ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!
ಬೆಂಗಳೂರು, ಆಗಸ್ಟ್ 20: ಭಾರಿ ಮಳೆ, ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗಿನ ನಷ್ಟದ ಕುರಿತು ಲೆಕ್ಕ ಹಾಕಲು ವಾರಕ್ಕಿಂತ ಹೆಚ್ಚು ದಿನ ಬೇಕಾಗಬಹುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸರಿಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ಹಂತದ ಮಾಹಿತಿ ದೊರಕಿದೆ. ಆದರೆ ನಿಖರ ನಷ್ಟದ ಪ್ರಮಾಣವನ್ನು ಪತ್ತೆ ಮಾಡಲು ಕನಿಷ್ಠ ಒಂದು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಉನ್ನತಮೂಲಗಳಿಂದ ತಿಳಿದುಬಂದಿದೆ.
ಕಣ್ಣೆದುರಲ್ಲೇ ಬಿತ್ತು ಮನೆ... ಯಾರಿಗೆ ಹೇಳೋದು ಈ ಯಮಯಾತನೆ?!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಹಿರಿಯ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮೂರು ದಿನಗಳ ಒಳಗಾಗಿ ನಷ್ಟದ ಮಾಹಿತಿ ನೀಡುವಂತೆ ಕೋರಿದ್ದಾರಾದರೂ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಮಳೆ ನಿಂತ ಬಳಿಕವಷ್ಟೇ ನಷ್ಟದ ಅಂದಾಜು ಮಾಡಲು ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಸಿಎಂ ಕುಮಾರಸ್ವಾಮಿ ಆದೇಶ ಕೊಟ್ಟು 24 ಗಂಟೆಗಳು ಉರುಳಿವೆಯಾದರೂ ನಷ್ಟದ ಅಂದಾಜು ಮಾಡಬೇಕಾದ ಅಧಿಕಾರಿಗಳು ಇನ್ನೂ ಪ್ರವಾಹಪೀಡಿತರ ರಕ್ಷಣಾ ಕಾರ್ಯದಲ್ಲೇ ತೊಡಗಿದ್ದಾರೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಕಂದಾಯ ಇಲಾಖೆಯ ಬೆಳೆ, ಮನೆಗಳು, ಜನ-ಜಾನುವಾರು, ಸರ್ಕಾರಿ ಕಟ್ಟಡಗಳು, ಕೊಚ್ಚಿ ಹೋದ ಜಮೀನಿನ ಒಡ್ಡುಗಳು, ಗುಡಿ-ಗುಂಡಾರಗಳು, ಮಸೀದಿ, ಚರ್ಚ್ಗಳು ಮತ್ತಿತರ ಆಸ್ತಿಗಳ ನಷ್ಟವನ್ನು ಪತ್ತೆ ಮಾಡಬೇಕಾಗಿದ್ದು, ಇನ್ನೂ ಅನೇಕ ಕಡೆಗಳಲ್ಲಿ ನೀರು ಆವರಿಸಿರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯ ಬಿಟ್ಟು ನಷ್ಟದ ಅಂದಾಜು ಲೆಕ್ಕ ಹಾಕುವ ಸ್ಥಿತಿಯಲ್ಲಿಲ್ಲ.
ಎಲ್ಲೆಲ್ಲಿ ಏನೇನು ನಷ್ಟವಾಗಿದೆ?
ಇನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಿಗೆ ಆಗಿರುವ ಲೆಕ್ಕವನ್ನೂ, ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಕುರಿತಂತೆ ವರದಿ ಸಿದ್ಧಪಡಿಸಬೇಕು. ಇಂಧನ ಇಲಾಖೆ ಅಧಿಕಾರಿಗಳು ಕೊಚ್ಚಿ ಹೋದ ಕಂಬಗಳು, ಹಾಳಾದ ಟ್ರಾನ್ಸ್ಫಾರ್ಮ್ಗಳು ಮತ್ತು ಗ್ರಿಡ್ಗಳ ಸ್ಥಿತಿಗಳ ಕುರಿತಂತೆ ವರದಿ ತಯಾರಿಸಬೇಕು. ಈ ಎಲ್ಲ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರಕ್ಕೆ ಇನ್ನೂ ಒಂದು ವಾರಗಳ ಸಮಯ ಬೇಕಾಗುತ್ತದೆ. ಅದಾದ ಬಳಿಕವಷ್ಟೇ ರಾಜ್ಯ ಸರ್ಕಾರ ವರದಿ ಪರಿಶೀಲಿಸಿ, ನಷ್ಟದ ಪ್ರಮಾಣವನ್ನು ಅಧಿಕೃತವಾಗಿ ಘೋಷಿಸಬೇಕು.
