ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ, ತುಂಬುತ್ತಿದೆ ಹಾರಂಗಿ ಜಲಾಶಯ
ಮಡಿಕೇರಿ ಜೂನ್ 20: ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೆ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತ ಉಂಟಾಗಿದೆ. 'ಮುಂಗಾರು' ಅಬ್ಬರ ಜೋರಾಗಿರುವುದರಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆ ಹಾನಿ, ವಿದ್ಯುತ್ ಮಾರ್ಗಕ್ಕೆ ಮರ ಬಿದ್ದು ಹಾನಿಯಾಗಿದೆ. ಹಾಗೆಯೇ ಇದನ್ನು ತಕ್ಷಣವೇ ಸರಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಕಳೆದ ಬಾರಿಗೆ ಹೊಲಿಸಿದರೆ, ಈ ಬಾರಿ ಜೂನ್ ಎರಡನೇ ಮತ್ತು ಮೂರನೇ ವಾರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮುನ್ನೆಚ್ಚರ ವಹಿಸಬೇಕಿರುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿಯೇ ಚಳಿ ಶುರುವಾಗಿದ್ದು, ಬೆಚ್ಚನೆಯ ಹೊದಿಕೆ(ಬಟ್ಟೆ) ಧರಿಸುವಂತಾಗಿದೆ. ಜಿಲ್ಲೆಯಲ್ಲಿ ನದಿ, ತೊರೆ, ಕಾಲುವೆ, ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಲಪಾತಗಳಲ್ಲಿ ನೀರಿನ ಬೋರ್ಗರೆತ ಅಧಿಕವಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 46.77 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 64.32 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.45 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.53 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 32.4, ಸಂಪಾಜೆ 48.5, ನಾಪೋಕ್ಲು 65.2, ಭಾಗಮಂಡಲ 111.2, ವಿರಾಜಪೇಟೆ ಕಸಬಾ 99, ಹುದಿಕೇರಿ 48.4, ಶ್ರೀಮಂಗಲ 46.6, ಪೊನ್ನಂಪೇಟೆ 77.2, ಅಮ್ಮತ್ತಿ 46.5, ಬಾಳೆಲೆ 45, ಸೋಮವಾರಪೇಟೆ ಕಸಬಾ 10.4, ಶನಿವಾರಸಂತೆ 14, ಶಾಂತಳ್ಳಿ 35.2, ಕೊಡ್ಲಿಪೇಟೆ 16, ಕುಶಾಲನಗರ 2.4, ಸುಂಟಿಕೊಪ್ಪ 15.2 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (19-06-2021) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2834.68 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 8.4 ಮಿ.ಮೀ. ಇಂದಿನ ನೀರಿನ ಒಳಹರಿವು 1265 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್.
ಕೊರೊನಾದ ನಡುವೆಯೂ ಮುಂಗಾರು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ನಿರ್ದೇಶನ ನೀಡಿದ್ದಾರೆ. ಒಂದೇ ಸಮನೆ ಮಳೆ ಸುರಿದು ಪ್ರವಾಹ ಏರ್ಪಟ್ಟರೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಪಡೆ ಸಜ್ಜಾಗಬೇಕು. ಗುಡ್ಡ ಕುಸಿತ, ರಸ್ತೆ ಕುಸಿತವಾದರೆ ಲೋಕೋಪಯೋಗಿ ಇಲಾಖೆ, ವಿದ್ಯುತ್ ಸಮಸ್ಯೆಯಾದರೆ ಸೆಸ್ಕ್, ಮರಬಿದ್ದರೆ ಅರಣ್ಯ ಇಲಾಖೆ, ಆಸ್ತಿಪಾಸ್ತಿಗೆ ಹಾನಿಯಾದರೆ ಕಂದಾಯ ಇಲಾಖೆ ಹೀಗೆ ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ.
ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಿನಿಂದಲೇ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಜನರು ಹೆಚ್ಚಿನ ಮಾಹಿತಿಯನ್ನು 08272-221077, 08272-221088 ಹಾಗೂ 08272-221099 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
Recommended Video