ಕೊಡಗು : ವಿವಿಧ ಪ್ರದೇಶದಲ್ಲಿ ತಂಪೆರೆದ ಆಲಿಕಲ್ಲು ಸಹಿತ ಮಳೆ
ಮಡಿಕೇರಿ, ಮೇ 16 : ಕೊಡಗು ಜಿಲ್ಲೆಯಲ್ಲಿ ಗುರುವಾರ ಮುಂಗಾರು ಪೂರ್ವ ಮಳೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ.
ಗುರುವಾರ ಮಧ್ಯಾಹ್ನ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಕೊಡಗು ಕೇರಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಗಾಳಿಗೆ ಮರ ಉರುಳಿ ಬಿದ್ದು, ಹಲವು ತಾಸು ಸಂಚಾರ ವ್ಯತ್ಯಯ ಉಂಟಾಗಿತ್ತು.
ಕೊಡಗು ಪ್ರವಾಹ : 35 ಸಂತ್ರಸ್ತರಿಗೆ ಮನೆಗಳ ಹಂಚಿಕೆ
ಸೋಮವಾರಪೇಟೆ ತಾಲೂಕಿನ ಕುಂಬೂರು, ಮಾದಾಪುರ, ಚಟ್ಟಳ್ಳಿ, ಸುಂಠಿಕೊಪ್ಪ, ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಆಲಿಕಲ್ಲು ಬಿದ್ದಿದ್ದು, ಗಾಳಿಯ ಅಬ್ಬರವೂ ಜೋರಾಗಿತ್ತು.
ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು
ಮಡಿಕೇರಿ ನಗರ, ನಾಪೋಕ್ಲು, ಭಾಗಮಂಡಲ, ಕಾಟಕೇರಿ, ಚೇರಂಬಾಣೆ, ಕರ್ಣಂಗೇರಿ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಆಲಿಕಲ್ಲು ಹೆಚ್ಚು ಸುರಿದಿದ್ದು, ಕೆಲವು ಕಡೆ ಆಲಿಕಲ್ಲು ಬಿದ್ದು ಕಾರಿನ ಗಾಜುಗಳು ಜಖಂಗೊಂಡಿವೆ.
ಕೊಡಗಿನ ಪ್ರಕೃತಿ ವಿಕೋಪ ಎದುರಿಸಲು ಪೊಲೀಸ್ ಪಡೆ ಸನ್ನದ್ಧ!
ಸಂಚಾರ ವ್ಯತ್ಯಯ : ಮಳೆಯೊಂದಿಗೆ ಗಾಳಿಯ ಆರ್ಭಟವೂ ಹೆಚ್ಚಾಗಿತ್ತು. ಕೊಡಗು-ಕೇರಳ ಸಂಪರ್ಕಿಸುವ ಅಂತರ ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದು ಎರಡು ಭಾಗದ ವಾಹನ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತವಾಗಿತ್ತು.
ರಾತ್ರಿಯ ವೇಳೆಗೆ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಳೆದ ವರ್ಷ ಸುರಿದ ಮಳೆಗೆ ಈ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿತ್ತು. ಬೇರುಗಳು ಸಡಿಲವಾದ ಮರಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಳೆದ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಮಳೆ ಮತ್ತು ಭೂ ಕುಸಿತದಿಂದಾಗಿ ಅಪಾರವಾದ ನಷ್ಟ ಉಂಟಾಗಿತ್ತು. ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲಾಡಳಿತ ಹಾನಿ ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.