ಕೊಡಗಿನಲ್ಲಿ ವಾರದಿಂದ ಭಾರಿ ಮಳೆ, ತಾಲೂಕುವಾರು ಮಳೆ ವಿವರ
ಮಡಿಕೇರಿ ಮೇ.19: ವಾಯುಭಾರ ಕುಸಿತ, ಅವಧಿಗೆ ಮುನ್ನ ಮುಂಗಾರು ಮಾರುತ ಪ್ರವೇಶದಿಂದಾಗಿ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಆರ್ಭಟ ಮುಂದುವರೆಯಲಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 49.12 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.65 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 318.65 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 413.89 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 51.65 ಮಿ.ಮೀ. ಕಳೆದ ವರ್ಷ ಇದೇ ದಿನ 15.83 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 417.52 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 580.35 ಮಿ.ಮೀ. ಮಳೆಯಾಗಿತ್ತು.
ಮುಂದಿನ ಐದು ದಿನಗಳಲ್ಲಿ ಭಾರಿ ಗಾಳಿ ಮಳೆ ಜೊತೆ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮುಖ್ಯವಾಗಿ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.
ಸೋಮವಾರಪೇಟೆ ತಾಲೂಕು
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 38.03 ಮಿ.ಮೀ. ಕಳೆದ ವರ್ಷ ಇದೇ ದಿನ 3.18 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 298.41 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 355.29 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.93 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 240.03 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 305.94 ಮಿ.ಮೀ. ಮಳೆಯಾಗಿತ್ತು.
ಹೋಬಳಿವಾರು ದಾಖಲಾಗಿರುವ ಮಳೆ
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ ಹೀಗಿದೆ: ಮಡಿಕೇರಿ ಕಸಬಾ 44.80, ನಾಪೋಕ್ಲು 47.80, ಸಂಪಾಜೆ 44, ಭಾಗಮಂಡಲ 70, ವಿರಾಜಪೇಟೆ ಕಸಬಾ 52.60, ಹುದಿಕೇರಿ 27, ಶ್ರೀಮಂಗಲ 47.60, ಪೊನ್ನಂಪೇಟೆ 35, ಅಮ್ಮತ್ತಿ 32.50, ಬಾಳೆಲೆ 33.50, ಸೋಮವಾರಪೇಟೆ ಕಸಬಾ 60, ಶನಿವಾರಸಂತೆ 50.20, ಶಾಂತಳ್ಳಿ 68.40, ಕೊಡ್ಲಿಪೇಟೆ 46, ಕುಶಾಲನಗರ 76.40, ಸುಂಟಿಕೊಪ್ಪ 45 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2848.35 ಅಡಿಗಳು. ಕಳೆದ ವರ್ಷ ಇದೇ ದಿನ 2821.66 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 53.20 ಮಿ.ಮೀ., ಕಳೆದ ವರ್ಷ ಇದೇ ದಿನ 1 ಮಿ.ಮೀ., ಇಂದಿನ ನೀರಿನ ಒಳಹರಿವು 760 ಕ್ಯುಸೆಕ್, ಕಳೆದ ವರ್ಷ ಇದೇ ದಿನ 287 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 20 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್.
ಹವಾಮಾನ ಇಲಾಖೆ ಮುನ್ಸೂಚನೆ
ಸಾಮಾನ್ಯವಾಗಿ, ಮಾನ್ಸೂನ್ ಮೇ 22ರಂದು ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆವರಿಸುತ್ತದೆ. ಜೂನ್ 1ರ ವೇಳೆಗೆ 5 ದಿನ ಹೆಚ್ಚು ಕಡಿಮೆಯ ಅಂತರದಲ್ಲಿ ಕೇರಳವನ್ನು ತಲುಪುತ್ತದೆ. ನಂತರ ಕರ್ನಾಟಕ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಪ್ರವೇಶಿಸುತ್ತದೆ.
ನೈಋತ್ಯ ಮುಂಗಾರು ಮಾರುತಗಳು ಅವಧಿಗೆ ಮುನ್ನ ಮಳೆ ಹೊತ್ತು ಸಾಗುತ್ತಿದ್ದು, ಸೋಮವಾರ ರಾತ್ರಿ ವೇಳೆಗೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹ ಪ್ರವೇಶಿಸಿರುವುದನ್ನು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಮೊದಲ ಮಳೆಯ ಸಿಂಚನವಾಗುತ್ತಿದ್ದು, ವಾರ್ಷಿಕ ಮುಂಗಾರು ಮಳೆ ವೇಳಾಪಟ್ಟಿಯನ್ನು ಬದಲಾಯಿಸಲು ಒತ್ತಡ ಹೇರಿದೆ.
ಸಹಾಯವಾಣಿ ಸಂಪರ್ಕಿಸಿ
ಒಂದೇ ಸಮನೆ ಮಳೆ ಸುರಿದು ಪ್ರವಾಹ ಏರ್ಪಟ್ಟರೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಪಡೆ ಸಜ್ಜಾಗಬೇಕು. ಗುಡ್ಡ ಕುಸಿತ, ರಸ್ತೆ ಕುಸಿತವಾದರೆ ಲೋಕೋಪಯೋಗಿ ಇಲಾಖೆ, ವಿದ್ಯುತ್ ಸಮಸ್ಯೆಯಾದರೆ ಸೆಸ್ಕ್, ಮರಬಿದ್ದರೆ ಅರಣ್ಯ ಇಲಾಖೆ, ಆಸ್ತಿಪಾಸ್ತಿಗೆ ಹಾನಿಯಾದರೆ ಕಂದಾಯ ಇಲಾಖೆ ಹೀಗೆ ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ.
ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಿನಿಂದಲೇ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಜನರು ಹೆಚ್ಚಿನ ಮಾಹಿತಿಯನ್ನು 08272-221077, 08272-221088 ಹಾಗೂ 08272-221099 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
Recommended Video