ಕೊಡಗು: ಭೂಕುಸಿತ ತಡೆಗೆ ಮಿಯಾವಕಿ ವನ ನಿರ್ಮಾಣ
ಮಡಿಕೇರಿ, ಏಪ್ರಿಲ್ 5: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾವೇರಿ ನಿಸರ್ಗಧಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಮಿಯಾವಕಿ ವನ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಜಲಪ್ರಳಯ ಉಂಟಾಗಿ ಬೆಟ್ಟ-ಗುಡ್ಡಗಳು ಕುಸಿದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಜೊತೆಗೆ ಬೆಟ್ಟಗಳ ತಪ್ಪಲಿನಲ್ಲಿ ವಾಸಿಸುತ್ತಿದ್ದ ಅನೇಕ ಜನರು, ಪ್ರಾಣಿ, ಪಕ್ಷಿಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು.
ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ
ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಂಭವಿಸುವ ಈ ದುರಂತವನ್ನು ತಪ್ಪಿಸಲು ವಿಶೇಷ ಹಾಗೂ ಶಾಶ್ವತ ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂಬ ಕೂಗು ಕೇಳಿ ಬಂದಿತು. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಭೂಕುಸಿತ ತಡೆಗಟ್ಟಲು ವಿನೂತನವಾದ ಪ್ರಯೋಗಕ್ಕೆ ಮುಂದಾಗಿದೆ. ಅದುವೇ ಮಿಯಾವಕಿ ಪದ್ಧತಿಯಲ್ಲಿ ಸಮೃದ್ಧವಾಗಿ ಅರಣ್ಯ ಬೆಳೆಸುವ ಮೂಲಕ ಮಣ್ಣಿನ ಸಡಿಲಿಕೆಯನ್ನು ತಡೆಗಟ್ಟಲು ಪ್ರಾಯೋಗಿಕ ಪ್ರಯೋಗ ನಡೆಸುತ್ತಿದೆ.
ಡಾ.ಅಕಿರ ಮಿಯಾವಕಿ ಅವರ ಆವಿಷ್ಕಾರ
ಪ್ರಥಮ ಹಂತವಾಗಿ ಅರಣ್ಯ ಇಲಾಖೆಯು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಸಹಯೋಗದೊಂದಿಗೆ ಕಾವೇರಿ ನಿಸರ್ಗಧಾಮದ ಆವರಣದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಮಿಯಾವಕಿ ಮಾದರಿ ಅರಣ್ಯೀಕರಣ ಯೋಜನೆ ತಲೆ ಎತ್ತಿ ನಿಂತಿದೆ. ಜಪಾನ್ ಸಸ್ಯಶಾಸ್ತ್ರಜ್ಞ ಡಾ.ಅಕಿರ ಮಿಯಾವಕಿ ಅವರು ಆವಿಷ್ಕಾರ ಮಾಡಿರುವ ವಿಶೇಷ ತಳಿಯ ಗಿಡಗಳಾಗಿದ್ದು, ಇವು ಭೂಕುಸಿತ ಮಣ್ಣಿನ ಸಡಿಕೆಯಾಗದಂತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆ
ಸುಮಾರು 10 ಸಾವಿರ ವಿವಿಧ ಜಾತಿಯ ಸಸ್ಯಗಳನ್ನು ಬೆಳೆದಿರುವ ಮಿಯಾವಕಿ ವನದ ಸಂಪೂರ್ಣ ನಿರ್ವಹಣೆಯನ್ನು ಟೊಯೊಟೊ ಕಿರ್ಲೋಸ್ಕರ್ ಸಂಸ್ಥೆ ನೋಡಿಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ಬೆಟ್ಟದ ಸಾಲಿನಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾಗದಲ್ಲಿ ಇಂತಹ ಅರಣ್ಯೀಕರಣ ಬೆಳೆಸುವುದಾದರೆ ನೆರವು ನೀಡಲೂ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲೂ ಬಿಸಿಲಿನ ತಾಪಮಾನ ಏರಿಕೆ ಕಂಡುಬಂದಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಮಿಯಾವಕಿ ವನ ತುಂಬ ಅನುಕೂಲಕರವಾಗಿವೆ. ಜಿಲ್ಲೆಯಲ್ಲಿ ಮುಂದೆ ದುಬಾರೆಯಲ್ಲಿ 5 ಎಕರೆ, ಹಾರಂಗಿ ಹಿನ್ನೀರಿನ ಟ್ರೀ ಪಾರ್ಕ್ ನಲ್ಲಿ 5 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆ ಇದೆ.
ಭೂಕುಸಿತ ತಡೆಯುವ ಪರಿಹಾರೋಪಾಯ
2018ರ ಈಚೆಗೆ ಪ್ರತಿ ಮಳೆಗಾಲ ಹಾಗೂ ಆಗಸ್ಟ್ನಲ್ಲಿ ಸಂಭವಿಸುವ ಜಲಪ್ರಳಯ ಜಿಲ್ಲೆಯ ಜನರಲ್ಲಿ ಆತಂಕವನ್ನು ತರುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ಭೂಕುಸಿತದ ಪ್ರದೇಶಗಳಲ್ಲಿ ಈಗಾಗಲೇ ʼವೆಟ್ಟಿವೆರ್ ಹುಲ್ಲುʼ ನಾಟಿ ಮಾಡಿದ್ದಾರೆ. ಮತ್ತೊಂದು ಕಡೆ ಅರಣ್ಯ ಇಲಾಖೆಯೂ ಭೂಕುಸಿತ ತಡೆಯುವ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ಕಂಡು ಹುಡುಕುವ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದೆ. ʼಮಿಯಾವಾಕಿʼ ಪದ್ಧತಿಯ ಅರಣ್ಯ ಬೆಳೆಸುವುದರಿಂದ ಬೆಟ್ಟ ಜರಿದು ಬರುವ ಸಮಸ್ಯೆಗೆ ಕಡಿವಾಣ ಹಾಕುವ ಸಾಧ್ಯತೆ ಪರೀಕ್ಷಿಸುತ್ತಿದೆ.
ಜಪಾನಿನಲ್ಲಿ ಭೂಕುಸಿತ ತಡೆಗೂ ಈ ಪದ್ಧತಿ
ಜಪಾನ್ ಜೈವಿಕ ತಜ್ಞ ಡಾ.ಅಕಿರಾ ಮಿಯಾವಾಕಿ ಎಂಬವರು ಆವಿಷ್ಕಾರ ಮಾಡಿದ ಅರಣ್ಯ ಪದ್ಧತಿಯೇ ʼಮಿಯಾವಾಕಿ ಅರಣ್ಯʼ. ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯೀಕರಣವೇ ಇದರ ಕಲ್ಪನೆಯಾಗಿದೆ. ಈ ಪದ್ಧತಿ ಪ್ರಕಾರ ಒಂದು ಸ್ಥಳದಲ್ಲಿ ಸಾಮಾನ್ಯಕ್ಕಿಂತ 10 ಪಟ್ಟು ಅಧಿಕ ಕಾಡು ಬೆಳೆಸಲಾಗುವುದು. ಸಣ್ಣ ಸ್ಥಳಗಳಲ್ಲಿಯೂ ಅತೀ ಹೆಚ್ಚು ಮರಗಳನ್ನು ಬೆಳೆಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟು ಹಾಕಲಾಯಿತು. ಜಪಾನಿನಲ್ಲಿ ಭೂಕುಸಿತ ತಡೆಗೂ ಈ ಪದ್ಧತಿಯ ಅರಣ್ಯ ಬೆಳೆಸಲಾಗುತ್ತದೆ. ಭಾರತದ ಕೆಲವು ನಗರಗಳಲ್ಲಿ ಇದು ಹೆಸರು ಮಾಡಿದೆ.
Recommended Video
ಭೂಕುಸಿತ ಆಗುವುದಿಲ್ಲ
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗುವ ಜಾಗಗಳಲ್ಲಿ ಮಿಯಾವಕಿ ವನ ಬೆಳೆಸಿದರೆ ಅನಾಹುತ ತಡೆಯಲು ಸಾಧ್ಯವಾಗುತ್ತದೆ. ಜಪಾನ್ ನಲ್ಲಿ ಹೆಚ್ಚು ಭೂಕುಸಿತ ಆಗುವ ಪ್ರದೇಶಗಳಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ತುಂಬಾ ಅಕ್ಕ-ಪಕ್ಕ ಗಿಡಗಳನ್ನು ಬೆಳೆಸುತ್ತಾರೆ. ಮರಗಳು ಹತ್ತಿರ ಹತ್ತಿರವಾಗಿ ಬೆಳೆಯುವುದರಿಂದ ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಆಗ ಭೂಕುಸಿತ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಆ ಪ್ರಯೋಗ ಮಾಡಲಾಗುತ್ತಿದೆ.