ಕೊಡವರ ಗೋಮಾಂಸ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ಎಫ್ಐಆರ್
ಮಡಿಕೇರಿ, ಜನವರಿ 8: ಕೊಡಗಿನಲ್ಲಿ ಕೊಡವರೂ ಗೋಮಾಂಸ ತಿನ್ನುತ್ತಾರೆ ಎಂದು ಹೇಳಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 157 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಗೋಮಾಂಸ ಹೇಳಿಕೆಯ ಬೆನ್ನಲ್ಲೇ ಸಿದ್ದರಾಮಯ್ಯ ಅವರ ವಿರುದ್ಧ ಕೊಡಗಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಡಿಕೇರಿ ತಾಲೂಕು ಮುಕ್ಕೋಡ್ಲಿನ ನಿವಾಸಿಯೂ ಆಗಿರುವ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು ಕಳೆದ ಡಿಸೆಂಬರ್ 21 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿದ್ದರು.
ಸಿದ್ದು ಹೇಳಿಕೆ ಕೊಡಗು ಕಾಂಗ್ರೆಸ್ಗೆ ಮಾರಕವಾಗುತ್ತಾ?
ಆದರೆ, ಇದುವರೆಗೆ ಎಫ್ಐಆರ್ ದಾಖಲಾಗಿರಲಿಲ್ಲ. ಕೊನೆಗೂ ದೂರಿನ ಆಧಾರದಲ್ಲಿ ಪೊಲೀಸರು ಸಿದ್ದರಾಮಯ್ಯ ಅವರ ವಿರುದ್ಧ ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿ ಕುಶಾಲಪ್ಪ ಅವರು, ""ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಡವರ ಭಾವನೆಗಳಿಗೆ ಘಾಸಿ ಮಾಡಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153/ಎ ಮತ್ತು 295/ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗಿತ್ತು. ಆದರೆ, ಸಾಧಾರಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಭಾವಿ ಆಗಿರುವ ಅವರನ್ನು ಈ ಪ್ರಕರಣದಿಂದ ಖುಲಾಸೆ ಮಾಡುವ ಹುನ್ನಾರ ನಡೆದಿದೆ. ಆದರೆ ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸುತ್ತೇವೆ'' ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಕೊಡಗಿಗೆ ಬಂದು ಬಹಿರಂಗ ಕ್ಷಮೆಯಾಚಿಸಿದರೆ, ಒಪ್ಪಿಕೊಳ್ಳುವಿರಾ ಎಂಬುದಕ್ಕೆ ಪ್ರತಿಕ್ರಿಯಿಸಿರುವ ರವಿಕುಶಾಲಪ್ಪ, ಸಿದ್ದರಾಮಯ್ಯ ಅವರು ಅಕ್ಷಮ್ಯ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅದಕ್ಕೆ ಕ್ಷಮೆಯೇ ಇಲ್ಲ, ಏನಿದ್ದರೂ ಅದು ನ್ಯಾಯಾಲಯದಲ್ಲೇ ನಿರ್ಧಾರವಾಗಲಿ ಎಂದರು.
ಮತ್ತೊಂದೆಡೆ ಕಾಂಗ್ರೆಸ್ ನ ಐಸಿಸಿಸಿ ವಕ್ತಾರರಾಗಿರುವ ಜಿಲ್ಲೆಯವರೇ ಆದ ಬಿಜ್ರೇಶ್ ಕಾಳಪ್ಪ, "ಸಿದ್ದರಾಮಯ್ಯ ಅವರು ಹಂದಿ ಮಾಂಸ ಹೇಳಲು ಹೋಗಿ ದನದ ಮಾಂಸ ಅಂತ ಹೇಳಿದ್ದಾರೆ. ಅದು ಉದ್ದೇಶಪೂರ್ವಕವಾಗಿ ಹೇಳಿರುವ ಹೇಳಿಕೆ ಅಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿರುವ 35 ಕೊಡವ ಸಮಾಜಗಳ ಒಕ್ಕೂಟ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಕ್ಷ್ಣ ವಿರೋಧ ವ್ಯಕ್ತಪಡಿಸಿದ್ದು, ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿತ್ತು. ಆದರೆ ಅವರು ಬರೀ ವಿಷಾದ ವ್ಯಕ್ತಪಡಿಸಿದ್ದರು.
ಈ ಕುರಿತು ಮಾತನಾಡಿದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ಸಿದ್ದರಾಮಯ್ಯ ಅವರು ನಿದ್ದೆರಾಮಯ್ಯ. ಕುಂಭಕರ್ಣ ನಿದ್ದೆಯಿಂದ ಎದ್ದು ಏನೇನೋ ಮಾತನಾಡುತ್ತಾರೆ, ಏನೇನೋ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಒಂದು ಜನಾಂಗವನ್ನು ಹೀಗೆ ಹೀಯಾಳಿಸಿ ಮಾತನಾಡುವುದು ಸರಿಯಲ್ಲ. ಈ ಕುರಿತು ಮುಂದಿನ ಅಧಿವೇಶನದಲ್ಲೂ ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.