ದಾಖಲೆ ಬರೆದ ಕೊಡಗು ಜಿಲ್ಲೆಯ ವಾರ್ಷಿಕ ಮಳೆ ಪ್ರಮಾಣ
ಮಡಿಕೇರಿ ಆ.13: ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 2.30 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.13 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1899.02 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1837.65 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.20 ಮಿ.ಮೀ. ಕಳೆದ ವರ್ಷ ಇದೇ ದಿನ 13.30 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2629.77 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2579.92 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.33 ಮಿ.ಮೀ. ಕಳೆದ ವರ್ಷ ಇದೇ ದಿನ 1.63 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1518.19 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1717.37 ಮಿ.ಮೀ. ಮಳೆಯಾಗಿತ್ತು.
ಹೋಬಳಿವಾರು ದಾಖಲಾಗಿರುವ ಮಳೆ
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.37 ಮಿ.ಮೀ. ಕಳೆದ ವರ್ಷ ಇದೇ ದಿನ 12.47 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1549.09 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1215.67 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 3.8, ನಾಪೋಕ್ಲು 2, ಸಂಪಾಜೆ 7, ಭಾಗಮಂಡಲ 8, ವಿರಾಜಪೇಟೆ ಕಸಬಾ 0.00, ಹುದಿಕೇರಿ 6, ಪೊನ್ನಂಪೇಟೆ 1, ಬಾಳೆಲೆ 1, ಸೋಮವಾರಪೇಟೆ ಕಸಬಾ 0.00, ಶಾಂತಳ್ಳಿ 1.2, ಸುಂಟಿಕೊಪ್ಪ 1 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (13-08-2021) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.74 ಅಡಿಗಳು. ಕಳೆದ ವರ್ಷ ಇದೇ ದಿನ 2857.23 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 0.00 ಮಿ.ಮೀ.,ಕಳೆದ ವರ್ಷ ಇದೇ ದಿನ 3.60 ಮಿ.ಮೀ., ಇಂದಿನ ನೀರಿನ ಒಳಹರಿವು 2940 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 5733 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 2145 ಕ್ಯುಸೆಕ್, ನಾಲೆಗೆ 250 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 2218 ಕ್ಯುಸೆಕ್, ನಾಲೆಗೆ 200 ಕ್ಯುಸೆಕ್.
ಚಾರುಲತಾ ಸೋಮಲ್ ಸೂಚನೆ
ಮಳೆ ಹಾನಿ ಸಂಬಂಧ 15 ದಿನದೊಳಗೆ ಪರಿಹಾರ ವಿತರಿಸುವಂತೆ ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
ಮಳೆಯಿಂದ ಮನೆ ಹಾಗೂ ಬೆಳೆ ಹಾನಿ ಸಂಬಂಧಿಸಿದಂತೆ ತ್ವರಿತವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಹಾಗೆಯೇ ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಮನೆ ಹಾನಿ ಹಾಗೂ ಬೆಳೆ ನಷ್ಟವಾಗಿದ್ದಲ್ಲಿ ಪರಿಹಾರ ವಿತರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮೂಲಭೂತ ಸೌಕರ್ಯ ಸಂಬಂಧಿಸಿದಂತೆ ರಸ್ತೆ, ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳ ಹಾನಿ ಮತ್ತು ವಿದ್ಯುತ್ ಸಂಬಂಧ ನಷ್ಟ ಉಂಟಾಗಿದ್ದಲ್ಲಿ ಮಾಹಿತಿ ಪಡೆದು ವರದಿ ನೀಡುವಂತೆ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದರು.
ಪರಿಹಾರವನ್ನು ನಿಯಮಾನುಸಾರ ವಿತರಿಸಬೇಕು
ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ಕಟ್ಟಡ ದುರಸ್ತಿ ಸಂಬಂಧಿಸಿದಂತೆ ಅನುಮೋದನೆ ಪಡೆದಿರುವುದಕ್ಕೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಪರಿಹಾರವನ್ನು ನಿಯಮಾನುಸಾರ ವಿತರಿಸಬೇಕು, ಬಡವರಿಗೆ ಹಾಗೂ ಕೃಷಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಆವರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಬೆಳೆ ಹಾನಿ ಹಾಗೂ ಮನೆ ಹಾನಿ ಸಂಬಂಧಿಸಿದಂತೆ ಬಡವರಿಗೆ ಪರಿಹಾರ ವಿತರಿಸಬೇಕು. ಭಾಗಶಃ ಹಾನಿಗೆ ತಮ್ಮ ಹಂತದಲ್ಲಿಯೇ ಪರಿಹಾರ ವಿತರಿಸಲು ಅಗತ್ಯ ಕ್ರಮ ವಹಿಸುವಂತೆ ತಹಶಿಲ್ದಾರರಿಗೆ ಸೂಚಿಸಿದರು.
