ಕೊಡಗಿನ ಸಂತ್ರಸ್ತರಿಗೆ ಸುರಕ್ಷಿತ ಸ್ಥಳಗಳಲ್ಲಿ ಮನೆ ನಿರ್ಮಾಣ
ಮಡಿಕೇರಿ, ಸೆಪ್ಟೆಂಬರ್ 11 : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಲು ಮಡಿಕೇರಿ ಸಮೀಪದ ಕರ್ಣಂಗೇರಿ ಬಳಿಯಲ್ಲಿ ಸುಮಾರು 4 ಎಕರೆ ಜಾಗವನ್ನು ಗುರುತಿಸಲಾಗಿದೆ.
ಮನೆಗಳನ್ನು ನಿರ್ಮಿಸಲು ಗುರುತಿಸಿರುವ ಪ್ರದೇಶಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಈಗಾಗಲೇ ಕರ್ಣಂಗೇರಿ, ಗಾಳಿಬೀಡು, ಕೆ.ನಿಡುಗಣೆ, ಮದೆ, ಸಂಪಾಜೆ, ಜಂಬೂರು, ಮಾದಪುರ ಹೀಗೆ ನಾನಾ ಕಡೆಗಳಲ್ಲಿ 100 ಎಕರೆಗೂ ಹೆಚ್ಚು ಭೂಮಿ ಗುರುತಿಸಲಾಗಿದ್ದು, ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ' ಎಂದು ಹೇಳಿದರು.
ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ
'ಸಂತ್ರಸ್ತ ಕುಟುಂಬಗಳಿಗೆ ಮಾದರಿ ಮನೆ ನಿರ್ಮಿಸಲಾಗುವುದು. ಸದ್ಯ, ಭೂ ಕುಸಿತದಿಂದ ತೊಂದರೆ ಅನುಭವಿಸುತ್ತಿರುವ ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸುವಂತಾಗಬೇಕು. ಭೂಮಿ ಕಳೆದುಕೊಂಡವರಿಗೆ ಸಿ ಮತ್ತು ಡಿ ಭೂಮಿಯನ್ನು ಒದಗಿಸಬೇಕು' ಎಂದು ಅವರು ಹೇಳಿದರು.
ಚಿತ್ರಗಳು : ಕೊಡಗಿನ ಈ ರಸ್ತೆಗಳ ಗುರುತು ಹಿಡಿಯುವಿರಾ?
ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರು ಮಾತನಾಡಿ, 'ಪುನರ್ ವಸತಿ ಕಲ್ಪಿಸಲು ಜಾಗದ ಕೊರತೆ ಇಲ್ಲ. ಸದ್ಯ ಮನೆಯನ್ನು ಸಂತ್ರಸ್ತರೇ ನಿರ್ಮಿಸಿಕೊಳ್ಳುತ್ತಾರೆಯೇ, ಜಿಲ್ಲಾಡಳಿತವೇ ಮನೆ ನಿರ್ಮಿಸಿಕೊಡಬೇಕೇ ಎಂದು ಮತ್ತೊಮ್ಮೆ ಎಲ್ಲರಿಂದ ಅಭಿಪ್ರಾಯ ಪಡೆಯಲಾಗುವುದು' ಎಂದು ತಿಳಿಸಿದರು.
ಕೊಡಗು ಚಿತ್ರಗಳು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ
ಸಂಚಾರಿ ಆರೋಗ್ಯ ತಂಡ ಭೇಟಿ
ಪ್ರಕೃತಿ ವಿಕೋಪದಿಂದ ಉಂಟಾದ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ತೊಂದರೆಗೀಡಾದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ತಲುಪಿಸುವ ಸಲುವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರನ್ನೊಳಗೊಂಡ ತಂಡ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವುದು, ಚಿಕಿತ್ಸೆ ನೀಡುವುದು ಮತ್ತು ಆರೋಗ್ಯ ಶಿಕ್ಷಣ ನೀಡುವ ಸಲುವಾಗಿ 9 ಸಂಚಾರಿ ಆರೋಗ್ಯ ತಂಡ ರಚನೆಯಾಗಿದೆ. ಈ ಸಂಚಾರಿ ಆರೋಗ್ಯ ತಂಡಗಳು ವೇಳಾಪಟ್ಟಿಯಂತೆ ಮಳೆಯಿಂದ ಹಾನಿಗೊಂಡ ಗ್ರಾಮಗಳಿಗೆ ಭೇಟಿ ನೀಡಲಿದೆ.
