ಕೇರಳ, ಮೈಸೂರಿಗೆ ಆತುಕೊಂಡಿರುವ ಕೊಡಗಿನ ಜನ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ...
ಮಡಿಕೇರಿ, ಮಾರ್ಚ್ 24: ಕೊಡಗಿನಲ್ಲಿ ಒಂದು ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿದ್ದರೂ ಮಡಿಕೇರಿಯಲ್ಲಿ ವಾಹನಗಳ ಸಂಚಾರ, ಜನ ಸಾಮಾನ್ಯರ ಓಡಾಟ ಆತಂಕಕ್ಕೀಡು ಮಾಡಿದೆ.
ಕೊರೊನಾ ವೈರಸ್ ನ ಭೀಕರತೆ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಮಡಿಕೇರಿ ನಗರದಲ್ಲಿ ವಾಹನ ಸಂಚಾರ ಎಂದಿನಂತೆ ಇದ್ದದ್ದು ಕಂಡು ಬಂತು. ಅಲ್ಲದೆ, ನಿನ್ನೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಾಹನ ಸಂಚಾರದ ದಟ್ಟಣೆ ಕಂಡು ಬಂತು. ಈಗಾಗಲೇ ಕೊಡಗಿಗೆ ಹೊಂದಿಕೊಂಡಂತೆ ಇರುವ ಮೈಸೂರಿನಲ್ಲಿ ಎರಡು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಜತೆಗೆ ಕೇರಳ ರಾಜ್ಯವೂ ಹೊಂದಿಕೊಂಡಂತಿರುವುದರಿಂದ ಹೆಚ್ಚಿನ ಪರಿಣಾಮ ಕೊಡಗಿನ ಮೇಲೆ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಚ್ಚೆತ್ತುಕೊಳ್ಳುವಂತೆ ಸೂಚಿಸಲಾಗುತ್ತಿದ್ದರೂ ಕೆಲವರು ಅದನ್ನು ಲಘುವಾಗಿ ಪರಿಗಣಿಸುತ್ತಿರುವುದು ಆತಂಕಕಾರಿಯಾಗಿದೆ.
ವೇತನ ಕಡಿತ ಮಾಡದಂತೆ ಸೂಚನೆ
ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ಜಿಲ್ಲೆಯ ಗಡಿ ಪ್ರದೇಶಗಳು ಸೇರಿದಂತೆ ಹಲವು ಕಡೆ ಭೇಟಿ ನೀಡಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಜಿಲ್ಲೆಯ ಕೂಡಿಗೆ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕಾ ಘಟಕದಲ್ಲಿ ದಿನ ಬಿಟ್ಟು ದಿನ 50 ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವಂತೆ ಹಾಗೂ ಯಾವುದೇ ವೇತನವನ್ನು ಕಡಿತಗೊಳಿಸದಂತೆ ಸೂಚನೆ ನೀಡಿದ್ದಾರೆ. ಇದೀಗ ಕೈಗೊಂಡಿರುವ ತುರ್ತು ಕ್ರಮಗಳ ಕುರಿತಂತೆ ವಿವರಿಸಿದ ಅವರು, ಅಂತರ್ ರಾಜ್ಯ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಮಾರ್ಚ್ 31ರವರೆಗೆ ನಿರ್ಬಂಧಿಸಲಾಗಿದೆ. ಜತೆಗೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ.
ಅಗತ್ಯ ಪಡಿತರ ಸಾಮಗ್ರಿ ಸರಬರಾಜು ಮಾಡಿ
ಶಾಲಾ ಮತ್ತು ಕಾಲೇಜು ಶಿಕ್ಷಕರಿಗೆ ಸರ್ಕಾರವು ರಜೆ ಘೋಷಿಸಿದ್ದು, ಆದರೆ ತುರ್ತು ಸೇವೆಗಳಿಗೆ ಅವಶ್ಯವಿದ್ದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಶಿಕ್ಷಕರು ಕೇಂದ್ರ ಸ್ಥಾನದಲ್ಲಿರಬೇಕು. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಸಾಮಗ್ರಿಗಳನ್ನು ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ದಿನಸಿ, ತರಕಾರಿ, ಹಾಲು, ಹಣ್ಣು ಔಷಧಿ, ಇಂದಿರಾ ಕ್ಯಾಂಟಿನ್, ಹಾಪ್ ಕಾಮ್ಸ್ ಮಳಿಗೆ, ಕೃಷಿ ಸಾಮಗ್ರಿ ಮಳಿಗೆಗಳು ಇತರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಮಾರ್ಚ್ 31ರವರೆಗೆ ನಿರ್ಬಂಧಿಸಲಾಗಿದೆ. ಸಾಧ್ಯವಾದಷ್ಟು ಕುಟುಂಬದ ಒಬ್ಬ ಸದಸ್ಯ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು ಎಂದು ಮನವಿ ಮಾಡಿದ್ದಾರೆ.
