ವಿಶೇಷ ಸುದ್ದಿ; ವೀರಭೂಮಿ ಎಂಬ ಕೊಡಗಿನ ವಿಭಿನ್ನ ವಿಹಾರಧಾಮ...!
ಒಂದೆರಡು ದಶಕಗಳ ಹಿಂದೆ ಕೊಡಗಿಗೆ ಪ್ರವಾಸ ತೆರಳುವುದೆಂದರೆ ಅದೊಂದು ಪ್ರಯಾಸದ ಕೆಲಸವಾಗಿತ್ತು. ಏಕೆಂದರೆ ಆಗ ಈಗಿನಂತೆ ಎಲ್ಲೆಂದರಲ್ಲಿ ಹೋಂಸ್ಟೇಗಳಾಗಲೀ, ರೆಸಾರ್ಟ್ಗಳಾಗಲೀ ಇರಲಿಲ್ಲ. ಪಟ್ಟಣ ಪ್ರದೇಶದ ಕೆಲವು ಕಡೆಗಳಲ್ಲಷ್ಟೆ ಹೋಟೆಲ್ಗಳಿದ್ದವು. ಹೀಗಾಗಿ ನಗರ ಪ್ರದೇಶದಿಂದ ದೂರ ಇರುವ ತಾಣಗಳಿಗೆ ಪ್ರವಾಸಿಗರು ತೆರಳುವುದೇ ಕಷ್ಟವಾಗಿತ್ತು.
ಅತ್ತಿಮರ ಔಷಧೀಯ ಗಣಿ ಅಂದ್ರೆ ನಂಬ್ತೀರಾ?
ಕುಶಾಲನಗರದ ಕೂಡ್ಲೂರಲ್ಲಿರುವ ವಿಹಾರಧಾಮ
ಅವತ್ತಿನ ದಿನಗಳಲ್ಲಿ ಈಗಿನಂತೆ ಪ್ರವಾಸಿಗರು ಕೊಡಗಿನತ್ತ ಬರುತ್ತಿರಲಿಲ್ಲ. ವೀಕೆಂಡ್ ಮೋಜು-ಮಸ್ತಿ ಬಗ್ಗೆ ಗೊತ್ತೇ ಇರಲಿಲ್ಲ. ಆಗ ಹೆಚ್ಚಾಗಿ ಬೀಚ್ ಗಳಿಗೆ ಪ್ರವಾಸಿಗರು ತೆರಳುತ್ತಿದ್ದರು. ಸುನಾಮಿ ಬಳಿಕ ಬೀಚ್ ಗಳಿಗೆ ತೆರಳುವುದು ಕಡಿಮೆಯಾಗಿ ಮಲೆನಾಡಿನತ್ತ ಅದರಲ್ಲೂ ಕೊಡಗಿನತ್ತ ಹೆಚ್ಚಾಗಿಯೇ ಪ್ರವಾಸಿಗರು ಬರತೊಡಗಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹೋಂಸ್ಟೇ, ರೆಸಾರ್ಟ್ ಗಳು ಅಲ್ಲಲ್ಲಿ ಹುಟ್ಟಿಕೊಳ್ಳತೊಡಗಿದವು. ಈ ವೇಳೆ ಸ್ವಲ್ಪ ವಿಭಿನ್ನ ಮತ್ತು ವಿಶಿಷ್ಟವಾಗಿ ಕೊಡಗಿನ ಕುಶಾಲನಗರ ಬಳಿಯ ಕೂಡ್ಲೂರಲ್ಲಿ ವಿಹಾರಧಾಮವೊಂದು ನಿರ್ಮಾಣವಾಯಿತು. ಅದುವೇ ವೀರಭೂಮಿ.