ಕೊಡಗಿಗೆ ಪ್ರಧಾನಿ ಬರುವರೇ?
ರಾಜ್ಯ ಸರ್ಕಾರ ಪ್ರವಾಹ ಮತ್ತು ಮಳೆಯಿಂದ ಆಗಿರುವ ನಷ್ಟದ ನಿಖರ ವರದಿ ತಯಾರಿಸಿದ ನಂತರ ನಾನಾ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ಅಥವಾ ತುರ್ತು ನೆರವಿಗೆ ಮನವಿ ಮಾಡಲಿದೆ. ಪ್ರಥಮ ಹಂತವಾಗಿ ಪ್ರಧಾನಿಗೆ ಪತ್ರ ಬರೆದ ನಂತರ, ಸಿಎಂ ನೇತೃತ್ವದಲ್ಲಿ ನಿಯೋಗವೂ ಹೋಗುವ ಸಾಧ್ಯತೆಗಳಿವೆ.
ಸದ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುವ ಕುರಿತು ಯಾವುದೇ ಸಂದೇಶ ರವಾನಿಸಿಲ್ಲ. ಒಂದು ವೇಳೆ ಮುಂದಿನ ಒಂದೆರಡು ದಿನಗಳಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಹಠಾತ್ ಭೇಟಿ ಕೊಟ್ಟರೆ 200 ಕೋಟಿ ರೂ.ಗಳ ನೆರವು ಸಿಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಕೊಡಗು ಪ್ರವಾಹ : ಕುಮಾರಸ್ವಾಮಿಗೆ ಮೋದಿ ಫೋನ್ ಕರೆ
ಕೊಚ್ಚಿ ಹೋದ ರಸ್ತೆ-ಸೇತುವೆಗಳೆಷ್ಟು?
ಕೊಡಗಿನಲ್ಲಿ 36 ಪರಿಹಾರ ಕೇಂದ್ರಗಳನ್ನು ತೆರೆದು 3601 ಜನರಿಗೆ ಪುನರ್ವಸತಿ ಕಲ್ಪಿಸಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಕೇಂದ್ರಗಳನ್ನು ತೆಗೆದು 801 ಜನರಿಗೆ ಆಶ್ರಯ ಒದಗಿಸಲಾಗಿದೆ. ಕೊಡುಗೆ ಜಿಲ್ಲೆಯಲ್ಲಿ 123 ಕಿಮೀ ಉದ್ದ ರಸ್ತೆ, 58 ಸೇತುವೆಗಳು, 278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮ್ರ್ಗಳು ನಷ್ಟಕ್ಕೀಡಾಗಿವೆ.
ಐದು ದಿನಗಳಲ್ಲಿ ಆಗಿರುವ ನಷ್ಟ ಎಷ್ಟು
ಕೊಡಗು ಜಿಲ್ಲೆಯಲ್ಲಿ 8 ಮಂದಿ ಮೃತಪಟ್ಟಿದ್ದು 845 ಮನೆಗಳಿಗೆ ಹಾನಿಯಾಗಿದೆ, ದಕ್ಷಿಣ ಕನ್ನಡದಲ್ಲಿ ಒಬ್ಬರು ಮೃತಪಟ್ಟಿದ್ದು 381 ಮನೆಗಳಿಗೆ ಹಾನಿಯಾಗಿದೆ, ಒಟ್ಟು 9 ಮಂದಿ ಮೃತಪಟ್ಟಿದ್ದು 1206 ಮನೆಗಳಿಗೆ ಹಾನಿ ಉಂಟಾಗಿದೆ.