ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ
ಮಡಿಕೇರಿ, ಆಗಸ್ಟ್ 14: ಮೇ ಅಂತ್ಯದ ವೇಳೆಗೆ 'ಹುಯ್ಯೋ ಹುಯ್ಯೊ ಮಳೆರಾಯ' ಎಂದವರೆಲ್ಲ, ಇದೀಗ 'ನಿಲ್ಲೋ ನಿಲ್ಲೋ ಮಳೆರಾಯ' ಎನ್ನುವಂಥ ಪರಿಸ್ಥಿತಿ ಎದುರಾಗಿದೆ!
ಕೊಡಗಿನಲ್ಲಂತೂ ಮಳೆಯ ಅಬ್ಬರ ಮುಂದುವರೆದಿದ್ದು, ಭಾಗಮಂಡಲದಲ್ಲಿ ಒಂದೇ ದಿನದ ಅವಧಿಯಲ್ಲಿ ದಾಖಲೆಯ ಸುಮಾರು 252 ಮಿ.ಮೀ. ಮಳೆ ಸುರಿದಿದ್ದು ಪರಿಣಾಮ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಇದರಿಂದ ಸುತ್ತಮುತ್ತಲ ಸಂಪರ್ಕ ಬಂದ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದ್ದು ಮಳೆ ನಿಂತರೆ ಸಾಕು ಎಂಬ ಸ್ಥಿತಿಗೆ ಜನ ಬಂದಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿದ ನದಿಗಳು: ಬಹು ಭಾಗ ರಸ್ತೆ ಸಂಪರ್ಕ ಕಡಿತ
ಕಳೆದ ಎರಡು ತಿಂಗಳಿನಿಂದ ಬಿಡುವು ನೀಡದೆ ಮಳೆ ಬರುತ್ತಿರುವುದರಿಂದ ಭಾರೀ ನಷ್ಟ ಸಂಭವಿಸಿದೆ. ಈಗಾಗಲೇ ಮಳೆಗೆ ಗುಡ್ಡ, ರಸ್ತೆ, ಮನೆ ಕುಸಿತವಾಗಿದ್ದರೆ, ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ಗುಡ್ಡ, ಕಣಿವೆ ಹೀಗೆ ಎಲ್ಲೆಂದರಲ್ಲಿ ಭೂಮಿ ಅಡಿಯಿಂದ ನೀರು ಉಕ್ಕಿ ಹರಿಯುತ್ತಿದೆ. ಸಮತಟ್ಟು ಇರುವ ಪ್ರದೇಶಗಳಲ್ಲಿ ನೀರು ಹರಿಯದೆ ನಿಂತಿದ್ದು ಜನ ಪರದಾಡುವಂತಾಗಿದೆ. ಹಲವೆಡೆ ನದಿ ನೀರು ಮನೆಗೆ ನುಗ್ಗಿದ ಕಾರಣ ಮನೆಯನ್ನೇ ಬಿಡುವ ಪರಿಸ್ಥಿತಿ ಎದುರಾಗಿದೆ.
ಮಳೆಯಿಂದಾದ ಹಾನಿ ಒಂದೆರಡಲ್ಲ
ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಕಾರಣ ಹಾರಂಗಿ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದ್ದು, ಸದ್ಯ 22967 ಕ್ಯುಸೆಕ್ ಒಳ ಹರಿವು ಇರುವ ಕಾರಣ 22375 ಕ್ಯುಸೆಕ್ ನದಿಗೆ ಹಾಗೂ 1000 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಇಲ್ಲಿನ ಕೂಡುಗದ್ದೆ ವ್ಯಾಪ್ತಿಯಲ್ಲಿ ಮನೆ ಮೇಲೆ ಮರ ಬಿದ್ದಿದ್ದು ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ. ಕೆಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೂ ಸಂಚಕಾರ ತಂದಿದೆ. ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಕಪಿಲೆ ಅಬ್ಬರ ಇಳಿಮುಖ, ಮೈಸೂರು -ಊಟಿ ರಸ್ತೆ ಸಂಚಾರಮುಕ್ತ
ಜಿಲ್ಲೆಯಲ್ಲಿ ಸರಾಸರಿ 127 ಮಿ.ಮೀ. ಮಳೆ
ಇನ್ನು ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣದ ಬಗ್ಗೆ ಹೇಳುವುದಾದರೆ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 127.10 ಮಿ.ಮೀ ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ 3097.61 ಮಿ.ಮೀ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1368.41 ಮಿ.ಮೀ ಮಳೆಯಾಗಿತ್ತು. ಈ ಬಾರಿ ಎರಡು ಪಟ್ಟು ಮಳೆ ಸುರಿದಿರುವುದನ್ನು ನಾವು ಕಾಣಬಹುದಾಗಿದೆ.
ಭಾರೀ ಮಳೆಗೆ ಹೈರಾಣಾದ ಮಲೆನಾಡ ಜನ, ಶೃಂಗೇರಿಯಲ್ಲಿ ತುಂಗೆಯ ರೌದ್ರ ನರ್ತನ
ಜಲಾವೃತವಾದ ಗದ್ದೆ ತೋಟ
ಒಂದು ದಿನದ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 151.50 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 123.77 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 106.03 ಮಿ.ಮೀ. ಮಳೆ ಸುರಿದಿದೆ. ಮಳೆಯಿಂದಾಗಿ ಕಾಫಿ ತೋಟ, ಗದ್ದೆಗಳು ಜಲಾವೃತಗೊಂಡಿದ್ದು, ಕಾಫಿ ಮತ್ತು ಕರಿಮೆಣಸು ಫಸಲು ನೆಲಕ್ಕಚ್ಚಿದೆ. ಇದುವರೆಗೆ ಮಳೆಯಿಲ್ಲ ಎಂದು ಪರಿತಪಿಸುತ್ತಿದ್ದ ಜನ ಈ ಬಾರಿಯ ಮಳೆಗೆ ಬೆಚ್ಚಿ ಬಿದ್ದಿದ್ದು ಕಣ್ಣೀರಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಕೊರೆವ ಚಳಿ!
ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದ್ದು ಯಾವಾಗ ಮರಗಳು ಬಂದು ಮನೆಗೆ ಅಪ್ಪಳಿಸಿ ಬಿಡುತ್ತವೆಯೋ ಎಂಬ ಭಯದಲ್ಲಿ ಗ್ರಾಮೀಣ ಪ್ರದೇಶದ ಜನ ಬದುಕುತ್ತಿದ್ದಾರೆ. ಇದರ ಜತೆಗೆ ಮೈಕೊರೆಯುವ ಚಳಿ ಥರಗುಟ್ಟುವಂತೆ ಮಾಡಿದೆ. ಇದರಿಂದ 'ಸಾಕಪ್ಪಾ ಮಳೆ' ಎಂದು ದೇವರನ್ನು ಪ್ರಾರ್ಥಿಸುವಂತಾಗಿದೆ. ಎರಡು ದಿನಗಳಿಂದ ಜಿಲ್ಲೆಯ ಶಾಲಾ-ಕಾಲೇಜುಗಳಿಗ ರಜೆ ಘೋಷಿಸಲಾಗಿದೆ.