ಹುಲಿ ಮದುವೆ ಮಾಡಿಕೊಳ್ಳುತ್ತೇವೆ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ನರಭಕ್ಷಕ ಹುಲಿ ದಾಳಿ
ಮಡಿಕೇರಿ, ಮಾರ್ಚ್ 9: ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಯನ್ನು ಸೆರೆಹಿಡಿಯಲು ಅಥವಾ ಗುಂಡಿಟ್ಟು ಕೊಲ್ಲುವ ಆದೇಶ ಹೊರಡಿಸಲಾಗಿದ್ದು, ಈವರೆಗೆ ಹುಲಿ ದಾಳಿಗೆ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನರಭಕ್ಷಕ ಹುಲಿಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಕೊಡಗಿನ ಶಾಸಕರಾದ ಕೆ.ಜಿ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು ಹುಲಿ ದಾಳಿ ವಿಷಯ ಪ್ರಸ್ತಾಪಿಸಿದರು.
ಮೊದಲು ಆ ನರಭಕ್ಷಕ ಹುಲಿಯನ್ನು ಹಿಡಿಯಿರಿ, ನಿಮಗೆ ಆಗದಿದ್ದರೆ ನಮಗೆ ಬಿಡಿ, ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮಡಿಕೇರಿ; ಹುಲಿ ಸೆರೆ ಅಸಾಧ್ಯವಾದರೆ ಮಾತ್ರ ಕಂಡಲ್ಲಿ ಗುಂಡು
ಹುಲಿ ಮದುವೆ ಮಾಡಿಕೊಳ್ಳುತ್ತೇವೆ, ಏನು ಮದುವೆ ಅನ್ನುವುದನ್ನು ಆಮೇಲೆ ಹೇಳುತ್ತೇವೆ ಎಂದು ಬಿಜೆಪಿಯ ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ಇದೇ ವೇಳೆ ಬೋಪಯ್ಯ ಅವರ ಮಾತಿಗೆ ಧ್ವನಿಗೂಡಿಸಿದ ವಿರಾಜಪೇಟೆ ಶಾಸಕ ಅಪ್ಪಚ್ಚು ರಂಜನ್, ನಿಮಗೆ ಹುಲಿ ಹಿಡಿಯೋಕೆ ಆಗುತ್ತಾ ಇಲ್ವಾ ಹೇಳಿ, ನಾಲ್ಕು ಜನರನ್ನು ಅದು ಕೊಂದಿದೆ ಎಂದು ಒತ್ತಾಯಿಸಿದರು.
ಶಾಸಕದ್ವಯರ ಆಗ್ರಹಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಎದ್ದು ನಿಂತು, ""ಆ ರೀತಿ ನೀವೇ ಕೊಲ್ಲುವುದಕ್ಕೆ ಅವಕಾಶವಿಲ್ಲ. ಈಗಾಗಲೇ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ. ಆ ನರಭಕ್ಷಕ ಹುಲಿಯನ್ನು ಶೂಟ್ ಮಾಡೋಕೆ ತಿಳಿಸಿದ್ದೇನೆ'' ಎಂದು ಸದನದಲ್ಲಿ ಉತ್ತರಿಸಿದರು.
ಇನ್ನು, ಇತ್ತ ಕೊಡಗಿನಲ್ಲಿ ನರಹಂತಕ ಹುಲಿಯನ್ನು ಸೆರೆಹಿಡಿಯಲು ಅಥವಾ ಗುಂಡಿಟ್ಟು ಕೊಲ್ಲುವ ಆದೇಶ ಹೊರಡಿಸಲು ಮಾನವ ಜೀವಗಳು ಬಲಿಯಾಗಬೇಕಿತ್ತಾ. ಹುಲಿಯೊಂದಿಗೆ ಕಾದಾಡಿ ಅದನ್ನು ಕೊಂದು ಅದರೊಂದಿಗೆ ಮದುವೆ ಮಾಡಿಸಿಕೊಂಡ ಕೊಡವರಿಗೆ ಕೇವಲ ಒಂದು ನರಹಂತಕ ಹುಲಿಯನ್ನು ಕೊಲ್ಲಲು ಇಷ್ಟು ಸಮಯ ಬೇಕಿರಲಿಲ್ಲ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಕ್ರೋಶ ವ್ಯಕ್ತಪಡಿಸಿತ್ತು.
ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರ
ಕಾನೂನಿಗೆ ಬೆಲೆ ಕೊಡುವ ಮಂದಿಯ ತಾಳ್ಮೆಯನ್ನು ಪರಿಶೀಲಿಸಬೇಡಿ, ಇಂತಹ ನರಭಕ್ಷಕ ಹುಲಿಯನ್ನು ಕೂಡಲೇ ಸೆರೆಹಿಡಿಯುವುದು ಅಥವಾ ಗುಂಡಿಕ್ಕಿ ಕೊಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸರಕಾರ ಹಾಗೂ ಅರಣ್ಯ ಇಲಾಖೆ ಹೊಣೆ ಎಂದು ಯೂತ್ ವಿಂಗ್ ಎಚ್ಚರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ, ""ನಮ್ಮ ತಾಳ್ಮೆಗೂ ಒಂದು ಮಿತಿ ಇದೆ, ಒಂದೆಡೆ ಆನೆಗಳ ಹಾವಳಿ, ಮತ್ತೊಂದೆಡೆ ವನ್ಯ ಮೃಗಗಳ ಹಾವಳಿ, ಅಕಾಲಿಕ ಮಳೆಯ ಸಮಸ್ಯೆ, ಇನ್ನು ಪಾತಾಳಕ್ಕೆ ಇಳಿದಿರುವ ಕಾಫಿ, ಕರಿಮೆಣಸಿನ ಬೆಲೆ. ದುಬಾರಿಯಾಗಿರುವ ಆಳುಗಳ ಕೂಲಿಯಿಂದ ಬೆಳೆಗಾರ ತತ್ತರಿಸಿರುವಾಗ ಹಾಗೂ ಕೂಲಿಯಾಳುಗಳೇ ಸಿಗದಿರುವ ಈ ಸಮಯದಲ್ಲಿ ಇದೀಗ ಹುಲಿಯ ಹಾವಳಿಯಿಂದ ಕೆಲಸಗಾರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.''
""ಒಂದೋ ಈ ನರಹಂತಕ ಹುಲಿಯನ್ನು ಕೂಡಲೆ ಸೆರೆ ಹಿಡಿಯಿರಿ, ಇಲ್ಲವೇ ಬೆಳೆಗಾರರಿಗೆ ಈ ನರಹಂತಕ ಹುಲಿಯನ್ನು ಗುಂಡು ಹೊಡೆಯಲು ಅವಕಾಶ ಮಾಡಿಕೊಡಿ. ಕಾನೂನಿಗೆ ತುಂಬಾ ಗೌರವ ನೀಡುವ ಮಂದಿ ನಾವು, ನಮ್ಮ ತಾಳ್ಮೆಯನ್ನು ಮತ್ತೊಮ್ಮೆ ಪರೀಕ್ಷೆ ಮಾಡಬೇಡಿ. ಹತ್ತಾರು ಜಾನುವಾರುಗಳನ್ನು ಬಲಿತೆಗೆದುಕೊಂಡ ಈ ನರಹಂತಕ ಹುಲಿಯನ್ನು ಕೊಲ್ಲಲು ಒಂದು ಮಾನವ ಜೀವ ಬಲಿಯಾದ ಸಮಯದಲ್ಲಿಯೇ ಸರಕಾರ ಹಾಗೂ ಇಲಾಖೆ ಮುಂದಾಗಬೇಕಿತ್ತು.''
ಆದರೆ ಇದೀಗ ನಾಲ್ಕನೇ ಜೀವ ಬಲಿಯಾದ ನಂತರ ಜನಪ್ರತಿನಿಧಿಗಳು ಎಚ್ಚೆದ್ದುಕೊಂಡಿರುವುದು ನೋಡಿದಾಗ ಇವರ ಮನಸ್ಸಿನೊಳಗೆ ಏನಿದೆ ಎಂದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ, ನರಹಂತಕ ಹುಲಿ ದಾಳಿಗೆ ಸಾವನ್ನಪ್ಪಿರುವ ಕೂಲಿ ಕಾರ್ಮಿಕರ ಸಂಸಾರಕ್ಕೆ ಸರಕಾರವೇ ಪರಿಹಾರ ನೀಡಬೇಕು, ಅದು ಬಿಟ್ಟು ಏನಾದರು ಬೆಳೆಗಾರರಿಗೆ ಕಿರುಕುಳ ನೀಡಿ, ಬೆಳೆಗಾರರಿಂದ ಪರಿಹಾರ ವಸೂಲಿಗೆ ಮುಂದಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
Recommended Video
""ನಮಗೂ ಸಾಕಾಗಿ ಹೋಗಿದೆ, ವನ್ಯ ಮೃಗಗಳು ಕಾಡಿನೊಳಗೆ ಇರುವಂತೆ ವ್ಯವಸ್ಥೆ ಮಾಡುವುದು ಬಿಟ್ಟು ಕಾಡನ್ನು ಕಡಿದು ಬೆಲೆಬಾಳುವ ತೇಗ, ನೀಲಗಿರಿ ತೋಪುಗಳನ್ನು ಬೆಳೆಸಿರುವುದರ ಫಲ ಇವತ್ತು ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿದೆ. ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರವನ್ನು ಸರಕಾರ ಹಾಗೂ ಇಲಾಖೆ ಕಂಡುಕೊಳ್ಳಬೇಕಿದೆ ಇಲ್ಲವೆಂದರೆ ಕೊಡವರ ಕೋವಿಗೆ ನರಹಂತಕ ಹುಲಿ ಬೇಟೆಗೆ ಅವಕಾಶ ಕೊಡಿ. 24 ಗಂಟೆಯೊಳಗೆ ಅದೇ ನರಹಂತಕ ಹುಲಿ ಅರಣ್ಯ ಇಲಾಖೆಯ ಅಂಗಳದಲ್ಲಿರುತ್ತದೆ'' ಎಂದು ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಿಡಿಕಾರಿದ್ದಾರೆ.