ನಿರಾಳವಾಗಿದ್ದ ಕೊಡಗಿಗೆ ಮತ್ತೆ ವಕ್ಕರಿಸಿತಲ್ಲಾ ಕೊರೊನಾ
ಮಡಿಕೇರಿ, ಮೇ 18: ಇಡೀ ದೇಶದೆಲ್ಲೆಡೆ ಕೊರೊನಾ ಸೋಂಕು ಆವರಿಸಿದಾಗ ಈ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೇವಲ ಒಂದು ಸೋಂಕು ಪ್ರಕರಣ ಪತ್ತೆ ಆಗಿತ್ತು.
ಅದೂ ಕೊಲ್ಲಿ ರಾಷ್ಟ್ರದಿಂದ ಬಂದ ವ್ಯಕ್ತಿಯೊಬ್ಬರಿಂದ ಕೊರೊನಾ ತಗುಲಿದ್ದು, ಅವರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ಸಾಗಿದ್ದರು. ಆ ನಂತರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದ ಜಿಲ್ಲಾಡಳಿತ, ಕೊರೊನಾ ಜಿಲ್ಲೆಗೆ ತಾಗದಂತೆ ಎಚ್ಚರಿಕೆಯಿಂದ ನೋಡಿಕೊಂಡಿತ್ತು. ಹೀಗಾಗಿ ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಕಾಣಿಸಿಕೊಂಡು, ಇಲ್ಲಿನ ಜನರೂ ನೆಮ್ಮದಿಯಿಂದ ಇದ್ದರು.
ಕೊಡಗು-ಕೇರಳ ನಡುವಿನ ಸಂಚಾರಕ್ಕೆ ಮಾರ್ಗಸೂಚಿಗಳು
ಆದರೆ ಸತತ ಎರಡು ತಿಂಗಳ ನಂತರ ಇದೀಗ ಕೊಡಗಿನಲ್ಲಿ ಮತ್ತೊಂದು ಸೋಂಕು ಪ್ರಕರಣ ಪತ್ತೆ ಆಗಿದೆ. ಈ ಒಂದು ಸಂಗತಿ ಜಿಲ್ಲೆಯಲ್ಲಿ ಆತಂಕವನ್ನು ಉಂಟು ಮಾಡಿದೆ. ಇತ್ತೀಚೆಗೆ ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರಲ್ಲಿ ಇಂದು ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಆದರೆ ಮುಂಬೈನಿಂದ ಬಂದಿದ್ದ ಈ ಮಹಿಳೆಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಇದರಿಂದ ಇತರರಿಗೆ ಸೋಂಕು ಹರಡಿಲ್ಲ ಎನ್ನಲಾಗಿದೆ.
ಆದರೂ ಕಳೆದ ಎರಡು ತಿಂಗಳಿನಿಂದಲೂ ಗ್ರೀನ್ ಜೋನ್ ನಲ್ಲಿದ್ದ ಕೊಡಗಿನ ಜನತೆಗೆ ಈ ಹೊಸ ಸೋಂಕು ಪ್ರಕರಣದಿಂದ ಆತಂಕ ಶುರುವಾಗಿದೆ.