ನಮಗೆ ಬಿಟ್ಟಿ ಊಟ ಬೇಡಿ, ಕೂಲಿ ಕೊಡ್ಸಿ ಎಂದ ಕೊಡಗು ನೆರೆ ಸಂತ್ರಸ್ತರು
ಮೈಸೂರು, ಆಗಸ್ಟ್ 27 :ಮಹಾಮಳೆಯ ಆರ್ಭಟಕ್ಕೆ ಸಿಲುಕಿ ನಲುಗಿದ ಜೀವಗಳ ಮಾತು ಕರುಣಾಜನಕವಾಗಿದೆ. ಇವರ ಮುಂದಿರುವ ಸವಾಲುಗಳು ಮಾತ್ರ ಹೇಳಲಸಾಧ್ಯವೇ ಸರಿ.
"ನಮಗೆ ಕೆಲಸ ಇಲ್ಲ. ಮನೆಯೂ ಇಲ್ಲ. ದುಡಿಯೋಕೆ ಕೂಲಿಯೂ ಇಲ್ಲ. ಈ ಮಳೆಯಿಂದಾಗಿ ಜೀವನ ಹಾಳಾಗಿ ಹೋಯ್ತು. ಮಹಿಳಾ ಸಂಘದಲ್ಲಿ ಸಾಲ ಮಾಡಿದ್ದೀವಿ ಮೇಡಂ. ಅವರಿಗೆ ನಾವು ಸಬೂಬು ಕೋಡೋಕೆ ಆಗುತ್ತದಾ ಹೇಳಿ ? ಹೀಗಾದ್ರೆ ಜೀವನ ನಡೆಸೋದು ಹೇಗೆ? " ಎಂದು ದುಃಖಿಸುತ್ತ ಮಡಿಕೇರಿಯ ಮೈತ್ರಿ ಪರಿಹಾರ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾರೆ ಎರಡನೇ ಮೊಣ್ಣಂಗೇರಿಯ ವಾರಿಜಾ.
ಸರ್ವಧರ್ಮೀಯರ ಐಕ್ಯತೆಗೆ ಇಂಬುಕೊಟ್ಟ ಪರಿಹಾರ ಕೇಂದ್ರಗಳು
ಹೌದು. ಕಂಡು ಕೇಳರಿಯದ ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಡಗಿನಲ್ಲಿ ಎದುರಾಗಿರುವುದು ದೊಡ್ಡ ಸಮಸ್ಯೆ. ಕೊಡಗು ಎಂದರೆ ಕಾಳು ಮೆಣಸು, ಏಲಕ್ಕಿ, ರಬ್ಬರ್, ಕಾಫಿಯ ಉದ್ಯಮಕ್ಕೆ ಹೆಸರುವಾಸಿ. ನೂರಾರು ಎಕರೆಯ ತೋಟದಲ್ಲಿ ದಿನನಿತ್ಯ ಸಾವಿರಾರು ಮಂದಿ ಕೂಲು ಕಾರ್ಮಿಕರು ದುಡಿಯುತ್ತಾರೆ.
ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಇವರಿಗೆ ಕೆಲಸವಿಲ್ಲದ ಸ್ಥಿತಿ. ಸಾವಿರಾರು ಎಕರೆ ತೋಟವನ್ನೇ ಆಹುತಿಗೆ ತೆಗೆದುಕೊಂಡ ಭೂ ಮಾತೆ ಇವರ ಒಂದು ತುತ್ತಿನ ಕೂಳನ್ನು ಕಿತ್ತುಕೊಂಡಿದ್ದಾಳೆ.
ಕೊಡಗಿನ ನಿರಾಶ್ರಿತರ ಶಿಬಿರಗಳಲ್ಲಿ ಸಂಗೀತ, ನೃತ್ಯ, ಯೋಗ...
ಶ್ರೀಮಂತರಿಗೆ ಬೆಳೆ ನಾಶ ಸಮಸ್ಯೆ, ಮನೆಗಳಿಗೆ ಅಲ್ಪಸ್ವಲ್ಪ ಹಾನಿ ಎಂಬುದನ್ನು ಬಿಟ್ಟರೆ ಬೇರೆ ಏನು ಸಮಸ್ಯೆ ಇಲ್ಲ. ಆದರೆ ಜಲಪ್ರಳಯದಲ್ಲಿ ಹೆಚ್ಚು ಹೊಡೆತ ಬಿದ್ದಿರುವುದು ಸಣ್ಣ ಪುಟ್ಟ ಅಸಂಘಟಿತ ಕೂಲಿ ಕಾರ್ಮಿಕರಿಗೆ. ಕೇವಲ ಸಾವಿರ ರೂಪಾಯಿಗಾಗಿ ಮಹಿಳಾ ಸಂಘದಲ್ಲಿ ಸಾಲ ಮಾಡಿರುವ ಮಹಿಳೆಯರಿಗೂ ಕೂಲಿಯೇ ಆಧಾರ.
ಒಂದರ್ಥದಲ್ಲಿ ಮಡಿಕೇರಿಯಲ್ಲಿ ಕಾಫಿ ತೋಟದ ಮಾಲೀಕರಿಗಿಂತ ಹೆಚ್ಚಿರುವವರು ಕೂಲಿಗಾರರೇ. ಒಬ್ಬೊಬ್ಬರು ರಾಜ್ಯದ ಮೂಲೆ ಮೂಲೆಗಳಿಂದ ಕಾಫಿ ನಾಡಿಗೆ ಧಾವಿಸಿ ಬಂದವರೇ. ನಿರಾಶ್ರಿತ ಕೇಂದ್ರದಲ್ಲಿ ಇರುವವರಿಗೇನೋ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಯೊಂದಿಗೆ ಒಂದು ತಿಂಗಳ ಧವಸ -ಧಾನ್ಯದ ವಿತರಣೆ ಮಾಡುವುದಾಗಿ ತಿಳಿಸಿದೆ. ಆದರೆ ಮುಂದೇನು?.
ಅವರ ಕೂಲಿಗೇನೂ ದಿಕ್ಕು? ಸರ್ಕಾರ ಇವರಿಗೆ ಕೂಲಿಯನ್ನು ನೀಡುವ ಬೇರೇ ಮಾರ್ಗವನ್ನೇನಾದರೂ ಕಂಡುಕೊಳ್ಳಲೇಬೇಕಾಗಿದೆ. ನಿಮಗೆ ಸರಕಾರ ಹಣ ನೀಡಬೇಕೇ ಎಂದು ನಿರಾಶ್ರಿತರನ್ನು ಒನ್ ಇಂಡಿಯಾ ಪ್ರಶ್ನಿಸಿದರೆ "ಮೇಡಂ ನಾವು ಸ್ವಾಭಿಮಾನಿಗಳು. ಕೊಟ್ಟು ಜೀವನ ಮಾಡಿದವರೇ ವಿನಃ. ಬಿಟ್ಟಿ ತಿಂದವರಲ್ಲ.
ನಾವು ಕಷ್ಟವಾದರೂ ಸರಿ ದುಡಿದು ಬದುಕುತ್ತೇವೆ" ಎಂದು ಗದ್ಗದಿತ ದನಿಯಲ್ಲೇ ಉತ್ತರಿಸುತ್ತವೆ ನಲುಗಿದ ಜೀವಗಳು.