ಮನೆ ಹಾನಿ ಹಾಗೂ ಬೆಳೆ ಹಾನಿ ಪರಿಹಾರ ಸಂಬಂಧ ದೂರುಗಳು ಕೇಳಿಬರದಂತೆ ಗಮನ ಹರಿಸಬೇಕು. ಪ್ರಸಕ್ತ ವರ್ಷದಲ್ಲಿ ರೂ.90 ಕೋಟಿ ಮಳೆಯಿಂದ ಹಾನಿಯಾಗಿದೆ ಎಂದು ಮಾಹಿತಿ ನೀಡಲಾಗಿದ್ದು, ಇನ್ನೂ ಹಾನಿ ಆಗಿದ್ದಲ್ಲಿ ಮಾಹಿತಿ ಒದಗಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.
ರೈತರು ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಬೇಕು
ಕೃಷಿ ಇಲಾಖೆಯ ಜಂಟಿ ನಿರ್ದೇಶಕಾರಾದ ಶಬನಾ ಎಂ.ಶೇಖ್ ಅವರು ಮಾತನಾಡಿ, ರೈತರು ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಬೇಕು. ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಜಂಟಿಯಾಗಿ ಬೆಳೆ ಸಮೀಕ್ಷೆ ಕೈಗೊಳ್ಳಲು ಸಹಕರಿಸುವಂತೆ ಅವರು ಕೋರಿದರು.
ಭತ್ತ ಬೆಳೆಗೆ ವಿಮೆ ಇದ್ದು, ನೋಂದಣೆಗೆ ಬಾಕಿ ಇರುವ ಕೃಷಿಕರು ವಿಮೆ ನೋಂದಣಿ ಮಾಡಿಸಿಕೊಳ್ಳಲು ಮಾಹಿತಿ ನೀಡಬೇಕು ಎಂದು ಅವರು ಕೋರಿದರು.ಇದೇ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಗಡಿ ಪ್ರದೇಶದ ಚೆಕ್ ಪೋಸ್ಟ್ಗಳಲ್ಲಿ ಕೋವಿಡ್ ಪರೀಕ್ಷೆ ಮಾಡಬೇಕು, 72 ಗಂಟೆಗಳ ಅವಧಿಯ ಕೋವಿಡ್ ನೆಗೆಟಿವ್ ವರದಿ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಯಾವುದೇ ಪ್ರದೇಶದಲ್ಲಿ 10 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾದಿಕಾರಿ ಅವರು ಸೂಚಿಸಿದರು.
ಬಡವರಿಗೆ 1 ಲಕ್ಷ ಪರಿಹಾರ ನೀಡಲು ಸರ್ಕಾರ ಪ್ರಕಟಿಸಿದೆ
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಕೋವಿಡ್ನಿಂದ ಮೃತಪಟ್ಟ ಬಡವರಿಗೆ 1 ಲಕ್ಷ ಪರಿಹಾರ ನೀಡಲು ಸರ್ಕಾರ ಪ್ರಕಟಿಸಿದೆ, ಆ ದಿಸೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ವಿಳಂಬ ಮಾಡದೆ ಪರಿಹಾರ ವಿತರಿಸುವಂತೆ ಅವರು ಸೂಚಿಸಿದರು.
ತಹಶಿಲ್ದಾರರಾದ ಮಹೇಶ್, ಗೋವಿಂದ್ ರಾಜು, ಯೋಗಾನಂದ, ತೋಟಗಾರಿಕೆ ಉಪ ನಿರ್ದೇಶಕ ಎಚ್.ಶಶಿಧರ, ಪಶುಪಾಲನ ಉಪ ನಿರ್ದೇಶಕ ಸುರೇಶ್ ಭಟ್, ಕಾಫಿ ಮಂಡಳಿ ಉಪ ನಿದೇಶಕರು ಶಿವಕುಮಾರ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್, ಪಿಎಂಜಿಎಸ್ವೈ ಎಂಜಿನಿಯರ್ ಪ್ರಭು, ಕಂದಾಯ ಇಲಾಖೆ ಶಿರಸ್ತೆದಾರರು ಪ್ರವೀಣ್ ಕುಮಾರ್, ಪ್ರಕಾಶ್ ಇತರರು ಇದ್ದರು.
Recommended Video