ಆರೋಗ್ಯ ತಂಡ ವೇಳಾಪಟ್ಟಿ
ಮಡಿಕೇರಿ ತಾಲೂಕಿನಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರದಂದು ಬಲಮುರಿ, ಕೊಣ್ಣಂಜಗೇರಿ, ಕಿರುಂದಾಡು, ಕೈಕಾಡು, ಬಾವಲಿ, ಮದೆನಾಡು, ಜೋಡುಪಾಲ, ಅರೆಚಾಲು, ಬೆಳಕುಮಾನಿ, ಕಾಟಕೇರಿ, ಎರಡನೇ ಮೊಣ್ಣಂಗೇರಿ, ಅರೆಕಾಡು, ಹೊಸ್ಕೇರಿ, ಕೊಳಗದಾಲು, ಬಿ.ಬಾಡಗ, ಬೆಂಗೂರು, ಕಡಗದಾಳು, ಇಬ್ನಿವಳವಾಡಿ, ಕೋರಂಗಾಲ, ಚೇರಂಗಾಲ, ತಾವೂರು ಹಾಗೂ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಕೊಟ್ಟಮುಡಿ, ಕಣ್ಣಬಲಮುರಿ, ಚೆರಿಯಪರಂಬು, ಐಕೊಳ, ಮೇಕೇರಿ, ಯವಕಪಾಡಿ, ಮರಂದೋಡ, ಅರಪಟ್ಟು, ಕರಡ, ಕೊಕೇರಿ, ಚೇಲಾವರ, ನರಿಯಂದಡ, ಮಕ್ಕಂದೂರು, ಎಮ್ಮೆತ್ತಾಳು, ಮೇಘತ್ತಾಳು, ಉದಯಗಿರಿ, ಮುಕ್ಕೋಡ್ಲು, ಹಮ್ಮಿಯಾಳ, ಮುಟ್ಲು, ಕಾಲೂರು, ದೇವಸ್ತೂರು, ಹೆಬ್ಬೆಟ್ಟಗೇರಿ, ಗಾಳಿಬೀಡು, ಒಂದನೇ ಮೊಣ್ಣಂಗೇರಿ, ವಣಚಲಿಗೆ ಭೇಟಿ ನೀಡಲಿದೆ.
ಆರೋಗ್ಯ ತಂಡದ ಭೇಟಿ
ಸೋಮವಾರಪೇಟೆ ತಾಲೂಕಿನಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರದಂದು ಹಾನಗಲ್ಲು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು, ಶೆಟ್ಟಳ್ಳಿ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಚೌಡ್ಲು, ಗೌಡಳ್ಳಿ, ದೊಡ್ಡಮಲ್ತೆ, ಐಗೂರು, ಬೇಳೂರು, ಆಲೂರು ಸಿದ್ದಾಪುರ, ನೀರಗಳಲೆ. ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಏಳನೇ ಹೊಸಕೋಟೆ, ಸುಂಟಿಕೊಪ್ಪ, ಕೆದಕಲ್, ಕೊಡಗರಹಳ್ಳಿ, ಕಂಬಿಬಾಣೆ, ಶನಿವಾರಸಂತೆ, ನಿಡ್ತ, ಹಂಡ್ಲಿ, ದುಂಡಳ್ಳಿ, ಕೊಡ್ಲಿಪೇಟೆ, ಬೆಸೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ. ಪ್ರತಿಬುಧವಾರ ಮತ್ತು ಶನಿವಾರದಂದು ಮಾದಾಪುರ, ಗರ್ವಾಲೆ, ಕಿರಗಂದೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಡ್ಲಿಪೇಟೆ, ಕಟ್ಟೆಪುರ ಮೊದಲಾದ ಗ್ರಾಮಗಳಿಗೆ ತೆರಳಲಿದೆ.
ಡಾ.ರಾಜೇಶ್ ಮಾಹಿತಿ
ವಿರಾಜಪೇಟೆ ತಾಲೂಕಿನಲ್ಲಿ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಕರಡಿಗೋಡು, ಗುಹ್ಯ, ಬಿಟ್ಟಂಗಾಲ, ಬೇತ್ರಿ ಮತ್ತು ಕೊಂಡಂಗೇರಿ. ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಕುಟ್ಟ, ಕೆ.ಬಾಡಗ, ಹೊಸೂರು, ಅಮ್ಮತ್ತಿ ಮತ್ತು ಚೆನ್ನಯ್ಯನಕೋಟೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.