ಆಕರ್ಷಣೀಯವಾಗಿರುವ ಶಾಂತಲೇಶ್ವರ ದಿಬ್ಬ
ಈ ವೀರಭೂಮಿ ಪ್ರವಾಸಿಧಾಮ ಬೇರೆಡೆಗಿಂತ ವೈಶಿಷ್ಟ್ಯವಾಗಿದೆ. ಇದು ವಾಣಿಜ್ಯ ದೃಷ್ಠಿಯಿಂದಲೇ ನಿರ್ಮಾಣವಾಗಿದ್ದರೂ ಕೂಡ, ಪ್ರವಾಸಿಗರಿಗೆ ಮತ್ತು ಸಂಸ್ಕೃತಿ ಪರಂಪರೆಗೆ ಇಲ್ಲಿ ಒತ್ತು ನೀಡಿರುವುದು ಎದ್ದು ಕಾಣುತ್ತದೆ. ಇಲ್ಲಿಗೆ ಕಾಲಿಟ್ಟರೆ ಅಚ್ಚರಿ ಉಂಟಾಗುತ್ತದೆ. ವೀರಭೂಮಿ ಎಂಬ ಹೆಸರಿಗೆ ತಕ್ಕಂತೆ ವಿಹಾರಧಾಮವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಲ್ಲಿ ಕಾಣಸಿಗುವ ಸೈನಿಕರ ಬಿಡಾರದಂತಹ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಕದಂಬ ಎಂಬ ಹೆಸರುಗಳ ವಸತಿ ಗೃಹಗಳು, ಚಕ್ಕಡಿಗಳು ಸುಮಾರು ಇನ್ನೂರು ವರ್ಷಕ್ಕೂ ಹಳೆಯದಾದ ಫಿರಂಗಿಗಳು, ಸುಸಜ್ಜಿತ ಕುಟೀರಗಳು ಮತ್ತು ಕರಕುಶಲತೆ ಹೊಂದಿದ ಪ್ರದರ್ಶನ ಕೊಠಡಿಗಳು, ಮಣ್ಣಿನ ಮತ್ತು ಮರದ ವಿವಿಧ ಕಲಾಕೃತಿಗಳು, ವಿವಿಧ ಬಗೆಯ ತೈಲವರ್ಣ ಚಿತ್ರಗಳು ಆಕರ್ಷಣೀಯವಾಗಿದೆ. ಇನ್ನು ಇಲ್ಲಿ ದಿಬ್ಬವೊಂದನ್ನು ಸೃಷ್ಟಿ ಮಾಡಲಾಗಿದ್ದು, ಅದಕ್ಕೆ ಶಾಂತಲೇಶ್ವರ ದಿಬ್ಬ ಎಂದು ಹೆಸರಿಡಲಾಗಿದೆ. ಇದು ಮನರಂಜನೆಯ ವೇದಿಕೆಯೂ ಹೌದು.
ಜ.ತಿಮ್ಮಯ್ಯರ ಸಾಹಸಗಾಥೆಗೆ ಸಾಕ್ಷಿಯಾಗಲಿರುವ ಮ್ಯೂಸಿಯಂ
ಆರ್.ಕೆ.ಸುಳ್ಯರವರ ಪರಿಕಲ್ಪನೆಯಲ್ಲಿ ನಿರ್ಮಾಣ
ಪುರಾತನ ಕಾಲದ ಪರಿಸರ ಮತ್ತು ಆ ಕಾಲದ ಸಂಸ್ಕೃತಿ, ಪರಂಪರೆ, ಶಿಸ್ತು, ಶೌರ್ಯವನ್ನು ಸಾರಿ ಹೇಳುವ, ಗತಕಾಲದ ಆ ದಿನಗಳಿಗೆ ಕೊಂಡೊಯ್ಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇದನ್ನು ನಿರ್ಮಿಸಿದ ಕೀರ್ತಿ ಆರ್.ಕೆ.ಸುಳ್ಯ (ರಾಮಕೃಷ್ಣ ಭಟ್) ಅವರಿಗೆ ಸಲ್ಲುತ್ತದೆ. ಅವರು ಪುತ್ತೂರಿನ ಸಮೀಪ ಪರ್ಪುಂಜ ಎಂಬಲ್ಲಿ ಮೊದಲಿಗೆ ವಿಹಾರಧಾಮ ನಿರ್ಮಿಸಿದ್ದರು. ಅದರ ಪ್ರೇರಣೆಯಲ್ಲಿಯೇ ಕೂಡ್ಲೂರಲ್ಲಿ ವೀರಭೂಮಿ ವಿಹಾರಧಾಮವನ್ನು ಸ್ಥಾಪಿಸಿದ್ದಾರೆ.
Recommended Video
ಪ್ರವಾಸಿಗರಿಗೆ ಜಂಜಾಟಗಳ ಮುಕ್ತ ತಾಣ
ಇಲ್ಲಿ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿವಿಧ ಕಲಾವಿದರು ಇಲ್ಲಿ ಭಾಗವಹಿಸಿ ಪ್ರದರ್ಶನ ನೀಡುತ್ತಾರೆ. ಇಲ್ಲಿರುವ ಶಾಂತಲೇಶ್ವರ ದಿಬ್ಬ ಹಲವು ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಬಿಡುತ್ತದೆ. ಸಂಜೆಯ ವಿಹಾರಕ್ಕೆ ಮುದ ನೀಡುವ ಸಲುವಾಗಿ ಕುದುರೆಗಾಡಿ ಸವಾರಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಯ ಕಳೆಯಬಹುದು. ಇಲ್ಲಿಗೆ ಸಮೀಪದಲ್ಲಿಯೇ ಹಾರಂಗಿ ಜಲಾಶಯ, ಕಾವೇರಿ ನಿಸರ್ಗಧಾಮ, ಟಿಬೆಟ್ ಕ್ಯಾಂಪ್, ದುಬಾರೆ, ಬೇಳೂರು ಬಾಣೆ ಸೇರಿದಂತೆ ಹಲವು ಪ್ರೇಕ್ಷಣೀಯ ತಾಣಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ವೀರಭೂಮಿ ಸುಂದರ ವಾತಾವರಣದಲ್ಲಿ ಎಲ್ಲ ಜಂಜಾಟಗಳಿಂದ ದೂರವಾಗಿ ನೆಮ್ಮದಿಯಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ವಿಹಾರಧಾಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.