ಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಕೊಡಗು ಪ್ರವಾಸಿ ಉತ್ಸವ
ಮಡಿಕೇರಿ, ಜನವರಿ 12 : ಕೊಡಗು ಪ್ರವಾಸಿ ಉತ್ಸವ ಶುಕ್ರವಾರದಿಂದ ಆರಂಭವಾಗಿದ್ದು, ಸ್ಥಳೀಯರು ಸೇರಿದಂತೆ ಪ್ರವಾಸಿರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಜನ ಕಾರ್ಯಕ್ರಮಗಳಲ್ಲಿ ನೆರೆಯುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ನಗರದ ಗಾಂಧಿ ಮೈದಾನದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಲ್ಲಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಮಳಿಗೆಯನ್ನು ತೆರೆಯಲಾಗಿದೆ.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನ ಮಳಿಗೆ, ಕೊಡಗು ಪ್ರಗತಿ ಪರ ಜೇನು ಕೃಷಿ ಸಹಕಾರ ಸಂಘ, ಸ್ವಚ್ಛ ಭಾರತ ಅಭಿಯಾನ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ನಿರ್ಮಿಸಿರುವ ಪ್ರದರ್ಶನ ಮಳಿಗೆ, ಐನ್ಮನೆ, ಹೋಟೆಲ್ ಕಾವೇರಿ, ಹೋಟೆಲ್ ಗ್ರೀನ್ ಲ್ಯಾಂಡ್, ಹೋಂ ಸ್ಟೇ ಅಸೋಷಿಯೇಷನ್, ಕೊಡಗು ಕಾಫಿ ಬೆಳೆಗಾರರ ಸಂಘ, ಸ್ತ್ರೀಶಕ್ತಿ ಗುಂಪುಗಳು, ಸಾಂಬಾರ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಹೀಗೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಯೂ ಆಕರ್ಷಿಸುತ್ತಿದೆ.
ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ?
ಜತೆಗೆ ಹೋಟೆಲ್ ಮಳಿಗೆಗಳಲ್ಲಿ ದೋಸೆ, ತರಕಾರಿ ಬಿರಿಯಾನಿ, ಜೋಳದ ರೊಟ್ಟಿ, ಪಾನಿಪೂರಿ, ಇಡ್ಲಿ ಒಡೆ, ಗೋಬಿ ಮಂಚೂರಿ, ವಿವಿಧ ಬಗೆಯ ಹಣ್ಣುಗಳ ತಂಪು ಪಾನೀಯ ದೊರೆಯುತ್ತಿದೆ.
ವಿಕೋಪದಿಂದ ಕಂಗೆಟ್ಟಿದ್ದ ಕೊಡಗಿನ ಪುನಶ್ಚೇತನ
ಇನ್ನು ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಚಾಲನೆ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಪ್ರವಾಸೋದ್ಯಮ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಈ ಬಾರಿ ವಿಭಿನ್ನವಾಗಿ ಪ್ರವಾಸಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಕೃತಿ ವಿಕೋಪಕ್ಕೆ ಸಿಲುಕಿ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾಗಿತ್ತು. ಆದ್ದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಕೊಡಗು ಪ್ರವಾಸಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಕೊಡಗಿಗೆ ಪ್ರವಾಸಿಗರನ್ನು ಸೆಳೆಯಲು ಮೂರು ದಿನಗಳ ಪ್ರವಾಸಿ ಉತ್ಸವ
ಸೇವಂತಿಗೆ, ಚಂಡುಹೂ, ಪ್ಲಾಕ್ಸ್, ವಿಂಕಾ
ರಾಜಾಸೀಟು ಉದ್ಯಾನವನದಲ್ಲಿ 8 ರಿಂದ 10 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡುಹೂ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 5 ರಿಂದ-6 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ. ಜತೆಗೆ ಕೊಡಗಿನ ಕುಲದೇವತೆಯಾದ ಕಾವೇರಿ ಮಾತೆಯ ಹಾಗೂ ಮಂಟಪದ ತೀರ್ಥೋದ್ಭವದ ಕುಂಡಿಕೆಯ ಕಲಾಕೃತಿಯನ್ನು 12 ಅಡಿ ಎತ್ತರದಲ್ಲಿ 15 ಅಡಿ ಉದ್ದದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ.
ಮಡಿಕೇರಿಯಲ್ಲಿ ನನಸಾಗದ ಕೊಡವ ಹೆರಿಟೇಜ್ ಸೆಂಟರ್ ಕನಸು!
ಮಕ್ಕಳನ್ನು ಆಕರ್ಷಿಸುತ್ತಿರುವ ಕಾರ್ಟೂನ್ಸ್
ಇನ್ನು ತೋಟಗಾರಿಕೆಯಲ್ಲಿ ಹೊಸ ತಾಂತ್ರಿಕತೆಯಾದ ಜಲ ಕೃಷಿ ಮಾದರಿಯಲ್ಲಿ ಹಣ್ಣು ತರಕಾರಿ ಬೆಳೆಯುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಮಿಕ್ಕಿ ಮೌಸ್, ಡೊನಾಲ್ಡ್ ಡಕ್, ಡೋರೋಮ್ಯಾನ್ ಮಾದರಿಯಲ್ಲಿ ಹೂವು ಮತ್ತು ಎಲೆಗಳಿಂದ ತಯಾರಿಸಲಾಗಿದೆ. ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು ಹಾಗೂ ದಪ್ಪ ಮೆಣಸಿನ ಕಾಯಿ ತರಕಾರಿಗಳಿಂದ ಆನೆ, ನವಿಲು, ಗಿಟಾರ್, ತಬಲ ಇತ್ಯಾದಿಗಳ ಮಾದರಿಯ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು ಆಕರ್ಷಕವಾಗಿದೆ.
ಕಣ್ಮನ ಸೆಳೆಯುತ್ತಿರುವ ಇಕೆಬಾನ
ಜಲಚರ ಮೀನುಗಳಾದ ಸ್ಟಾರ್ಫಿಷ್, ಆಕ್ಟೊಪಸ್ ಇತ್ಯಾದಿ ಕಲಾಕೃತಿಗಳನ್ನು ಹೂ, ಅಲಂಕಾರಿ ಎಲೆಗಳಿಂದ ನಿರ್ಮಿಸಲಾಗಿದೆ. ತರಕಾರಿ, ಹಣ್ಣುಗಳಲ್ಲಿ ವಿವಿಧ ಆಕೃತಿಗಳಲ್ಲಿ ಗಣ್ಯ ವ್ಯಕ್ತಿಗಳ ಕೆತ್ತನೆಯ ಕಲಾಕೃತಿಗಳನ್ನು ಮಾಡಲಾಗಿದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನ ಹೂವಿನ ಜೋಡಣೆ ಹಾಗೂ ಕ್ಯಾಕ್ಟಸ್ ಜೋಡಣೆ ಹಾಗೂ ಪ್ರದರ್ಶನ ಕಣ್ಮನಸೆಳೆಯುತ್ತಿದೆ.