡವ ಸಮಾಜದಿಂದ ತುರ್ತು ಸಭೆ
ಈ ಬಗ್ಗೆ ಅಮೆರಿಕ ಕೊಡವ ಕೂಟಕ್ಕೆ ಪತ್ರ ಬರೆದು ವಿಚಾರ ಮಾಡಿ ಸ್ಪಷ್ಟನೆ ನೀಡುವಂತೆ ಮಡಿಕೇರಿ ಕೊಡವ ಸಮಾಜ ಕೇಳಿಕೊಂಡಿದೆ. ಇನ್ನು ಕಂಡಕಂಡಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಬಳಸುವುದಕ್ಕೆ ಕೊಡವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಡವ ಜನಾಂಗದಿಂದಲೇ ಆತನನ್ನು ಹೊರಗಿಡುವಂತೆ ಕೊಡವ ಸಮಾಜದ ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್ ದೇವಯ್ಯ ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ತುರ್ತು ಸಭೆಯನ್ನೂ ನಡೆಸಲಾಗಿದೆ.
Recommended Video
ನಮ್ಮ ಸಂಸ್ಕೃತಿಯ ಅವಮಾನವೆಂದ ಕೊಡವ ಸಮಾಜ
ಶರತ್ ಪೊನ್ನಪ್ಪ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ 20 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅವರ ತಂದೆ ಜಯಕುಮಾರ್ ಇಂಜಿನಿಯರ್ ಆಗಿ, ತಾಯಿ ನಳಿನಿ ವೈದ್ಯರಾಗಿ ದುಬೈನಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಅಲ್ಲಿಂದ ಬಂದು ಮೈಸೂರಿನಲ್ಲಿ ನೆಲೆಸಿದ್ದಾರೆ.
ಈ ಕುರಿತು ಮಾತನಾಡಿದ ಯುನೈಟೆಡ್ ಕೊಡವ ಅರ್ಗನೈಸೇಷನ್ ಅಧ್ಯಕ್ಷ ಮಂಜು ಚಿಣ್ಣಪ್ಪ ಅವರು ಪ್ರತಿಕ್ರಿಯಿಸಿ, ಸಲಿಂಗಿ ಮದುವೆಯಲ್ಲಿ ಕೊಡವ ಸಂಪ್ರದಾಯ ಉಡುಪು ಧರಿಸಿ ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.