ರಾಜ್ಯಸಭಾ ಮಾಜಿ ಸದಸ್ಯ ಎಫ್.ಎಂ.ಖಾನ್ ವಿಧಿವಶ
ಮಡಿಕೇರಿ, ಜುಲೈ 22:: ರಾಜಕೀಯ ಮುತ್ಸದ್ಧಿ, ಬೊಯಿಕೇರಿಯ ಯೂಸೂಫ್ ಅಲಿಖಾನ್ ಮೆಮೋರಿಯಲ್ ಗಾರ್ಡನ್ ನ ಮಾಲೀಕರಾಗಿದ್ದ ಮಾಜಿ ರಾಜ್ಯಸಭಾ ಸದಸ್ಯ ಫಯಾಜ್ ಮೊಹಮದ್ ಖಾನ್ (82) ಅವರು ಗುರುವಾರ ನಿಧನರಾಗಿದ್ದು, ಅಂತ್ಯಕ್ರಿಯೆ ಗುಡ್ಡೆಹೊಸೂರು ಬಳಿ ರಸೂಲ್ ಫಾರಂನಲ್ಲಿ ಶುಕ್ರವಾರ ಮುಸ್ಲಿಂ ಧರ್ಮದ ವಿಧಿವಿಧಾನದಂತೆ ಬೆಳಿಗ್ಗೆ ನಡೆಯಿತು.
ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ತಮ್ಮ ಬಲ್ಯಾಟ್ರಿ ತೋಟದ ಮನೆಯಲ್ಲಿ ನಿಧನರಾದರು.
ಬೋಯಿಕೇರಿಯ ತಮ್ಮ ಬಲ್ಯಾಟ್ರಿ ತೋಟದಿಂದ 1960 ರಿಂದಲೇ ರಾಜಕೀಯ ಆರಂಭಿಸಿದ ಅವರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ, ಹಲವು ಕ್ರೀಡಾ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.[ಕಾಫಿ ತೋಟದ ಉದ್ಯಾನವನದಲ್ಲಿ ಪುಷ್ಪ ಪ್ರೇಮಿಗಳು]
1974ರಿಂದ 1982ರವರೆಗೆ ರಾಜ್ಯಸಭಾ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಹಾಗೂ ಸಂಜಯ್ ಗಾಂಧಿಗೆ ಆಪ್ತರಾಗಿದ್ದರು. ಇನ್ನು ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಬಲಗೈ ಬಂಟರಾಗಿದ್ದರು.
1998ರ ಬಳಿಕ ರಾಜಕೀಯ ಜೀವನದಿಂದ ದೂರವಾಗಿ ಮಡಿಕೇರಿ ಬಳಿಯ ಬೋಯಿಕೇರಿಯ ಬಲ್ಯಾಟ್ರಿ ತೋಟದಲ್ಲೇ ವಾಸವಿದ್ದರು. ತಮ್ಮ ತಂದೆ ಆಲಿಖಾನ್ ಅವರು ಆರಂಭಿಸಿದ್ದ ಗಾರ್ಡನ್ ಅಭಿವೃದ್ಧಿ ಪಡಿಸಿ ಪ್ರತಿವರ್ಷ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು. ಮೃತ ಎಫ್.ಎಂ.ಖಾನ್ರವರು ಮೂವರು ಪುತ್ರಿಯರನ್ನು ಅಗಲಿದ್ದಾರೆ. (ಒನ್ಇಂಡಿಯಾ ಸುದ್ದಿ)