ಎಂಟು ಮಂದಿಗೆ ಸೋಂಕು ಶಂಕೆ
ಕೊರೊನಾ ವೈರಸ್ ಕುರಿತಂತೆ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ ಒಂದು ಕೊರೊನಾ ಪ್ರಕರಣ ದೃಢಪಟ್ಟಿದ್ದು, ಒಟ್ಟು 247 ಜನರು ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಜಿಲ್ಲೆಗೆ ಬಂದಿದ್ದಾರೆ. ಇವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (Home Quarantine) ಮಾಡಲಾಗಿದೆ. ಒಟ್ಟು ಎಂಟು ವ್ಯಕ್ತ್ತಿಗಳಿಗೆ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ. ಈ ಪ್ರಕರಣಗಳ ಪೈಕಿ ನಾಲ್ಕು ಪ್ರಕರಣದಲ್ಲಿ ಪ್ರಯೋಗಾಲಯ ವರದಿಯಿಂದ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ. ಉಳಿದ ನಾಲ್ಕು ಪ್ರಕರಣಗಳಲ್ಲಿ ಪ್ರಯೋಗಾಲಯ ವರದಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಸೋಂಕಿತ ವ್ಯಕ್ತಿ ಸಂಪರ್ಕದ 70 ಮಂದಿಯ ಪರೀಕ್ಷೆ
ಕೊರೊನಾ ಪ್ರಕರಣ ದೃಢಪಟ್ಟ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದ 70 ಜನರನ್ನು ಪರೀಕ್ಷಿಸಿದ್ದು, ಸೋಂಕು ಲಕ್ಷಣಗಳು ಕಂಡುಬರದ ಹಿನ್ನೆಲೆಯಲ್ಲಿ ಅವರವರ ಮನೆಗಳಲ್ಲಿಯೇ ನಿಗಾವಹಿಸಲು ಸೂಚಿಸಲಾಗಿದೆ. ಸೋಂಕು ದೃಢಪಟ್ಟವರ ಜೊತೆ ವಿಮಾನ ಹಾಗೂ ಬಸ್ಸಿನಲ್ಲಿ ಪ್ರಯಾಣಿಸಿದವರನ್ನು ಗುರುತಿಸಿ ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ರಾಜ್ಯ ಸರ್ವೇಕ್ಷಣಾ ಘಟಕ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕೊರೊನಾ ಸೋಂಕು ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡಿ ಅವರ ಕೈಗಳಿಗೆ ಮುದ್ರೆ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ ಹಾಗೂ ಅವರವರ ಮನೆಗಳಲ್ಲಿಯೇ ಇರಲು ಸೂಚಿಸಲಾಗಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯನ್ನು ಈಗಾಗಲೇ ರಚನೆ ಮಾಡಿದ್ದು, ಈ ಸಂಬಂಧ ನೋಡಲ್ ಅಧಿಕಾರಿಗಳ ನೇಮಕ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲು ನಿರ್ಧರಿಸಲಾಗಿದೆ. ಅಂತರ್ ರಾಜ್ಯ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅದರಂತೆಯೇ ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸಿ ಕೊಪ್ಪ, ಸಂಪಾಜೆ, ಶ್ರಿರಂಗಾಲ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದ್ದು, ಜನ ಇದಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಇವತ್ತಿನ ನಿರ್ಲಕ್ಷ್ಯ ಮುಂದೆ ಇನ್ನಷ್ಟು ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಇದನ್ನು ಎಲ್ಲರೂ ಅರಿಯಬೇಕಾಗಿದೆ.