ನೌಕರನಿಗೆ ಕಪಾಳ ಮೋಕ್ಷ ಮಾಡಿದ ಕೊಡಗು ಜಿ.ಪಂ ಸಿಇಒ
ಮಡಿಕೇರಿ, ಜನವರಿ 22: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಯ ಬೆರಳಚ್ಚು ಪಡೆಯದೆ ಹಣ ಪಾವತಿ ಮಾಡುವ ಮೂಲಕ ಡಿಜಿಟಲ್ ಕೀಯನ್ನು ದುರ್ಬಳಕೆ ಮಾಡಿಕೊಂಡ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆ ತಾಂತ್ರಿಕ ಸಹಾಯಕನಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಣಾ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ.
ತಾಂತ್ರಿಕ ಸಹಾಯಕ ನೌಕರ ರಂಜಿತ್ ಎಂಬಾತನೇ ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರಿಂದ ಕಪಾಳ ಮೋಕ್ಷಕ್ಕೆ ಗುರಿಯಾದವನು. ಸಿಇಒ ಅವರು ಉದ್ಯೋಗಿಯ ಕಪಾಳಕ್ಕೆ ಹೊಡೆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡುತಿದ್ದ ರಂಜಿತ ಎಂಬವರು ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಅವರ ಬೆರಳಚ್ಚು (ಥಂಬ್) ಇಲ್ಲದೆ ಹಣ ಪಾವತಿ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ್ದರು.
ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿರುವ ಡಿಜಿಟಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಕಾಮಗಾರಿಗಳಿಗೆ ನಕಲಿ ಥಂಬ್ ನೀಡಿ ಹಣವನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ನೌಕರ ರಂಜಿತ್ನನ್ನು ವಿಚಾರಿಸಿದಾಗ, ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳಿಗೆ ಆಗಾಗ ಸ್ಥಳ ಪರಿಶೀಲನೆ ಮಾಡಲು ತೆರಳುತ್ತಾರೆ, ಅವರು ಬರುವವರೆಗೂ ಹಣ ನೀಡಲು ಆಗುವುದಿಲ್ಲ ಹಾಗಾಗಿ ಉದ್ಯೋಗ ಖಾತ್ರಿ ಕಾಮಗಾರಿಗೆ ಸಂಬಂಧಪಟ್ಟಂತೆ ಹೆಬ್ಬೆಟ್ಟಿನ ಗುರುತನ್ನು ತನಗೆ ಹೊಂದಾಣಿಕೆ ಆಗುವ ಹಾಗೆ ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ.
ತಾಲ್ಲೂಕು ಪಂಚಾಯಿತಿ ಅಧಿಕಾರಿ ಬೆರಳಚ್ಚಿನ ಬದಲಿಗೆ ತನ್ನ ಬೆರಳಚ್ಚು ಬದಲಾಯಿಸಿಕೊಂಡ ಬಗ್ಗೆ ಕೋಪಗೊಂಡ ಜಿಲ್ಲಾ ಪಂಚಾಯಿತಿ ಸಿಇಓ ಅವರು ನೌಕರ ರಂಜಿತ್ ಕಪಾಳಕ್ಕೆ ಹೊಡೆದಿದ್ದಾರೆ. ಅಲ್ಲದೆ ಡಿಜಿಟಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರ ದುರ್ಬಳಕೆ ಹಾಗೂ ಮೋಸ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸೂಚಿಸಿದ್ದು, ಅದರಂತೆ ತಾ.ಪಂ ಸಿಇಒ ದೂರು ನೀಡಿದ್ದಾರೆ.
ರಂಜಿತ್ ಕೂಡಾ ಸಿಇಓ ವಿರುದ್ಧ ದೂರು ನೀಡಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.