ಹೇಳಿದ್ದೆಲ್ಲಾ ಕೇಳಲು ಕೊಡಗಿನವರು ಕುರಿಗಳಲ್ಲ; ಕೆ.ಜಿ.ಬೋಪಯ್ಯ
ಮಡಿಕೇರಿ, ಜೂನ್ 20: ಕೊಡಗಿನವರು ಅಧಿಕಾರಿಗಳು ಹೇಳಿದಂತೆ ಕೇಳುವ ಕುರಿಗಳಲ್ಲ ಎಂದು ಆಕ್ರೋಶಭರಿತವಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಭೂಗರ್ಭ ಶಾಸ್ತ್ರಜ್ಞರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ
ಮಡಿಕೇರಿಯ ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ವೃಕ್ಷ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯ ತೀರ್ಮಾನಕ್ಕೆ ಆಕ್ರೋಶ
ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ವೃಕ್ಷ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ, ಕೇವಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಮೂರು ಮಂದಿ ಮಾತ್ರ ಇದ್ದ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಧಿಕಾರದ ರಚನೆ ನಿಯಮಬದ್ಧವಾಗಿಲ್ಲ!
ಮೊದಲನದೆಯದಾಗಿ ಪ್ರಾಧಿಕಾರದ ರಚನೆಯೇ ನಿಯಮಬದ್ಧವಾಗಿಲ್ಲ. ಸರಕಾರ ಪ್ರಾಧಿಕಾರಕ್ಕೆ ಸದಸ್ಯರನ್ನೇ ಇನ್ನೂ ನಾಮನಿರ್ದೇಶನ ಮಾಡಿಲ್ಲ. ಸಾರ್ವಜನಿಕರ ಪ್ರತಿನಿಧಿ ಸದಸ್ಯರಿಲ್ಲದ ಹಾಗೂ ಕೋರಂ ಇಲ್ಲದ ಸಭೆಯಲ್ಲಿ ಕೇವಲ ಅಧಿಕಾರಿಗಳೇ ಸೇರಿ ಜನವಿರೋಧಿ ತೀರ್ಮಾನಗಳನ್ನು ಕೈಗೊಂಡಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ನಿಯಮಾವಳಿಯ ಪುಸ್ತಕವನ್ನೇ ಸಚಿವರ ಮುಂದಿಡುವುದರೊಂದಿಗೆ, ಅಧಿಕಾರಿಗಳು ಕೊಡಗಿನವರನ್ನು ಅವರು ಹೇಳಿದಂತೆ ಕೇಳುವ ಕುರಿಗಳು ಎಂದು ಭಾವಿಸಿದ್ದಾರೆ. ಆದರೆ ಇಲ್ಲಿ ಯಾರೂ ಕುರಿಗಳಿಲ್ಲ. ನಾವು ಕಾನೂನನ್ನು ಗೌರವಿಸುತ್ತೇವೆ. ಆದರೆ ಅಧಿಕಾರಿಗಳು ಮಾಡಿದ್ದೇ ಕಾನೂನು ಅಲ್ಲ ಎಂದು ಹರಿಹಾಯ್ದರು.
ಸಂತ್ರಸ್ತರಿಗೆ ಶೀಘ್ರ ಮನೆ ನೀಡಿ ಎಂದ ಕಂದಾಯ ಸಚಿವರು!
ಸರ್ಕಾರ ನಿಯಮ ಜಾರಿಯಾದ್ರೆ ಮನೆ ನಿರ್ಮಾಣ ಅಸಾಧ್ಯ
ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿ ನೀಡಿರುವ ಸಲಹೆಯಂತೆ ಜಿಲ್ಲೆಯ ಇಳಿಜಾರು, ಬೆಟ್ಟಗುಡ್ಡ, ನದಿ, ತೊರೆ, ಹಳ್ಳಕೊಳ್ಳದ ಬಳಿಯ ಸ್ವಂತ ಜಾಗದಲ್ಲಿ ಮನೆ ನಿರ್ಮಾಣಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಯಮ ಜಾರಿಗೆ ಬಂದಲ್ಲಿ ಕೊಡಗಿನಲ್ಲಿ ಮನೆ ನಿರ್ಮಾಣ ಸಾಧ್ಯವೇ ಇಲ್ಲ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕಳೆದ ವರ್ಷದ ಪ್ರಕೃತಿ ವಿಕೋಪದಿಂದಾಗಿ ಮಕ್ಕಂದೂರು ಮತ್ತು ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಆದರೆ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಿಗೂ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಿಗೆ ಭರವಸೆ ನೀಡಿದ ಕಂದಾಯ ಸಚಿವರು
ಬೋಪಯ್ಯ ಅವರ ಮಾತನ್ನು ಆಲಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ವೃಕ್ಷ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯ ಅಂತಿಮವಲ್ಲ. ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇಳಿಜಾರು, ಬೆಟ್ಟಗುಡ್ಡ, ನದಿ, ತೊರೆ, ಹಳ್ಳಕೊಳ್ಳದ ಬಳಿ ಮನೆ ನಿರ್ಮಾಣ ಮಾಡಬಾರದು ಎಂದು ತಜ್ಞರು ತಾಂತ್ರಿಕ ವರದಿ ನೀಡಿದ್ದು, ಅದರಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಈ ಸಂಬಂಧ ಪುನರ್ ಪರಿಶೀಲಿಸಲು ಮತ್ತೊಮ್ಮೆ ತಾಂತ್ರಿಕ ತಂಡವನ್ನು ಕಳುಹಿಸಲಾಗುವುದು. ಆ ವೇಳೆ ಜನಪ್ರತಿನಿಧಿಗಳ ಜೊತೆ ಕೂಡ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.